ಮಧ್ಯಪ್ರದೇಶದ ಕಾಂಗ್ರೆಸ್ನ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವ ಕ್ರಮ ಅತ್ಯಂತ ಕಾನೂನುಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ನೂತನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದು ಒಂದು ವಿಶೇಷ ಪ್ರಕರಣವಾಗಿದ್ದು, ಕೇವಲ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಉದ್ದೇಶದಿಂದಲೇ ಅವರು ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ನಾವು ಶೀಘ್ರದಲ್ಲೇ ಹೈಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ವಿರುದ್ಧ ಖರ್ಗೆ ಗಂಭೀರ ಆರೋಪ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆ ಇಲ್ಲದೆ ಇಂತಹ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ ಎಂದು ನೇರವಾಗಿ ಗುಡುಗಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಮತ್ತು ತನ್ನ ಅಧಿಕಾರ ಬಳಸಿ ಎಲ್ಲೆಡೆ ಆರ್ಎಸ್ಎಸ್ ಕಾರ್ಯಕರ್ತರನ್ನು ತಂದು ಕೂರಿಸುತ್ತಿದೆ ಎಂದು ಆರೋಪಿಸಿದರು. ಇತ್ತೀಚೆಗೆ ಜಾರ್ಖಂಡ್ನಲ್ಲೂ ಇದೇ ರೀತಿಯ ರಾಜಕೀಯ ಹೈಡ್ರಾಮಾ ನಡೆದಿತ್ತು ಎಂದ ಅವರು, ಚುನಾವಣೆಗಳಲ್ಲಿ ಮತ ಖರೀದಿ ಮಾಡುವುದು, ಪಕ್ಷಗಳನ್ನು ವಿಭಜಿಸುವುದು ಮತ್ತು ತಮ್ಮದೇ ಏಜೆಂಟರನ್ನು ಇರಿಸುವುದು ಬಿಜೆಪಿಯ ಅಭ್ಯಾಸವಾಗಿದೆ ಎಂದರು.
ಆರ್ಎಸ್ಎಸ್ ನಿಯಂತ್ರಣದಲ್ಲಿದೆ ವ್ಯವಸ್ಥೆ
ಪ್ರಜಾಪ್ರಭುತ್ವದ ಯಾವುದೇ ಪ್ರಕ್ರಿಯೆಯಲ್ಲಾಗಲಿ ಇಂತಹ ರಾಜಕೀಯ ಹಸ್ತಕ್ಷೇಪ ಇರಬಾರದು. ಆದರೆ ಇಂದು ದೇಶದ ಎಲ್ಲಾ ಪ್ರಮುಖ ರಂಗಗಳಲ್ಲಿ, ಇಲಾಖೆಗಳಲ್ಲಿ ಆರ್ಎಸ್ಎಸ್ ಏಜೆಂಟ್ಗಳನ್ನು ತಂದು ಇರಿಸಲಾಗಿದೆ. ದುರಂತವೆಂದರೆ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಸರಿಯಾಗಿ ಪರಿಶೀಲಿಸಲು ಯಾರೂ ಸಿದ್ಧರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
13ನೇ ಬಾರಿ ಜನಪ್ರತಿನಿಯಾದ ಖರ್ಗೆ ಭಾವುಕ ನುಡಿ
ಇದೇ ಸಂದರ್ಭದಲ್ಲಿ ತಾವು 13ನೇ ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಬಗ್ಗೆ ಮಾತನಾಡಿದ ಖರ್ಗೆ, ತಮಗೆ ಸತತವಾಗಿ ಇಂತಹ ಮಹತ್ತರ ಅವಕಾಶಗಳು ಸಿಗುತ್ತಿರುವುದು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದರು. ಇಂದಿರಾಗಾಂಧಿಯವರಿಂದ ಹಿಡಿದು ಸೋನಿಯಾ ಗಾಂಧಿಯವರವರೆಗೆ ತಮಗೆ ಸದಾ ಅವಕಾಶಗಳನ್ನು ನೀಡುತ್ತಾ ಬಂದಿದ್ದಾರೆ. ರಾಹುಲ್ ಗಾಂಧಿ ಅವರು ಸಹ ತಮ್ಮ ಜೊತೆಯಲ್ಲಿದ್ದು ಪ್ರೋತ್ಸಾಹ ನೀಡುತ್ತಾ, ಅತ್ಯಂತ ಸೌಹಾರ್ದತೆಯಿಂದ ವರ್ತಿಸುತ್ತಾರೆ ಎಂದು ಸ್ಮರಿಸಿದ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಕಲಬುರ್ಗಿ ಜನತೆಗೆ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಅರ್ಪಿಸಿದರು.