ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಕೆ: ರೂಪೇಶ್‌ ರಾಜಣ್ಣ ಕೆಂಡಾಮಂಡಲ, ಉಗ್ರ ಹೋರಾಟದ ಎಚ್ಚರಿಕೆ!

Spread the love

ಆರೋಗ್ಯ ಇಲಾಖೆಯ ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನ್ನಡದ ಜೊತೆಗೆ ಉರ್ದು ಭಾಷೆಯನ್ನು ಬಳಸಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ನಡೆಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ವಿವಿಧ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇತ್ತೀಚೆಗೆ ಆಯೋಜಿಸಿದ್ದ ಅಧಿಕೃತ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯೊಂದಿಗೆ ಉರ್ದು ಭಾಷೆಯನ್ನೂ ಬಳಸಿರುವುದು ಈಗ ರಾಜ್ಯಾದ್ಯಂತ ಭಾರಿ ಚರ್ಚೆ ಮತ್ತು ವಿವಾದಕ್ಕೆ ಈಡುಮಾಡಿದೆ.

“ಕರ್ನಾಟಕದ ಆಡಳಿತ ಭಾಷೆ ಕನ್ನಡ. ಏನೇ ಮಾಡಿದರೂ ಅದು ಕನ್ನಡದಲ್ಲೇ ಇರಬೇಕು. ಸರ್ಕಾರದ ಪ್ರಕಟಣೆಗಳು, ಜಾಹೀರಾತುಗಳು ಮತ್ತು ಆಹ್ವಾನ ಪತ್ರಿಕೆಗಳು ಕನ್ನಡದಲ್ಲೇ ಇರಬೇಕು ಎಂಬುದು ನಮ್ಮ ಖಚಿತ ನಿಲುವು,” ಎಂದು ಕನ್ನಡ ಪರ ಕಾರ್ಯಕರ್ತ, ಮಾಜಿ ಬಿಗ್‌ಬಾಸ್‌ ಸ್ಪರ್ಧಿ ರೂಪೇಶ್‌ ರಾಜಣ್ಣ ಕಿಡಿಕಾರಿದ್ದಾರೆ.

“ಕೇವಲ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಮಾತ್ರ ನಾವು ‘ಹೆಮ್ಮೆಯ ಕನ್ನಡಿಗರು’ ಎಂದು ಹೇಳಿಕೊಳ್ಳಬೇಕೇ? ಇಲಾಖೆಯ ಕೆಲಸಗಳಲ್ಲಿ ಕನ್ನಡವನ್ನು ಮರೆತು ಬೇಜವಾಬ್ದಾರಿ ತೋರಿರುವುದು ಅಕ್ಷಮ್ಯ. ಯಾವುದೇ ಧರ್ಮ ಅಥವಾ ಭಾಷೆಯವರೇ ಆಗಿರಲಿ, ಅವರನ್ನು ಕನ್ನಡಿಗರನ್ನಾಗಿ ಮಾಡುವುದು ಸರ್ಕಾರದ ಕರ್ತವ್ಯ. ಕನ್ನಡ ಅರ್ಥವಾಗುವುದಿಲ್ಲ ಎಂದು ಯಾರಾದರೂ ಸರ್ಕಾರದ ಬಳಿ ಬಂದು ಕೇಳಿದ್ದರೇ?” ಎಂದು ಪ್ರಶ್ನಿಸಿದ್ದಾರೆ.

“ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ಸರ್ಕಾರ ಮರೆಯಬಾರದು,” ಎಂದು ಸ್ಪಷ್ಟಪಡಿಸಿದ್ದಾರೆ.

WhatsApp Group Join Now

ಕನ್ನಡ ಸಂಘಟನೆಗಳ ಬೇಡಿಕೆ

ಉರ್ದು ಭಾಷೆ ಇರುವ ಆಹ್ವಾನ ಪತ್ರಿಕೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಆರೋಗ್ಯ ಇಲಾಖೆಯು ಕೇವಲ ಕನ್ನಡದಲ್ಲಿ ಮಾತ್ರ ಆಹ್ವಾನ ಪತ್ರಿಕೆಯನ್ನು ಮರುಮುದ್ರಣ ಮಾಡಬೇಕು. ಸರ್ಕಾರ ಈ ಕೂಡಲೇ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ, ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಉಗ್ರ ಹೋರಾಟ ಮಾಡಲಿವೆ ಎಂದು ಎಚ್ಚರಿಕೆ ನೀಡಲಾಗಿದೆ.

ಆಗಿದ್ದೇನು?

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆಯನ್ನು ಮುದ್ರಿಸಲಾಗಿದೆ. ಸರ್ಕಾರದ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಇಲಾಖೆಯ ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆಯನ್ನು ಬಳಸಿದ ಉದಾಹರಣೆಗಳಿಲ್ಲ. ಈಗ ದಿಢೀರನೆ ಉರ್ದು ಸೇರಿಸಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಸರ್ಕಾರದ ಈ ಹೊಸ ನಡೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. “ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುವಾಗ ಉರ್ದು ಭಾಷೆಯ ತುಷ್ಟೀಕರಣದ ಅಗತ್ಯವೇನಿತ್ತು?” ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಹೆಜ್ಜೆ ಇಡಲಾಗಿದೆಯೇ ಅಥವಾ ಇದರ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಕಾವೇರಿವೆ.


Spread the love

Leave a Reply