ನನಗೆ ಬಿಜೆಪಿಗೆ ಬರುವಂತೆ ಯಾರೂ ಆಫರ್ ಮಾಡಿಲ್ಲ. ರಾಜಕೀಯವಾಗಿ ಕುಗ್ಗಿಸುವ ಪ್ಲಾನ್ ಇರಬಹುದು ಎಂದು ತಮ್ಮ ಮನೆ ಹಾಗೂ ಕಚೇರಿ ಮೇಲೆ ಇ.ಡಿ.ದಾಳಿ ನಡೆದ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ವಿವರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ ಅಧಿಕಾರಿಗಳು ಯಾವಾಗ ನೋಟಿಸ್ ಕೊಡುತ್ತಾರೋ ನೋಡೋಣ. ವಿರೋಧಿಗಳನ್ನು ಕಂಡುಹಿಡಿಯುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
“ನನ್ನ ವಿರುದ್ಧ ಯಾರು ದೂರು ಕೊಟ್ಟಿದ್ದಾರೆ ಅಂತ ಗೊತ್ತಾಗಬೇಕಿದೆ. ಇದರ ಹಿಂದೆ ಸ್ವಪಕ್ಷದವರು ಇದ್ದಾರೆಯೇ ಅಥವಾ ಬೇರೆಯವರು ಇದ್ದಾರೆಯೇ ಅಂತ ಕಂಡುಹಿಡಿಯಬೇಕಿದೆ. ಮುಂದಿನ ದಿನಗಳಲ್ಲಿ ಕಂಡುಹಿಡಿಯೋಣ. ನಂತರ ಮಾತನಾಡೋಣ. ವಾಲ್ಮೀಕಿ ನಾಯಕ ಅಂತ ಟಾರ್ಗೆಟ್ ಆದಂತಿದೆ. ಸಚಿವ ನಾಗೇಂದ್ರ ಬಳಿಕ ಇದು ಆಗಿದೆ. ವಾಲ್ಮೀಕಿ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದೇವೆ. ಅದು ಕಾರಣವೇ ನೋಡಬೇಕಿದೆ’ ಎಂದು ಹೇಳಿದರು.
“ನಾನು ಹತ್ತು ವರ್ಷಗಳಿಂದ ವಿದೇಶಕ್ಕೆ ಹೋಗುತ್ತಿದ್ದೇನೆ. ಗಣಿಗಾರಿಕೆ ಮಾಡಲು ನನಗೆ ಉತ್ಸಾಹ ಇದೆ. ಅದಕ್ಕಾಗಿ ಹೂಡಿಕೆ ಮಾಡಲು ಹುಡುಕಾಟ ನಡೆಸಿದ್ದೇನೆ. ಮಾತುಕತೆ ನಡೆದಿದೆ ಹೊರತು, ಇನ್ನೂ ಯಾವುದೂ ಒಪ್ಪಂದ ಅಥವಾ ಅಂತಿಮವಾಗಿಲ್ಲ. ಆದರೆ, ಜಾರಿ ನಿರ್ದೇಶನಾಲಯದವರು ಈಗಾಗಲೇ ಹೂಡಿಕೆ ಮಾಡಿದ್ದೀನಿ ಅಂತ ಹೇಳುತ್ತಿದ್ದಾರೆ’ ಎಂದು ತಿಳಿಸಿದರು. ಇ.ಡಿ. ದಾಳಿ ಬೆನ್ನಲ್ಲೇ ಸತೀಶ ಜಾರಕಿಹೊಳಿ ಅವರನ್ನು ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರ ದಂಡು ಮತ್ತು ಕೆಲ ಶಾಸಕರು ಭೇಟಿ ಮಾಡಿ ಧೈರ್ಯ ತುಂಬಿದರು.
ಇನ್ನೂ ಮೂರ್ನಾಲ್ಕು ಜನ ಗುರಿಯಾಗುವ ಸಾಧ್ಯತೆ
ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಮಾತ್ರವಲ್ಲ; ಇನ್ನೂ ಮೂರ್ನಾಲ್ಕು ಜನ ಗುರಿಯಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರು ಜಾರಕಿಹೊಳಿ ಮನೆ ಮೇಲೆ ಇ.ಡಿ. ದಾಳಿ ಕುರಿತು ಪ್ರಶ್ನಿಸಿದಾಗ, ಇದು ರಾಜಕೀಯವಾಗಿ ನಡೆಯುತ್ತಿರುವ ಬೆಳವಣಿಗೆ. ಕಾಂಗ್ರೆಸ್ ನಾಯಕರನ್ನು ಹಾಗೂ ಕೇಂದ್ರದ ಪ್ರತಿಪಕ್ಷದವರನ್ನು ಸರಕಾರ ಗುರಿ ಮಾಡುತ್ತಿದೆ. ಇನ್ನೂ ಮೂರು-ನಾಲ್ಕು ಜನರನ್ನು ಗುರಿ ಮಾಡುವ ಸಾಧ್ಯತೆ ಇದೆ ಎಂಬ ಅರಿವು ನನಗಿದೆ ಎಂದರು.
ಬಿಜೆಪಿ ಪ್ರೇರಿತ ಅಲ್ಲ
ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಪ್ರಕರಣಗಳಲ್ಲಿ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅವಶ್ಯಕತೆ ಯಾರಿಗೂ ಇಲ್ಲ. ಇ.ಡಿ. ಸಾಂವಿಧಾನಿಕ ಸ್ವತಂತ್ರ ಸಂಸ್ಥೆ ತನ್ನ ಕೆಲಸ ನಿರ್ವಹಿಸಿದ್ದು, ಇದನ್ನು ರಾಜಕೀಕರಣಗೊಳಿಸುವುದು ಸರಿ ಅಲ್ಲ, ಬಿಜೆಪಿ ಪ್ರೇರಿತ ದಾಳಿ ಅಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿಗೆ ಬರುವಂತೆ ಯಾರೂ ಆಫರ್ ಮಾಡಿಲ್ಲ : ಸತೀಶ್ ಜಾರಕಿಹೊಳಿ
WhatsApp Group
Join Now