ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಪಟ ಸನ್ಯಾಸಿ ಎಂದು ಜರಿದಿದ್ದಾರೆ.
ಮಹಿಳಾ ಮೀಸಲಾತಿ ಬಗ್ಗೆ ಬಿಜೆಪಿಯದ್ದು ಕಪಟ ನಾಟಕ. ಅಸಲಿಗೆ ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್, ಮಹಿಳೆಯರ ಬಗ್ಗೆ ಏನು ಹೇಳಿದ್ದರು ಗೊತ್ತೇ ಎಂದು ಹಳೆಯದನ್ನು ಕೆದಕಿ ಈಗ ಟ್ವೀಟ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಬಿಜೆಪಿಗೆ ಈಗ ಇದ್ದಕ್ಕಿದ್ದಂತೆ ಏಕಾಏಕಿ ಮಹಿಳೆಯರ ಬಗ್ಗೆ ಕಾಳಜಿ ಬಂದಿದೆ. ಆ ಕಪಟ ನಾಟಕದ ಕಾಳಜಿಯನ್ನು ಈ ದೇಶದ ಮಹಿಳೆಯರು ನಂಬುವ ಸ್ಥಿತಿಯಲ್ಲಿ ಇಲ್ಲ. ಬಿಜೆಪಿಗೆ ನಿಜವಾಗಿಯೂ ಮಹಿಳೆಯರಿಗೆ ರಾಜಕೀಯ ಶಕ್ತಿ ತುಂಬುವ ಇಚ್ಛೆ ಇದ್ದಿದ್ದೇ ಆದರೆ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಶೇ 33 ಬೇಡ, ಕನಿಷ್ಠ ಶೇ 20 ಅಷ್ಟಾದರೂ ಮಹಿಳೆಯರಿಗೆ ಟಿಕೆಟ್ ನೀಡಿ ತಮ್ಮ ಕಾಳಜಿಯನ್ನು ನಿರೂಪಿಸಬಹುದಿತ್ತು, ಆದರೆ ಕೊಟ್ಟಿರುವುದು ಶೇ 11 ರಷ್ಟು ಮಹಿಳೆಯರಿಗೆ ಮಾತ್ರ ಎಂದಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯ ನೀತಿಪಾಠ ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
2010ರಲ್ಲಿ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿಯ ಬಿಲ್ ಮಂಡಿಸಿದ್ದಾಗ ಬಿಜೆಪಿಯ ಕಪಟ ಸನ್ಯಾಸಿ ಯೋಗಿ ಆದಿತ್ಯನಾಥ್ ಏನು ಹೇಳಿದ್ದರು ಗೊತ್ತೇ?
ಈ ಮಸೂದೆ ಜಾರಿಗೆ ಬಂದರೆ ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಮುಳುಗಿಸುತ್ತದೆ, ಪುರುಷರು ಸ್ತ್ರೀಯರ ಲಕ್ಷಣಗಳನ್ನು ಬೆಳೆಸಿಕೊಂಡರೆ ಅವರು ದೇವರಾಗುತ್ತಾರೆ, ಆದರೆ ಮಹಿಳೆಯರು ಪುರುಷತ್ವವನ್ನು ಬೆಳೆಸಿಕೊಂಡರೆ ಅವರು ರಾಕ್ಷಸರಾಗುತ್ತಾರೆ.. ಇದು ಬಿಜೆಪಿಯ ಯೋಗಿ ಅದಿತ್ಯನಾಥರ ಹೇಳಿಕೆ, ಮಹಿಳೆಯರು ರಾಜಕೀಯವಾಗಿ ಸಭಲರಾದರೆ ರಾಕ್ಷಸರಾಗುತ್ತಾರಂತೆ!
ಅಧಿತ್ಯನಾಥರ ಇನ್ನೂ ಒಂದು ಹೇಳಿಕೆ “ಮಹಿಳೆಯರು ಸ್ವತಂತ್ರವಾಗಿರಲು ಅನರ್ಹರು, ಅವರನ್ನು ರಕ್ಷಣೆಯಲ್ಲಿಡಬೇಕೆ ಹೊರತು ಸ್ವತಂತ್ರವಾಗಿ ಅಲ್ಲ ಎಂದು ಹಳೆಯ ಹೇಳಿಕೆಯನ್ನು ಈಗ ಚರ್ಚೆಗೆ ತಂದಿದ್ದಾರೆ.
ಬಿಜೆಪಿಯ ಮಾತೃಸಂಸ್ಥೆ RSSಗೆ ಮಹಿಳೆಯರ ಬಗ್ಗೆ ಯಾವ ಅಭಿಪ್ರಾಯ ಇದೆ ಎಂಬುದನ್ನು ಒಮ್ಮೆ ಕೇಳಿ, ಅವರ ಅಪ್ಪಣೆ ಪಡೆದು ನಂತರ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದರೆ ಒಳಿತು. ಮಹಿಳೆಯರು ಮನೆಯ ಹೊಸಿಲಿನ ಒಳಗೆಯೇ ಇರಬೇಕು, ಪುರುಷರು ಮಾತ್ರ ಹೊರಗಿನ ವ್ಯವಹಾರಗಳನ್ನು ನಿರ್ವಹಿಸಬೇಕು.
ಇದನ್ನು ಮೋಹನ್ ಬಾಗವತ್ ಎರಡೆರಡು ಬಾರಿ ಪ್ರತಿಪಾದಿಸಿದ್ದಾರೆ. ಬಿಜೆಪಿ, RSS ಮಾತು ಕೇಳುತ್ತದೆಯೇ? ಅಥವಾ ಧಿಕ್ಕರಿಸುತ್ತದೆಯೇ? ಇದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲೆಸದಿದ್ದಾರೆ.