ಆರ್ಎಸ್ಎಸ್ನ ಕಾನೂನಾತ್ಮಕ ಸ್ಥಾನಮಾನ ಹಾಗೂ ನೋಂದಣಿ (Registration) ಕುರಿತು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಸುದೀರ್ಘ ಪತ್ರಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದಲ್ಲಿ ನಡೆಯುತ್ತಿರುವ ಸಂಘದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿರುವ ಅವರು, ಕರ್ನಾಟಕ ಸರ್ಕಾರದ ಇಂತಹ ರಾಜಕೀಯ ಪ್ರೇರಿತ ಪ್ರಶ್ನೆಗಳಿಗೆ ನಾವು ಉತ್ತರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನುಮಾನ ಮೂಡಿಸಲು ಮಾಡುವ ಬೂಟಾಟಿಕೆ
ಕರ್ನಾಟಕ ಸರ್ಕಾರದ ಪ್ರಶ್ನೆ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ವಾಗ್ದಾಳಿ ನಡೆಸಿರುವ ಮೋಹನ್ ಭಾಗವತ್, ಸಂಘ ಆರಂಭವಾದ 10-15 ವರ್ಷಗಳಲ್ಲೇ ಇಂತಹ ಅನೇಕ ಪ್ರಶ್ನೆಗಳು ನಮ್ಮ ಮುಂದೆ ಉದ್ಭವವಾಗಿದ್ದವು. ಆಗಲೇ ನಾವು ಇಂತಹ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಎದುರಿಸಿ ನಿಂತಿದ್ದೇವೆ. ಪ್ರಸ್ತುತ ರಾಜಕೀಯ ಲಾಭಕ್ಕಾಗಿ ಹಾಗೂ ಸಾರ್ವಜನಿಕರಲ್ಲಿ ಸಂಘದ ಬಗ್ಗೆ ಅನಗತ್ಯ ಅನುಮಾನ ಮೂಡಿಸುವ ದೃಷ್ಟಿಯಿಂದ ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತೆ . ಹಾಗಾಗಿ ನಾವು ಎಲ್ಲದಕ್ಕೂ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಹಣದ ಅವಶ್ಯಕತೆ ಇರುವವರು ರಿಜಿಸ್ಟರ್ ಮಾಡಿಸಿಕೊಳ್ಳಲಿ, !
ಆರ್ಎಸ್ಎಸ್ ಏಕೆ ನೋಂದಣಿಯಾಗಿಲ್ಲ ಎಂಬ ಪ್ರಶ್ನೆಗೂ ಭಾಗವತ್ ಉತ್ತರ ಕೊಟ್ಟಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಬ್ರಿಟಿಷರ ಕಾಲದಲ್ಲೇ (100 ವರ್ಷಗಳ ಮುನ್ನ) ಆರಂಭವಾಗಿತ್ತು. ಸಂಘದ ಚಟುವಟಿಕೆಗಳಿಗೆ ದೇಶದಲ್ಲಿ ಯಾವುದೇ ಕಾನೂನಾತ್ಮಕ ನಿರ್ಬಂಧಗಳಿಲ್ಲ. ಮೂಲತಃ ಹಿಂದೂ ಧರ್ಮವೇ ಎಲ್ಲೂ ರಿಜಿಸ್ಟರ್ ಆಗಿಲ್ಲ. ಸಮಾಜದಲ್ಲಿ ಅನೇಕ ಉದಾತ್ತ ವಿಚಾರಗಳು ಮತ್ತು ವ್ಯವಸ್ಥೆಗಳು ರಿಜಿಸ್ಟರ್ ಆಗಬೇಕಾದ ಅನಿವಾರ್ಯತೆ ಇಲ್ಲ. ಲೋಕದಲ್ಲಿ ಯಾವ ಸಂಸ್ಥೆ ಅಥವಾ ಸಂಘಟನೆಗೆ ಸರ್ಕಾರದ ಹಣದ (ಅನುದಾನ) ಅವಶ್ಯಕತೆ ಇರುತ್ತದೆಯೋ, ಅವರು ಸಾಮಾನ್ಯವಾಗಿ ರಿಜಿಸ್ಟರ್ ಮಾಡಿಸಿಕೊಳ್ಳುತ್ತಾರೆ. ಆದರೆ ಆರ್ಎಸ್ಎಸ್ಗೆ ಅಂತಹ ಯಾವುದೇ ಆರ್ಥಿಕ ಅಥವಾ ಹಣದ ಅವಶ್ಯಕತೆ ಇಲ್ಲ.
ನೂರು ವರ್ಷಗಳಲ್ಲಿ ಯಾರೂ ಕೇಳದ ಪ್ರಶ್ನೆ ಈಗೇಕೆ.?
ದೇಶದಲ್ಲಿ ನಮ್ಮ ಸಂಘಟನೆ ಇದೆ ಎಂಬುದು ಸ್ವತಃ ಸರ್ಕಾರಕ್ಕೂ ಚೆನ್ನಾಗಿ ಗೊತ್ತು. ಹಿಂದೆ ಸರ್ಕಾರವು ರಾಜಕೀಯ ದ್ವೇಷದಿಂದ ಎರಡು ಬಾರಿ ಆರ್ಎಸ್ಎಸ್ ಅನ್ನು ಬ್ಯಾನ್ (ನಿಷೇಧ) ಕೂಡ ಮಾಡಿತ್ತು. ಆದರೆ ಕಳೆದ ನೂರು ವರ್ಷಗಳ ಇತಿಹಾಸದಲ್ಲಿ ಯಾರೂ ಕೂಡ ಆರ್ಎಸ್ಎಸ್ ಅನ್ನು ರಿಜಿಸ್ಟರ್ ಮಾಡಬೇಕು ಎಂದು ಹೇಳಿರಲಿಲ್ಲ ಎಂದು ಭಾಗವತ್ ನೆನಪಿಸಿದ್ದಾರೆ.
ಸಾರ್ವಜನಿಕರ ಮುಂದೆಯೇ ನಮ್ಮ ಚಟುವಟಿಕೆ
ಸಂಘದ ಪಾರದರ್ಶಕತೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರಿಗೆ ಉತ್ತರಿಸಿದ ಅವರು, ನಮ್ಮ ಕಾರ್ಯಕರ್ತರು ಯಾವುದೇ ರಹಸ್ಯ ಜಾಗದಲ್ಲಿಲ್ಲ, ಅವರು ಸ್ಥಳೀಯವಾಗಿ ಜನರ ಮಧ್ಯೆಯೇ ಇರುತ್ತಾರೆ. ಸಂಘದ ಸ್ವಯಂಸೇವಕರು ಪ್ರತಿದಿನ ಮೈದಾನಗಳಲ್ಲಿ ಶಾಖೆ ನಡೆಸುವುದನ್ನು ಇಡೀ ದೇಶದ ಜನತೆ ಕಣ್ಣಾರೆ ನೋಡಿರುತ್ತಾರೆ. ನಮ್ಮ ಎಲ್ಲಾ ಚಟುವಟಿಕೆಗಳು ಸಾರ್ವಜನಿಕ ಸ್ಥಳಗಳಲ್ಲೇ ಅತ್ಯಂತ ಪಾರದರ್ಶಕವಾಗಿ ನಡೆಯುತ್ತವೆ. ಹೀಗಿರುವಾಗ ಮುಚ್ಚಿಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.