ಪಶ್ಚಿಮ ಬಂಗಾಳದ ರಾಜಕೀಯ ಸಮರವು ಚುನಾವಣಾ ಫಲಿತಾಂಶದ ನಂತರವೂ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿರುವ ನಿರ್ಧಾರದ ಕುರಿತು ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ವಾಕ್ಸಮರ ಮುಂದುವರೆದಿದೆ. ಅಧಿಕಾರದಿಂದ ಕೆಳಗಿಳಿಯಲು ದೀದಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಬುಧವಾರ ಹಿರಿಯ ಬಿಜೆಪಿ ನಾಯಕ ದಿಲೀಪ್ ಘೋಷ್ ಟಿಎಂಸಿ ಮುಖ್ಯಸ್ಥರ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದಿಲೀಪ್ ಘೋಷ್, ಈ ಸಿಂಹಾಸನವು ಕೇವಲ ಎರಡು ದಿನಗಳವರೆಗೆ ಮಾತ್ರ ಇರುತ್ತದೆ. ಪ್ರತಿಯೊಬ್ಬ ಮನುಷ್ಯನೂ ಒಂದು ದಿನ ಈ ಜಗತ್ತನ್ನು ತೊರೆಯಲೇಬೇಕು ಎಂಬ ಕಟು ಸತ್ಯವನ್ನು ಯಾರೂ ಮರೆಯಬಾರದು ಎಂದು ಹೇಳುವ ಮೂಲಕ ಅಧಿಕಾರ ಶಾಶ್ವತವಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಬಾರಿ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದ ನಂತರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಬಿಜೆಪಿ ಪಕ್ಷ 207 ಸ್ಥಾನಗಳನ್ನು ಗಳಿಸಿದರೆ, ಟಿಎಂಸಿ 80 ಸ್ಥಾನಗಳಿಗೆ ಸೀಮಿತಗೊಳಿಸಿತು.
ಬಿಜೆಪಿ, ಚುನಾವಣಾ ಆಯೋಗದ ಮೇಲೆ ಮಮತಾ ದೊಡ್ಡ ಆರೋಪ
ಮಂಗಳವಾರ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದ್ದಾರೆ. ಈ ತೀರ್ಪು ಸಾರ್ವಜನಿಕರ ಆದೇಶವಲ್ಲ. ಬದಲಾಗಿ ಚುನಾವಣಾ ಆಯೋಗದೊಂದಿಗೆ ಬಿಜೆಪಿ ನಡೆಸಿದ ಪಿತೂರಿಯ ಫಲಿತಾಂಶ ಎಂದು ಆರೋಪಿಸಿದ್ದಾರೆ. ಮಂಗಳವಾರ ಮಾಧ್ಯಮದ ಜೊತೆಗೆ ಮಾತನಾಡಿದ ಮಮತಾ ಬ್ಯಾನರ್ಜಿ, ನಾನು ರಾಜೀನಾಮೆ ನೀಡುವುದಿಲ್ಲ, ನಾನು ಸೋತಿಲ್ಲ, ನಾನು ರಾಜಭವನಕ್ಕೆ ಹೋಗುವುದಿಲ್ಲ… ಆ ಪ್ರಶ್ನೆ ಉದ್ಭವಿಸುವುದಿಲ್ಲ. ಇದೆಲ್ಲಾ ನಮ್ಮನ್ನು ಸೋಲಿಸಲು ಮಾಡಿರುವ ಪ್ರಯತ್ನ. ಅಧಿಕೃತವಾಗಿ, ಚುನಾವಣಾ ಆಯೋಗದ ಮೂಲಕ, ಅವರು ನಮ್ಮನ್ನು ಸೋಲಿಸಬಹುದು, ಆದರೆ ನೈತಿಕವಾಗಿ ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಕಡಾಖಂಡಿತವಾಗಿ ಹೇಳಿದ್ದಾರೆ.
ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತವನ್ನು ಕೊನೆಗೊಳಿಸಿದ ಬಿಜೆಪಿ!
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭೂತಪೂರ್ವ ಯಶಸ್ಸು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಒಟ್ಟು 294 ಸದಸ್ಯ ಬಲದ ವಿಧಾನಸಭೆಯಲ್ಲಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ನಿರ್ಣಾಯಕ ಬಹುಮತವನ್ನು ತನ್ನದಾಗಿಸಿಕೊಂಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದ್ದು, ಇದು ಪಕ್ಷದ ಪಾಲಿಗೆ ಐತಿಹಾಸಿಕ ದಾಖಲೆಯಾಗಿದೆ.
ಈ ಫಲಿತಾಂಶವನ್ನು ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಬದಲಾವಣೆಯೆಂದು ಪರಿಗಣಿಸಲಾಗುತ್ತಿದೆ. ಟಿಎಂಸಿಯ ಒಟ್ಟಾರೆ ಸೋಲಿನ ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಭಬಾನಿಪುರ ಕ್ಷೇತ್ರವನ್ನು ಕಳೆದುಕೊಂಡರು.
ಲೋಕವನ್ನೇ ಬಿಡೋ ಕಾಲ ಬಂದಾಗ ಅಧಿಕಾರ ಏತಕೆ..? ದೀದಿಗೆ ಮೃತ್ಯು, ಸತ್ಯದ ಪಾಠ ಮಾಡಿದ ಬಿಜೆಪಿ ನಾಯಕ ದಿಲೀಪ್ ಘೋಷ್!
WhatsApp Group
Join Now