ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕುಡಿದು ಟೈಟಾದ್ರೆ ಅವರನ್ನು ಮನೆಗೂ ಬಿಡ್ತೀವಿ ಎಂದು ಗೃಹಸಚಿವ ಡಾ ಜಿ ಪರಮೇಶ್ವರ್ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
ಹೊಸ ವರ್ಷ ಸಂಭ್ರಮಾಚರಣೆಗೆ ಕೇವಲ ಮೂರು ದಿನ ಬಾಕಿಯಿರುವಾಗ ಗೃಹಸಚಿವ ಡಾ ಜಿ ಪರಮೇಶ್ವರ್ ಕಮಿಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಭದ್ರತಾ ವ್ಯವಸ್ಥೆ ಬಗ್ಗೆ ಸುದೀರ್ಘ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಸಚಿವರು ಹೊಸ ವರ್ಷಾಚರಣೆ ವೇಳೆ ಕುಡಿದು ಓಡಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿರುತ್ತಾರೆ. ಅಂತವರನ್ನು ಮನೆಗೆ ಬಿಡುವ ವ್ಯವಸ್ಥೆಯನ್ನೂ ಮಾಡುತ್ತೇವೆ. ಇದಕ್ಕಾಗಿ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದರು.
ಆದರೆ ಸಚಿವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ತಮಾಷೆ ಮಾಡಿದ್ದಾರೆ. ಗೃಹಸಚಿವರೇ ಓಪನ್ ಆಗಿ ಕುಡಿಯಲು ಪ್ರೋತ್ಸಾಹ ಕೊಟ್ಟಿದ್ದಾರೆ. ಅವರೇ ಮನೆಗೆ ಬಿಡ್ತಾರೆ ಎಂದರೆ ನಮಗೆ ಡ್ರಾಪ್ ಖರ್ಚೂ ಉಳೀತು ಎಂದು ಕೆಲವರು ತಮಾಷೆ ಮಾಡಿದ್ದಾರೆ. ಗೃಹ ಸಚಿವರೇನೋ ಜನರ ಮೇಲಿನ ಕಾಳಜಿಯಿಂದ ಹೀಗೆ ಹೇಳಿದರೆ ನೆಟ್ಟಿಗರು ಅದನ್ನೂ ತಮಾಷೆ ಮಾಡುತ್ತಿದ್ದಾರೆ.