ದಪ್ಪಗಿದ್ದಾಳೆಂದು ಪತ್ನಿಯನ್ನೇ ಕೊಂದ ಪಾಪಿ ಪತಿ ; ವಿಷಕ್ಕಾಗಿ 80,000 ರೂ. ಖರ್ಚು ಮಾಡಿದ್ದ ಕಿರಾತಕ.!

Spread the love

ಹೆಂಡತಿಯ ತೂಕ ಹೆಚ್ಚಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ, ಎಂಟು ವರ್ಷಗಳ ದಾಂಪತ್ಯವನ್ನು ಮರೆತು ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಕಡಪ ಜಿಲ್ಲೆಯಲ್ಲಿ ವರದಿಯಾಗಿದೆ. ‘ಸುಖಿ ಸಂಸಾರ’ ಎಂದು ಭಾವಿಸಿದ್ದ ನೆರೆಹೊರೆಯವರು ಈ ಕ್ರೌರ್ಯ ಕಂಡು ದಿಗಿಲುಗೊಂಡಿದ್ದಾರೆ.

ಘಟನೆಯ ಹಿನ್ನೆಲೆ : ಮನೆಯಳಿಯನಾಗಿದ್ದ ಕಿರಣ್

ಆಂಧ್ರದ ಮುದ್ದನೂರು ಮಂಡಲದ ಪದ್ಮಜಾ (31) ಮತ್ತು ಪ್ರೊದ್ದಟೂರಿನ ಭದ್ರಾಪಲ್ಲಿ ಕಿರಣ್ ಕುಮಾರ್ ಅವರು 2018ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಕಿರಣ್ ತನ್ನ ಪತ್ನಿಯ ಮನೆಯಲ್ಲೇ ನೆಲೆಯಾಗಿದ್ದನು (ಇಲ್ಲರಿಕಂ ಪದ್ಧತಿ). ಈ ದಂಪತಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ಕಿರಣ್ ಕಳೆದ ಐದು ವರ್ಷಗಳಿಂದ ‘ವರ್ಕ್ ಫ್ರಮ್ ಹೋಮ್’ ಮೂಲಕ ಕೆಲಸ ಮಾಡುತ್ತಿದ್ದನು.

ದ್ವೇಷಕ್ಕೆ ಕಾರಣವಾಯ್ತು ಹೆಂಡತಿಯ ಆಹಾರ ಪದ್ಧತಿ!

ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಿರಣ್‌ಗೆ ತನ್ನ ಪತ್ನಿ ಪದ್ಮಜಾ ದಿನದಿಂದ ದಿನಕ್ಕೆ ತೂಕ ಹೆಚ್ಚಿಸಿಕೊಳ್ಳುತ್ತಿರುವುದು ಅಸಮಾಧಾನ ತಂದಿತ್ತು. ಆಕೆ ಅತಿಯಾಗಿ ಜಂಕ್ ಫುಡ್ ಹಾಗೂ ಮಾಂಸಾಹಾರ ಸೇವಿಸುತ್ತಿದ್ದಾಳೆ ಎಂಬುದು ಕಿರಣ್‌ನ ಕ್ರೂರ ಆಕ್ರೋಶಕ್ಕೆ ಕಾರಣವಾಗಿತ್ತು. ಪತ್ನಿ ದಪ್ಪಗಾಗಿದ್ದಕ್ಕೆ ಅವಳಿಗೆ ಸಾವೇ ಶಿಕ್ಷೆ ಎಂದು ಆತ ನಿರ್ಧರಿಸಿದ್ದನು.

ಗೂಗಲ್‌ನಲ್ಲಿ ಕೊಲೆಗೆ ಸ್ಕೆಚ್: 80 ಸಾವಿರದ ವಿಷ ತರಿಸಿದ್ದ ಪಾಪಿ

ತನ್ನ ಪತ್ನಿಯನ್ನು ಕೊಲ್ಲಲು ಕಿರಣ್ ಅತ್ಯಂತ ಯೋಜಿತ ಸಂಚು ರೂಪಿಸಿದ್ದನು.: “ಹೆಂಡತಿಯನ್ನು ಕೊಲ್ಲುವುದು ಹೇಗೆ?” ಎಂದು ಗೂಗಲ್‌ನಲ್ಲಿ ಹುಡುಕಾಡಿದ್ದನು.ಒಂದು ವಿಡಿಯೋದಲ್ಲಿ ಸಿಕ್ಕ ಸಂಪರ್ಕ ಸಂಖ್ಯೆಯನ್ನು ಬಳಸಿ, ಬರೊಬ್ಬರಿ 80,000 ರೂಪಾಯಿ ನೀಡಿ ವಿಷವನ್ನು ಆರ್ಡರ್ ಮಾಡಿದ್ದನು.ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ಹೋಗಿ ತನ್ನ ತಂದೆ-ತಾಯಿಯ ಮನೆಯಲ್ಲೇ ಕೊಲೆ ಮಾಡಲು ನಿರ್ಧರಿಸಿದ್ದನು.

ಕೊಲೆ ನಡೆದ ರೀತಿ: ಸಿಹಿಯಲ್ಲಿ ವಿಷ, ನಂತರ ಉಸಿರುಗಟ್ಟಿಸಿ ಹತ್ಯೆ

ಏಪ್ರಿಲ್ 29ರಂದು ವಿಷದ ಪಾರ್ಸೆಲ್ ಬಂದ ತಕ್ಷಣ, ಕಿರಣ್ ಪದ್ಮಜಾಳಿಗೆ ಇಷ್ಟವಾದ ಪಾಲಕೋವ ಸಿಹಿಯಲ್ಲಿ ಅದನ್ನು ಬೆರೆಸಿ ತಿನ್ನಿಸಿದ್ದಾನೆ. ವಿಷದ ಪ್ರಭಾವದಿಂದ ಪದ್ಮಜಾ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ದಿಂಬಿನಿಂದ ಆಕೆಯ ಮುಖವನ್ನು ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆಕೆ ಸಾವನ್ನಪ್ಪಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ ಸುಮಾರು ಮೂರು ಗಂಟೆಗಳ ಕಾಲ ಆತ ಹೆಣದ ಪಕ್ಕದಲ್ಲೇ ಕುಳಿತು, ಬಳಿಕ ತನ್ನ ಪತ್ನಿಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

ಬಯಲಾಯ್ತು ಕಿರಾತಕನ ಕೃತ್ಯ

ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವೈದ್ಯಕೀಯ ವರದಿಯಲ್ಲಿ ವಿಷ ಸೇವನೆ ಮತ್ತು ಉಸಿರುಗಟ್ಟಿಸಿರುವುದು ದೃಢಪಟ್ಟಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಕಿರಣ್ ತನ್ನ ಪತ್ನಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಈ ಘೋರ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಸೌಂದರ್ಯದ ಹೆಸರಿನಲ್ಲಿ ಮಾನವೀಯತೆ ಮರೆತು ನಡೆಯುತ್ತಿರುವ ಇಂತಹ ಘಟನೆಗಳು ಸಮಾಜದ ವಿಕೃತ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತಿವೆ.

WhatsApp Group Join Now

Spread the love

Leave a Reply