ದಿ ಕೇರಳ: ಸ್ಟೋರಿ 2: ಗೋಸ್ ಬಿಯಂಡ್ ಸಿನಿಮಾವೂ ಭಾರೀ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಕೇರಳ ಹಾಗೂ ಮಲಯಾಳಿಗಳನ್ನು ಗುರಿಯಾಗಿಸಿಕೊಂಡು, ರಾಜಕೀಯ ಅಜೆಂಡ್ ಹೊಂದಿರುವ ಸಿನಿಮಾವನ್ನು ಇದಾಗಿದೆ ಎಂದು ಕೇರಳಿಗರು, ಅಲ್ಲಿನ ರಾಜಕಾರಣಿಗಳು ವಿರೋಧಿಸುತ್ತಿದ್ದಾರೆ.
ಸತ್ಯಾಸತ್ಯೆಯನ್ನು ಜನರಿಗೆ ಬಿಡುತ್ತಿದ್ದೇವೆ, ಜನರೇ ನಿರ್ಧರಿಸಲಿ ಎನ್ನುವುದು ಸಿನಿಮಾವನ್ನು ಬೆಂಬಲಿಸುತ್ತಿರುವ ವಾದವಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ, ಸಿನಿಮಾವನ್ನು ಸಿನಿಮಾ ರೀತಿ ನೋಡಬೇಕು ಎನ್ನುವುದು ಈ ಸಿನಿಮಾವನ್ನು ಬೆಂಬಲಿಸುತ್ತಿರುವವರ ವಾದವಾಗಿದೆ. ಮುಖ್ಯವಾಗಿ ಕೇರಳ – 2 ಸ್ಟೋರಿಯಲ್ಲಿ ಬೀಫ್ (ಗೋಮಾಂಸ) ಒತ್ತಾಯಪೂರ್ವಕವಾಗಿ ತಿನ್ನಿಸುತ್ತಿರುವ ದೃಶ್ಯವು ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು, ನಿಜವಾದ ಕೇರಳ ಸ್ಟೋರಿ ಎಂದರೆ ರುಚಿಯಾದ ಬೀಫ್ ಫ್ರೈ ಒಮ್ಮೆ ಸವಿದು ನೋಡಿ ಎಂದಿದ್ದಾರೆ. ಪ್ರಕಾಶ್ ರಾಜ್ ಅವರ ಟ್ವೀಟ್ ಹಾಗೂ ಸದ್ಯದ ಚರ್ಚೆಯ ವಿವರ ಇಲ್ಲಿದೆ.
ಕೇರಳ ಸ್ಟೋರಿ: 2 ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿರುವ ವಿಚಾರವಾಗಿದೆ. ಕೇರಳದಲ್ಲಿ ಬೀಫ್ ಸೇವನೆ ವಿಚಾರವನ್ನು ತಪ್ಪಾಗಿ ಚಿತ್ರಿಸಲಾಗಿದೆ,ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಹ ಹೇಳಿದ್ದಾರೆ. ಕೇರಳ 2 ಸ್ಟೋರಿಯು 2023ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಚಿತ್ರದ ಮುಂದುವರಿದ ಭಾಗವಾಗಿದೆ. ಈಚೆಗೆ ಕೇರಳ 2 ಸ್ಟೋರಿಯ ಟ್ರೇಲರ್ ಬಿಡುಗಡೆಯಾಗಿದ್ದು, ಕೇರಳಿಗರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವು ಚರ್ಚೆಯಲ್ಲಿರುವಾಗಲೇ ನಟ ಪ್ರಕಾಶ್ ರಾಜ್ ಅವರು ಮಾಡಿರುವ ಟ್ವೀಟ್ ಇದೀಗ ಹೊಸದೊಂದು ಚರ್ಚೆಗೆ ಕಾರಣವಾಗಿದೆ.
