ಮಾಟ-ಮಂತ್ರದ ಹೆಸರಲ್ಲಿ ಯುವತಿಯರು, ಮಹಿಳೆಯರನ್ನು ನಂಬಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಜ್ಯೋತಿಷಿ ಓರ್ವ ಮಹಿಳೆಗೆ ಆರ್ಥಿಕ ಅಭಿವೃದ್ಧಿಗಾಗಿ ಪೂಜೆ, ದೀಕ್ಷೆ ನೆಪದಲ್ಲಿ ನಿರಂತರ ಅತ್ಯಾಚಾರವೆಸಗಿ, ವಿಷಯ ಬಾಯ್ಬಿಟ್ಟರೆ ಪತಿ ಹಾಗೂ ಮಗನಿಗೆ ಮಾಟ-ಮಂತ್ರ ಮಾಡಿ ರಕ್ತ ಕಾರಿ ಸಾಯುವಂತೆ ಮಾಡುತ್ತೇನೆ ಎಂದು ಹೆದರಿಸಿ ಪದೇ ಪದೇ ದೌರ್ಜನ್ಯವೆಸಗುತ್ತಿದ್ದ ಕಾಮಪಿಪಾಸು ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ಈ ಘಟನೆ ಬೆನ್ನಲ್ಲೇ ರಾಮನಗರದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಾಟ-ಮಂತ್ರ ಮತ್ತು ವಾಮಾಚಾರದ ಹೆಸರಿನಲ್ಲಿ ಯುವತಿಯೊಬ್ಬರಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ಆಮಿಷವೊಡ್ಡಿ, ಒಂದು ರಾತ್ರಿ ಬೆತ್ತಲೆ ಪೂಜೆಗೆ ಕುಳಿತುಕೊಂಡರೆ 30 ಲಕ್ಷ ಹಣ ನೀಡುವುದಾಗಿ ವ್ಯಕ್ತಿಯೊಬ್ಬ ಆಫರ್ ನೀಡಿ, ಟಾರ್ಚರ್ ಕೊಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ರಾಮನಗರದ ದೊಡ್ಡಮಣ್ಣಗುಡ್ಡೆದೊಡ್ಡಿಯಲ್ಲಿ ಈ ಘಟನೆ ನಡೆದಿದೆ.
ಬೆತ್ತಲೆ ಫೋಟೋ ಕಳುಹಿಸು. ಒಂದು ದಿನ ಬೆತ್ತಲಾಗಿ ಪೂಜೆ ಕುಳಿತುಕೊಳ್ಳುವಂತೆ ಒತ್ತಾಯಿಸಿ ಆಸಾಮಿ ಕಿರುಕುಳ ನೀಡುತ್ತಿದ್ದಾನೆ. ಆರೋಪಿ ಯುವತಿಯ ಪಕ್ಕದ ಮನೆಯ ಹುಡುಗನೇ ಆಗಿದ್ದು, ಈ ಸಂಬಂಧ ಕಿರಣ್ ಎಂಬಾತನ ವಿರುದ್ಧ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಹದಲ್ಲಿ ಒಂದೇ ಒಂದು ಮಚ್ಚೆ ಇರಬಾರದು, ಮಚ್ಚೆ ಇದ್ದರೆ ಪೂಜೆಗೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ಹೇಳಿ ಯುವತಿಗೆ ಫೋಟೋ ಕಳುಹಿಸುವಂತೆ ಪೀಡಿಸಿದ್ದಾನೆ. ಅಷ್ಟೇ ಅಲ್ಲದೆ, ಇತರ ಕೆಲವು ಯುವತಿಯರ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ ನಂಬಿಸಲು ಯತ್ನಿಸಿದ್ದಾನೆ. ಈ ಎಲ್ಲಾ ಯುವತಿಯರಿಗೆ ಮಚ್ಚೆ ಇರುವುದರಿಂದ ಅವರು ಪೂಜೆಗೆ ಅರ್ಹವಾಗಿಲ್ಲ. ನೀನು ಪೂಜೆಗೆ ಸೆಲೆಕ್ಟ್ ಆಗಿದ್ದೀಯಾ ಎಂದು ಪದೇ ಪದೇ ಕರೆ ಮಾಡುವುದು, ವಾಟ್ಸಪ್ ಮೆಸೇಜ್ ಕಳುಹಿಸುವುದು ಮಾಡುತ್ತಿದ್ದಾನಂತೆ.
ಏಪ್ರಿಲ್ 12ರಂದು ಈ ಕರೆ ಬಂದಿದ್ದು, ಇದರಿಂದ ರೋಸಿಹೋದ ಚೈತ್ರಾ ಎಂಬ ಯುವತಿ ಮತ್ತು ಅವರ ಕುಟುಂಬಸ್ಥರು ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತ ಪರಾರಿಯಾಗಿದ್ದಾನೆ. ಸದ್ಯ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಗ್ನ ಫೋಟೋ ಕಳುಹಿಸು, ಒಂದು ರಾತ್ರಿ ಬೆತ್ತಲಾಗಿ ಪೂಜೆಗೆ ಕುಳಿತರೆ 30 ಲಕ್ಷ ಹಣ ಕೊಡುವುದಾಗಿ ಆಫರ್: ಪಕ್ಕದ ಮನೆ ಫಟಿಂಗನಿಂದ ಯುವತಿಗೆ ಟಾರ್ಚರ್
WhatsApp Group
Join Now