ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರಕ್ಕೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಬಂಡಾಯ ಬಣವನ್ನು ಸೇರಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಪಿ. ಚಿದಂಬರಂ (Karti Chidambaram) ಎಚ್ಚರಿಕೆ ನೀಡಿದ್ದಾರೆ.
ಈ ರೀತಿಯಾಗಿ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಸರ್ಕಾರವನ್ನು ರಾಜಕೀಯವಾಗಿ ದುರ್ಬಲಗೊಳಿಸಿದಂತಾಗುತ್ತದೆ ಮತ್ತು ಮುಖ್ಯಮಂತ್ರಿಯ ಸಾರ್ವಜನಿಕ ಇಮೇಜ್ಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಎಡಪಕ್ಷಗಳು, ಐಯುಎಂಎಲ್ ಮತ್ತು ಎಐಎಡಿಎಂಕೆಯ ಬಂಡಾಯ ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತ ಪರೀಕ್ಷೆಯನ್ನು ಗೆದ್ದು, ಹೊಸದಾಗಿ ರಚನೆಯಾಗಿರುವ ಆಡಳಿತವು ಅಧಿಕಾರಕ್ಕೆ ಬಂದು ನೆಲೆಗೊಳ್ಳುತ್ತಿರುವ ಸಮಯದಲ್ಲಿಯೇ ಕಾರ್ತಿ ಚಿದಂಬರಂರ ಈ ಹೇಳಿಕೆಗಳು ಹೊರಬಿದ್ದಿವೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾರ್ತಿ, ವಿಶ್ವಾಸಮತ ಪರೀಕ್ಷೆ ಸಮಯದಲ್ಲಿ ಬಂಡಾಯ ಬಣವು ಬೆಂಬಲ ನೀಡಿದ್ದರೂ ಸಹ, ಎಐಎಡಿಎಂಕೆಯನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಎಐಎಡಿಎಂಕೆಯನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳುವ ಅಗತ್ಯವಿಲ್ಲ. ಇದನ್ನು ನಾನು ಇಂದು ಕೂಡ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಎಐಎಡಿಎಂಕೆ ಇಲ್ಲದೆಯೇ ಮುಂದಿನ 5 ವರ್ಷಗಳ ಕಾಲ ಸರ್ಕಾರವನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ. ಒಂದು ವೇಳೆ ಎಐಎಡಿಎಂಕೆಯನ್ನು ಸೇರಿಸಿಕೊಂಡರೆ, ಅದು ಸರ್ಕಾರಕ್ಕೆ ಹಿನ್ನಡೆ ಆಗಲಿದೆ ಎಂದು ಸಂಸದ ಕಾರ್ತಿ ಹೇಳಿದ್ದಾರೆ.
ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಪಕ್ಷಗಳನ್ನು ದೂರವಿಟ್ಟು ಜನರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ. ಇದು ಬದಲಾವಣೆಯ ಸರ್ಕಾರ ಅದಕ್ಕಾಗಿಯೇ ಮತದಾರರು ಕಮ್ಯುನಿಸ್ಟರು, ಐಯುಎಂಎಲ್, ವಿಸಿಕೆ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ನನ್ನ ಪ್ರಕಾರ, ಎಐಎಡಿಎಂಕೆಯನ್ನು ಸರ್ಕಾರದಲ್ಲಿ ಸೇರಿಸಿಕೊಂಡರೆ ಜನರು ಅದನ್ನು ಒಪ್ಪುವುದಿಲ್ಲ ಎಂದು ಕಾರ್ತಿ ಸಲಹೆ ನೀಡಿದ್ದಾರೆ.
ಇದೇ ವೇಳೆ, ಪ್ರಸ್ತುತ ಇರುವ ಮೈತ್ರಿಕೂಟದ ವ್ಯವಸ್ಥೆಗೆ ತಮ್ಮ ಪಕ್ಷ ಬದ್ಧವಾಗಿದೆ ಎಂದು ಕಾಂಗ್ರೆಸ್ ನಾಯಕ ಪುನರುಚ್ಚರಿಸಿದ್ದು, ನಮ್ಮ ಪಕ್ಷ ಸರ್ಕಾರದ ಚೌಕಟ್ಟಿನ ಭಾಗವಾಗಿ ಹೆಜ್ಜೆ ಇಡಲು ಮತ್ತು ಭವಿಷ್ಯದ ಚುನಾವಣೆಗಳಿಗೂ ಈ ಮೈತ್ರಿಯನ್ನು ಮುಂದುವರೆಸಲು ಪಕ್ಷ ಉದ್ದೇಶಿಸಿದೆ. ಹೀಗಿದ್ದಾಗ ಎಐಎಡಿಎಂಕೆ ಬಂಡಾಯಗಾರರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೆ, ಈಗಿರುವ ಮಿತ್ರಪಕ್ಷಗಳ ವಿಶ್ವಾಸ ಪಡೆದು ಮುನ್ನಡೆಯಬೇಕು ಎಂದು ಕಾರ್ತಿ ಚಿದಂಬರಂ ಸಲಹೆ ನೀಡಿದ್ದಾರೆ.