ನಟ ಪ್ರಕಾಶ್ರಾಜ್ ಟ್ವೀಟ್
ಕೇರಳ ಸ್ಟೋರಿ 2 ಹಾಗೂ ಬೀಫ್ ಸೇವನೆ ವಿಚಾರವು ಭಾರೀ ಸದ್ದು ಮಾಡುತ್ತಿರುವಾಗಲೇ ನಟ ಪ್ರಕಾಶ್ ರಾಜ್ ಅವರು ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ನಿಜವಾದ #KeralaStory ಅಂದರೆ ಏನು ಗೊತ್ತಾ… ಕೇರಳದ ರುಚಿಕರವಾದ ಆಹಾರ ಸಂಸ್ಕೃತಿಯಲ್ಲಿ, ಸಿರಿಯನ್ ಕ್ರಿಶ್ಚಿಯನ್ ಸಮುದಾಯದ ಬೀಫ್ ಫ್ರೈ ಮತ್ತು ಪರಂಪರಾಗತ ತೆಂಗಿನಕಾಯಿ ಹಾಕಿ ಮಾಡುವ ಬೀಫ್ ಅಡುಗೆಗಳು. ಈ ಅಡುಗೆಗಳು ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿವೆ. ಒಮ್ಮೆ ಪ್ರಯತ್ನಿಸಿ ರುಚಿ ನೋಡಿ #justasking” ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ನಟ ಪ್ರಕಾಶ್ ರಾಜ್ ಅವರು, ನಿಜವಾದ #ಕೇರಳಸ್ಟೋರಿ ಎಂದರೆ ಹಂದಿಮಾಂಸ, ಗೋಮಾಂಸ ಮತ್ತು ಮೀನುಗಳು, ಸಸ್ಯಾಹಾರಿ ಸದ್ಯದೊಂದಿಗೆ ಹೇಗೆ ಸಹಬಾಳ್ವೆ ನಡೆಸುತ್ತಾರೆ. ಅವರೆಲ್ಲರೂ ಸಾಮರಸ್ಯದಿಂದ ಬದುಕುತ್ತಾರೆ. ದಯವಿಟ್ಟು ಆನಂದಿಸಿ #justasking happy sunday ❤️❤️ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಬೀಫ್ ರುಚಿ ಸವಿದು ನೋಡಿ ಎಂದಿರುವ ಸಾಲುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪರ – ವಿರೋಧ ಚರ್ಚೆಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ
ಇನ್ನು ನಟ ಪ್ರಕಾಶ್ ರಾಜ್ ಅವರ ಸರಣಿ ಟ್ವೀಟ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಈ ಟ್ವೀಟ್ಗಳಿಗೆ ವಿರೋಧ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ.
ತುಂಬಾ ಸರಳವಾದ ಪ್ರಶ್ನೆ. ಇದಕ್ಕೆ ಉತ್ತರಿಸಿ. ಯಾರಾದರೂ ತಿನ್ನಲು ಇಷ್ಟಪಡದದ್ದನ್ನು ತಿನ್ನಲು ಒತ್ತಾಯಿಸುವುದು ಸರಿಯೇ? ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಎಲ್ಲರಿಗೂ ತಮಗೆ ಬೇಕಾದುದನ್ನು ತಿನ್ನುವ ಹಕ್ಕಿದೆ. ಅದು ಭಾವನೆಗಳಿಗೆ ನೋವುಂಟು ಮಾಡಬಾರದು ಎಂದು ಕೆಲವರು ಹೇಳಿದ್ದಾರೆ. ಚೆನ್ನಾಗಿ ಹೇಳಿದ್ದೀರಿ ಪ್ರಕಾಶ್ ರಾಜ್ ಅವರೇ, ಕೇರಳದ ನಿಜವಾದ ಕಥೆ ಎಂದರೆ ಜೀವನದಲ್ಲಿ ಸಾಮರಸ್ಯ. ವೈವಿಧ್ಯತೆಯನ್ನು ಆಚರಿಸಲಾಗುತ್ತದೆ, ವಿಭಜಿಸುವುದಿಲ್ಲ ಶುಭ ಭಾನುವಾರ ಎಂದು ನೆಟ್ಟಿಗರು ಪ್ರಕಾಶ್ ರಾಜ್ ಅವರ ಟ್ವೀಟ್ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.