ಅನ್ನಭಾಗ್ಯ ಕೆವೈಸಿ, ಗೃಹಲಕ್ಷ್ಮೀ ಪರಿಷ್ಕರಣೆಯಂತೆಯೇ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ಸರ್ವೇಗೆ ಕೊಟ್ಟಿದ್ದ ಅವಧಿ ಇನ್ನೂ 5 ದಿನ ಮಾತ್ರ ಬಾಕಿ ಇದೆ. ಮೈಸೂರಲ್ಲಿ ಲಕ್ಷಕ್ಕೂ ಹೆಚ್ಚು ಮನೆಗಳ ಸರ್ವೇ ಬಾಕಿ ಇದ್ದು, ನೋಟಿಸ್ ಅಂಟಿಸಿದ ಮನೆಯವರು, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ. ಇಲ್ಲವಾದಲ್ಲಿ ಉಚಿತ 200 ಯೂನಿಟ್ ಕರೆಂಟ್ ಸೌಲಭ್ಯದಿಂದ ವಂಚಿತರಾಗುತ್ತಾರೆ.
ಮೈಸೂರು : ನೈಜ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರಕಾರ ಹಮ್ಮಿಕೊಂಡಿರುವ ಮರು ಸಮೀಕ್ಷೆ ಕಾರ್ಯ ಮುಕ್ತಾಯಗೊಳ್ಳಲು ಕೇವಲ ಐದು ದಿನ ಬಾಕಿ ಉಳಿದಿವೆ.
200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸುವ ಅರ್ಹ ಗೃಹ ಬಳಕೆದಾರರಿಗೆ ಸರಕಾರ ಸಬ್ಸಿಡಿ ನೀಡುವ ಮೂಲಕ ವಿದ್ಯುತ್ ಬಿಲ್ ಭಾರ ಕಡಿಮೆ ಮಾಡುವುದು ಗೃಹಜ್ಯೋತಿ ಯೋಜನೆಯಾಗಿದೆ. ಈ ಸೌಲಭ್ಯಕ್ಕೆ ಅರ್ಹರಲ್ಲದವರು ಅಥವಾ ತಪ್ಪಾಗಿ ಸೇರಿರುವ ಸಂಪರ್ಕಗಳನ್ನು ಗುರುತಿಸಿ, ಸಬ್ಸಿಡಿಯನ್ನು ನೈಜ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸುವ ಉದ್ದೇಶದಿಂದ 2026ರ ಜು. 1ರಿಂದ ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆ ಆರಂಭಿಸಲಾಗಿದೆ. ಸರಕಾರದ ಆದೇಶದಂತೆ ಎರಡು ತಿಂಗಳಲ್ಲಿ ಪರಿಶೀಲನೆ ಮುಕ್ತಾಯಗೊಳಿಸಬೇಕಿದೆ. ಅದರಂತೆ ಆ. 31ಕ್ಕೆ ಕಾಲಾವಕಾಶ ಮುಕ್ತಾಯಗೊಳ್ಳಲಿದೆ.
ಆರಂಭದಲ್ಲಿ ಸೆಸ್ಕ್ ಸಿಬ್ಬಂದಿ ವಿದ್ಯುತ್ ಬಳಕೆದಾರರ ಮನೆ ಮನೆಗೆ ತೆರಳಿ ಮರು ಸಮೀಕ್ಷೆ ನಡೆಸಿದರು. ಆ.24 ಅಂತ್ಯಕ್ಕೆ ಜಿಲ್ಲೆಯಲ್ಲಿ ಶೇ. 84ರಷ್ಟು ಮರು ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲಾದ್ಯಂತ 7.65 ಲಕ್ಷ ಫಲಾನುಭವಿಗಳಿದ್ದು, ಈವರೆಗೆ 6.48 ಲಕ್ಷ ಮಂದಿ ಪರಿಶೀಲನೆಗೆ ಒಳಪಟ್ಟಿದ್ದಾರೆ. 1.17 ಲಕ್ಷ ಫಲಾನುಭವಿಗಳು ತಮ್ಮ ದಾಖಲೆಗಳನ್ನು ನೀಡಿ ಮರು ಪರಿಶೀಲನೆಗೆ ಒಳಪಡಬೇಕಿದೆ. ಇಲ್ಲವಾದಲ್ಲಿ ಇವರು ಯೋಜನೆಯಿಂದ ಹೊರಗುಳಿಯಲಿದ್ದಾರೆ.
ಅವಧಿ ವಿಸ್ತರಣೆ ಸಾಧ್ಯತೆ:
ಅಂತೆಯೇ ಕೆಲ ವಾರಗಳಿಂದ ಬಾಕಿ ಉಳಿದಿರುವ ಬಳಕೆದಾರರ ಮನೆಗಳಿಗೆ ನೋಟಿಸ್ ಅಂಟಿಸಿ ಬರಲಾಗುತ್ತಿದೆ. ಇಂತವರು ತಮ್ಮ ವ್ಯಾಪ್ತಿಯ ಸೆಸ್ಕ್ ಕಚೇರಿಗೆ ತೆರಳಿ ಪರಿಶೀಲನೆ ಮಾಡಿಸಿಕೊಳ್ಳಬೇಕಿದೆ. ಆರು ದಿನಗಳಲ್ಲಿ 1.17 ಲಕ್ಷ ಫಲಾನುಭವಿಗಳ ನೋಂದಣಿ ಸಾಧ್ಯವಾಗದಿದ್ದರೆ ಸರಕಾರ ಅವಧಿ ವಿಸ್ತರಿಸುವ ಸಾಧ್ಯತೆ ಇದೆ. ಅರ್ಹರಿಗೆ ಎಂದಿನಂತೆ ನಿಗದಿಯಾಗಿದ್ದ ಸಬ್ಸಿಡಿ ದೊರೆಯಲಿದೆ ಎಂದು ಸೆಸ್ಕ್ ಪ್ರಧಾನ ವ್ಯವಸ್ಥಾಪಕ ಬಸವರಾಜು ತಿಳಿಸಿದರು.
