96 ವಯಸ್ಸಿನ ಅಜ್ಜಿಯೊಬ್ಬರಿಗೆ ತನ್ನ ಕೊನೆಯ ದಿನಗಳನ್ನು ತಾನು ಹುಟ್ಟಿದ ಮನೆಯಲ್ಲಿ ಕಳೆಯುವ ಆಸೆಯಾಗಿದೆ. ಆದರೆ ಮಗಳು ಅವಕಾಶ ನೀಡದ ಕಾರಣ ಬೇಸರದಲ್ಲಿಯೇ ಅಜ್ಜಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿರುವ ಸಣ್ಣ ಮನೆಯಲ್ಲಿ, ಹಳೆಯ ನೆನಪುಗಳನ್ನೊಮ್ಮೆ ನೋಡಬೇಕು ಎಂದು ಅಜ್ಜಿ ಪಾರ್ವತಮ್ಮ ಆಸೆಪಟ್ಟಿದ್ದರು. ಆದರೆ ಆಸೆ ಫಲಿಸದ ಕಾರಣ ಸುಸ್ತಾಗಿ ಮನೆಯ ಮುಂದೆಯೇ ಮಲಗಿ ಅಜ್ಜಿ ಪ್ರಾಣಬಿಟ್ಟಿದ್ದಾರೆ.
ಗಂಡ ಸತ್ತ ಜಾಗದಲ್ಲೇ ನಾನು ಸಾಯಬೇಕು
ಪಾರ್ವತಮ್ಮಗೆ ನಾಲ್ಕು ಹೆಣ್ಣು, ನಾಲ್ಕು ಗಂಡುಮಕ್ಕಳು. ಈವರೆಗೂ ಮಗ ಮುತ್ತುರಾಜ್ ಮನೆಯಲ್ಲಿಯೇ ಇದ್ದ ಪಾರ್ವತಮ್ಮ ಇನ್ನೇನು ನನ್ನ ಕಡೆಗಾಲ ಬಂದಂತೆ ಅನಿಸುತ್ತಿದೆ. ನಾನು ಹುಟ್ಟಿ, ಬದುಕಿ, ಬೆಳೆದ ಮನೆಯಲ್ಲಿ ಕೆಲ ದಿನಗಳನ್ನು ಕಳೆಯಬೇಕು ಎಂದು ಕೇಳಿಕೊಂಡಿದ್ದರು. ಅದೇ ಮನೆಯಲ್ಲಿ ನನ್ನ ಗಂಡ ಪ್ರಾಣ ಬಿಟ್ಟಿದ್ದಾರೆ, ಅಲ್ಲಿಯೇ ನನ್ನ ಪ್ರಾಣವೂ ಹೋದರೆ ಗಂಡನನ್ನು ಸೇರುತ್ತೇನೆ ಎಂದು ಹೇಳುತ್ತಿದ್ದರು.
ಬಾಗಿಲ ಮುಂದೆಯೇ ಪ್ರಾಣ ಬಿಟ್ಟ ಪಾರ್ವತಮ್ಮ
ಮಗಳು ಉಮಾ ಮನೆಗೆ ಆಗಮಿಸಿದ ತಾಯಿಗೆ ಮನೆಯ ಒಳಕ್ಕೆ ನೋಡಲೂ ಸಿಗಲಿಲ್ಲ. ಬಾಗಿಲಿನಿಂದ ಹೊರಬಂದು ಮಾತನಾಡಿಸಿದ ಉಮಾ ಮನೆಯೊಳಗೆ ಬರಲು ಪರ್ಮಿಷನ್ ನೀಡಿಲ್ಲ. ಹೊರಗಿನಿಂದ ಮನೆಯ ಬೀಗ ಹಾಕಿಕೊಂಡು ಹೋಗಿದ್ದಾರೆ. ಆದರೂ ಜಗ್ಗದ ಅಜ್ಜಿ ಮನೆಯ ಬಾಗಿಲ ಬಳಿಯೇ ಎರಡು ದಿನಗಳು ಕಾಲ ಕಳೆದಿದೆ. ಉಳಿದ ಮಕ್ಕಳು ಅಮ್ಮನ ಜೊತೆ ಕಾಲ ಕಳೆದಿದ್ದಾರೆ. ಆದರೆ ಎರಡು ದಿನದ ನಂತರ ನಿತ್ರಾಣದಿಂದ ಪಾರ್ವತಮ್ಮ ಕೊನೆಯ ಉಸಿರನ್ನು ಎಳೆದಿದ್ದಾರೆ. ತಾಯಿಯ ಮನೆಯಲ್ಲೇ ಜೀವನ ಕಳೆಯುತ್ತಿರುವ ಉಮಾ, ಸಹಿ ಮಾಡಿಸಿಕೊಂಡು ಮೋಸ ಮಾಡಿದ್ದರು ಎಂದು ಉಳಿದ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಹೆತ್ತ ತಾಯಿಗೂ ಇಂಥ ಮಕ್ಕಳು ಸಿಗೋದು ಬೇಡ ಎಂದು ನೊಂದುಕೊಂಡಿದ್ದಾರೆ.
ಪಿಂಚಣಿ ಎಂದು ಹೇಳಿ ಆಸ್ತಿ ಪತ್ರಕ್ಕೆ ಸಹಿ
ಈ ಘಟನೆಗೆ ಇಡೀ ಗ್ರಾಮವೇ ಸಾಕ್ಷಿಯಾಗಿದೆ. ಉಮಾ ವೃದ್ಧೆಗೆ ಪಿಂಚಣಿ ಬರುತ್ತದೆ ಎಂದು ಹೇಳಿ ಆಸ್ತಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಆಸ್ತಿಯಿಂದಾಗಿ ಇಡೀ ಕುಟುಂಬ ದೂರಾಗಿದ್ದು, ತಾಯಿಯ ಸಾವಿನಲ್ಲೂ ಒಂದಾಗಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹುಟ್ಟಿದ ಮನೆಯಲ್ಲಿಯೇ ಕೊನೆದಿನಗಳನ್ನು ಕಳೆಯಲು ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಅಮ್ಮ ಸಾವು
WhatsApp Group
Join Now