ನಾನು ಆಹಾರ ಇಲಾಖೆ ಸಚಿವನಾಗಿ ಚಾರ್ಜ್ ತೆಗೆದುಕೊಳ್ಳಲ್ಲ : ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ

Spread the love

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟದ ಖಾತೆ ಹಂಚಿಕೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ತಮಗೆ ನಿರೀಕ್ಷಿತ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಇಂದು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಈ ಹಠಾತ್ ಬೆಳವಣಿಗೆಯ ಬೆನ್ನಲ್ಲೇ ಮತ್ತೊಬ್ಬ ಹಿರಿಯ ಮುಖಂಡ ಹಾಗೂ ಸಚಿವ ಕೆ.ಎಚ್. ಮುನಿಯಪ್ಪ ಕೂಡ ಬಹಿರಂಗವಾಗಿಯೇ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.

ಸೀನಿಯಾರಿಟಿಗೆ ಸಿಗದ ಬೆಲೆ: ಮುನಿಯಪ್ಪ ಬೇಸರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಪಕ್ಷದಲ್ಲಿ ಹಿರಿಯ ನಾಯಕರಿಗೆ ಸರಿಯಾದ ಗೌರವ ಮತ್ತು ಆದ್ಯತೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. “ನಾನು ಕಳೆದ 56 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಟ್ಟಾಳಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಆದರೆ ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಸೀನಿಯಾರಿಟಿಯನ್ನು (ಹಿರಿತನ) ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ” ಎಂದು ಅವರು ನೇರವಾಗಿಯೇ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಆಹಾರ ಇಲಾಖೆ ಚಾರ್ಜ್ ತೆಗೆದುಕೊಳ್ಳಲು ನಿರಾಕರಣೆ

ತಮಗೆ ಹಂಚಿಕೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುನಿಯಪ್ಪ, ತಾವು ಈ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದರು. “ರಾಮಲಿಂಗಾರೆಡ್ಡಿ ಮತ್ತು ನಾನು ಪಕ್ಷದಲ್ಲಿ ಅತ್ಯಂತ ಹಿರಿಯರು, ಇಬ್ಬರೂ 7 ರಿಂದ 8 ಬಾರಿ ಗೆದ್ದು ಬಂದಿದ್ದೇವೆ. ಇಂತಹ ಸನ್ನಿವೇಶದಲ್ಲಿ ನನಗೆ ನೀಡಿರುವ ಇಲಾಖೆಯ ಬಗ್ಗೆ ತೃಪ್ತಿಯಿಲ್ಲ. ಹಾಗಾಗಿ ನನಗೆ ಆಹಾರ ಇಲಾಖೆಯಲ್ಲಿ ಚಾರ್ಜ್ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಖಡಕ್ ಆಗಿ ನುಡಿದರು.

ಕೃಷಿ ಖಾತೆಗೆ ಪಟ್ಟು ಹಿಡಿದಿದ್ದ ಹಿರಿಯ ನಾಯಕ ಖಾತೆ

ಹಂಚಿಕೆಯ ಪೂರ್ವದಲ್ಲಿ ತಮಗೆ ಯಾವ ಇಲಾಖೆ ಬೇಕು ಎಂಬುದನ್ನು ಮುನಿಯಪ್ಪ ಅವರೇ ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ. “ನಾನು ಕೃಷಿ ಖಾತೆಯನ್ನು ನೀಡುವಂತೆ ಪಕ್ಷದ ನಾಯಕರಲ್ಲಿ ಬೇಡಿಕೆ ಇಟ್ಟಿದ್ದೆ. ಕೃಷಿ ಇಲಾಖೆಯ ಮೂಲಕ ರೈತರಿಗೆ ಹಾಗೂ ಜನರಿಗೆ ಹೆಚ್ಚಿನ ಸೇವೆ ಸಲ್ಲಿಸುವ ಹಂಬಲ ನನಗಿತ್ತು. ಆದರೆ ನನ್ನ ಬೇಡಿಕೆಯನ್ನು ಬದಿಗೊತ್ತಿ ಆಹಾರ ಖಾತೆಯನ್ನು ನೀಡಲಾಗಿದೆ. ನನಗಿಷ್ಟವಿಲ್ಲದ ಖಾತೆ ನೀಡಿರುವುದಕ್ಕೆ ಖಂಡಿತವಾಗಿಯೂ ಬೇಸರವಿದೆ” ಎಂದು ಮುನಿಯಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರಾಜೀನಾಮೆ ಇಲ್ಲ, ಪಕ್ಷದಲ್ಲೇ ಉಳಿಯುವ ನಿರ್ಧಾರ

ರಾಮಲಿಂಗಾರೆಡ್ಡಿ ಅವರ ಹಾದಿಯಲ್ಲೇ ಮುನಿಯಪ್ಪ ಕೂಡ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ಸದ್ಯಕ್ಕೆ ಅಂತಹ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. “ಖಾತೆ ಹಂಚಿಕೆಯಿಂದ ನನಗೆ ತೀವ್ರ ಬೇಸರವಾಗಿರುವುದು ನಿಜ. ಆದರೆ ಯಾವುದೇ ಕಾರಣಕ್ಕೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿದು ನನ್ನ ಹೋರಾಟ ಮಾಡಲಿದ್ದೇನೆ” ಎಂದು ಹೇಳುವ ಮೂಲಕ ಸದ್ಯಕ್ಕೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

WhatsApp Group Join Now

Spread the love

Leave a Reply