ಮರು ಪರಿಶೀಲನೆ ಉದ್ದೇಶ
• ಅಸಮರ್ಪಕ ನೋಂದಣಿ ಪತ್ತೆ ಮಾಡುವುದು
• ಅನರ್ಹ ಸಂಪರ್ಕ ಗುರುತಿಸುವುದು
• ದಾಖಲೆಗಳ ಹೊಂದಾಣಿಕೆ ಪರಿಶೀಲಿಸುವುದು
• ಸಬ್ಸಿಡಿಯ ದುರ್ಬಳಕೆ ತಡೆಯುವುದು
ಪರಿಶೀಲನೆಗೆ ಒದಗಿಸಬೇಕಾದ ದಾಖಲೆಗಳು
• ವಿದ್ಯುತ್ ಬಿಲ್
• ಖಾತೆ ಸಂಖ್ಯೆ
• ಆಧಾರ್ ಸಂಬಂಧಿತ ವಿವರ
• ಫಲಾನುಭವಿಯ ಗುರುತಿನ ದಾಖಲೆ
• ವಿಳಾಸಕ್ಕೆ ಸಂಬಂಧಿಸಿದ ದಾಖಲೆ
• ಅಗತ್ಯವಿದ್ದರೆ ಇತರೆ ಗುರುತಿನ,
ವಾಸದ ದಾಖಲೆ ಫಲಾನುಭವಿಗಳ ಲೆಕ್ಕಾಚಾರ ಹೇಗೆ?
ವಸತಿ ಉದ್ದೇಶದ ವಿದ್ಯುತ್ ಸಂಪರ್ಕ ಹೊಂದಿರುವ, ನಿಗದಿತ ಬಳಕೆ ಮಿತಿಯೊಳಗಿರುವ, ವಿದ್ಯುತ್ ಖಾತೆಗೆ ಆಧಾರ್ ಲಿಂಕ್ ಮಾಡಿರುವ ರಾಜ್ಯದ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. 2022-23ರ ಸರಾಸರಿ ಮಾಸಿಕ ಬಳಕೆಯನ್ನು ಆಧಾರವಾಗಿಟ್ಟುಕೊಂಡು, ಅದಕ್ಕೆ ಶೇ. 10ರಷ್ಟು ಹೆಚ್ಚುವರಿ ಬಳಕೆಗೆ ಅವಕಾಶ ನೀಡಲಾಗಿದೆ. ಈ ಸರಾಸರಿ ಬಳಕೆ 200 ಯೂನಿಟ್ಗಿಂತ ಕಡಿಮೆ ಇರಬೇಕು. 200 ಯೂನಿಟ್ ಮೀರಿದರೆ ಸಂಪೂರ್ಣ ಬಿಲ್ ಉಚಿತವಾಗುವುದಿಲ್ಲ. ಅಂತವರು ಅರ್ಹ ಮಿತಿಗಿಂತ ಹೆಚ್ಚಿನ ಬಳಕೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ಮನೆಯ ಆಧಾರಿತ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ, ಶೇ.10 ಹೆಚ್ಚುವರಿ ಅವಕಾಶದೊಂದಿಗೆ ಸುಮಾರು 110 ಯೂನಿಟ್ವರೆಗೆ ಸಬ್ಸಿಡಿ ಮಿತಿ ಅನ್ವಯಿಸಬಹುದು.
ಸರಕಾರದ ಆದೇಶದಂತೆ ಗೃಹಜ್ಯೋತಿ ಯೋಜನೆ ಮರುಪರಿಶೀಲನೆ ನಡೆಸಲಾಗುತ್ತಿದೆ. ಅರ್ಹರಿಗೆ ಈ ಹಿಂದಿನ ನಿಯಮದಂತೆ ಸಬ್ಸಿಡಿ ಸಿಗುತ್ತದೆ. ಅನರ್ಹರ ಬಗ್ಗೆ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.
– ಎ.ಸುನೀಲ್ ಕುಮಾರ್, ಅಧೀಕ್ಷಕ ಎಂಜಿನಿಯರ್, ಸೆಸ್ಕ್.
ಗೃಹಜ್ಯೋತಿ ಮರು ಸರ್ವೆಗೆ 5 ದಿನ ಬಾಕಿ: ಅನರ್ಹರಿಗೆ ಯೋಜನೆ ಸ್ಥಗಿತ, ಮೈಸೂರಲ್ಲಿ ಸಮೀಕ್ಷೆ ಅವಧಿ ವಿಸ್ತರಿಸಬೇಕಾದ ಅನಿವಾರ್ಯತೆ!
WhatsApp Group
Join Now