ತಮಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ‘ರಾಜಕೀಯ ಪಕ್ಷ’ಕ್ಕೆ ನೋಂದಣಿ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ತಿಳಿಸಿ ಎಂದು ಅವರು ಬಿಜೆಪಿಗೆ ವ್ಯಂಗ್ಯವಾಡಿದ್ದಾರೆ.
ಫೇಸ್ಬುಕ್ನಲ್ಲಿ ತಮಗೆ ಕೊಲೆ ಬೆದರಿಕೆ ಒಡ್ಡಿದ್ದ ಸುಧೀರ್ ಬಂಗೇರ ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ ಬೆನ್ನಲ್ಲೇ ಗೃಹ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನನ್ನು ಗುರಿಯಾಗಿಸಲು ಮತ್ತು ಹೆದರಿಸಲು ಬಿಜೆಪಿ ಸಂಘಟನೆಯ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ‘ಆರ್ಎಸ್ಎಸ್ ಇನ್ನು ಮುಂದಾದರೂ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳಲು ಸಿದ್ಧತೆ ನಡೆಸಬೇಕು’ ಎಂದು ಸಲಹೆ ನೀಡಿದ್ದಾರೆ.
ತಮಗೆ ಬಂದ ಬೆದರಿಕೆಯ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ‘ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು ಇನ್ನು 48 ಗಂಟೆಗಳೂ ಕಳೆದಿಲ್ಲ. ಅಷ್ಟರಲ್ಲೇ ನಿಮ್ಮ ಭಯ, ಆತಂಕ ಮತ್ತು ಆಕ್ರೋಶ ಎಲ್ಲವೂ ಹೊರಬರುತ್ತಿದೆ. ನನ್ನನ್ನು ನಿಂದಿಸಲು ಮತ್ತು ಜೀವ ಬೆದರಿಕೆ ಹಾಕಲು ನೀವು ಈಗಾಗಲೇ ಆರ್ಎಸ್ಎಸ್ ಅನ್ನು ಬಳಸಿಕೊಳ್ಳಲು ಆರಂಭಿಸಿದ್ದೀರಿ. ನಿಮಗೇನು ಮಾಡಲು ಸಾಧ್ಯವೋ ಅದನ್ನು ಮಾಡಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಸಂಘಟನೆಗೆ ನನ್ನ ವಂದನೆಗಳನ್ನು ತಿಳಿಸಿ ಹಾಗೂ ನಿಮ್ಮ ರಾಜಕೀಯ ಪಕ್ಷದ ನೋಂದಣಿಗೆ ಬೇಕಾದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಹೇಳಿ’ ಎಂದು ಟ್ವೀಟ್ ಮಾಡಿದ್ದಾರೆ.