ಭಾರತದ ಗಡಿಯತ್ತ ನುಗ್ಗಿದ ಮೂಲಭೂತವಾದಿ ಪ್ರತಿಭಟನಾಕಾರರು, ಹೈ ಅಲರ್ಟ್‌;‌ ನಿಯಂತ್ರಣ ತಪ್ಪುತ್ತಿದೆ ಬಾಂಗ್ಲಾದೇಶ!

Spread the love

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ಹಾದಿ ಹತ್ಯೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ಅಕ್ಷರಶಃ ನಿಯಂತ್ರಣ ತಪ್ಪುತ್ತಿದೆ. ಇಂಕ್ವಿಲಾಬ್ ಫೋರಂ ಮತ್ತು ಜಮಾತ್‌ ಉಗ್ರಗಾಮಿಗಳು ನಿನ್ನೆ (ಡಿ.19-ಶುಕ್ರವಾರ) ಬಾಂಗ್ಲಾದೇಶದ ಬೆನಪೋಲ್‌ನಿಂದ ಭಾರತದ ಗಡಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ.

ಪ್ರತಿಭಟನಾಕಾರರು ಗಡಿ ಭಾಗಕ್ಕೆ ನುಗ್ಗುತ್ತಿರುವುದರಿಂದ, ಸೇನೆ ಹೈ ಅಲರ್ಟ್‌ ಘೋಷಣೆ ಮಾಡಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸಿದ ಪ್ರತಿಭಟನಾಕಾರರು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಏತನ್ಮಧ್ಯೆ, ಚಟ್ಟೋಗ್ರಾಮ್‌ನಲ್ಲಿರುವ ಚಂದ್ರನಾಥ ದೇವಸ್ಥಾನದ ಹೊರಗೆ, ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ, ಕೋಮುದ್ವೇಷವನ್ನು ಹರಡುವ ವ್ಯವಸ್ಥಿತ ಷಡ್ಯಂತ್ರ ಕೂಡ ನಡೆದಿದೆ.

ಪ್ರತಿಭಟನಾಕಾರರು ರಾಜಧಾನಿ ಢಾಕಾದ ಪ್ರಮುಖ ಢಾಕೇಶ್ವರಿ ದೇವಸ್ಥಾನದ ಮೇಲೆ ದಾಳಿ ನಡೆಸುವ ಗುರಿ ಹೊಂದಿದ್ದರಿಂದ, ದೇವಸ್ಥಾನವನ್ನು ರಕ್ಷಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಢಾಕಾದ ಟೋಪ್ಖಾನಾ ರಸ್ತೆಯಲ್ಲಿರುವ ಶಿಲ್ಪಿ ಗೋಷ್ಠಿ ಸಾಂಸ್ಕೃತಿಕ ಕೇಂದ್ರವನ್ನು ಸುತ್ತುವರೆದಿದ್ದ ಪ್ರತಿಭಟನಾಕಾರರು, ಕಟ್ಟಡವನ್ನು ಧ್ವಂಸಗೊಳಿಸುವ ವಿಫಲ ಪ್ರಯತ್ನ ನಡೆಸಿದ್ದಾರೆ.

WhatsApp Group Join Now

ಹತ್ಯೆಗೀಡಾದ ಷರೀಫ್‌ ಉಸ್ಮಾನ್‌ ಹಾದಿ ಅವರ ಮೃತದೇಹವನ್ನು ನಿನ್ನೆ ಸಂಜೆ ಸಿಂಗಾಪುರದಿಂದ ಢಾಕಾಗೆ ತರಲಾಯಿತು. ಹಾದಿ ನಿಧನಕ್ಕೆ ಮೊಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಇಂದು (ಡಿ.20-ಶನಿವಾರ) ರಾಷ್ಟ್ರೀಯ ಶೋಕಾಚರಣೆ ದಿನವನ್ನು ಘೋಷಿಸಿದೆ. ಇಂದು ಸಂಜೆ ವೇಳೆಗೆ ಹಾದಿ ಅಂತ್ಯಕ್ರಿಯೆ ನೆರವೇರಲಿದೆ.

ಆದರೆ ಪ್ರತಿಭಟನಾಕಾರರು ಭಾರತದ ಗಡಿ ಭಾಗಕ್ಕೆ ನುಗ್ಗುತ್ತಿರುವುದು ಆತಂಕವನ್ನು ಹೆಚ್ಚಿಸಿದ್ದು, ಭಾರತೀಯ ಸೇನೆ ಗಡಿಯಲ್ಲಿ ಹೈ ಅಲರ್ಟ್‌ ಆಗಿದೆ. ಕಳೆದ ಗುರುವಾರ (ಡಿ.18) ಭಾರತ-ಬಾಂಗ್ಲಾದೇಶ ಗಡಿಗೆ ಭೇಟಿ ನೀಡಿದ್ದ ಭಾರತೀಯ ಸೇನೆಯ ಪೂರ್ವ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಆರ್ ಸಿ ತಿವಾರಿ, “ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೇನೆಯು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ” ಎಂದು ಹೇಳಿದ್ದರು.

ಗಲಭೆಕೋರರಿಗೆ ಮುಕ್ತ ಅವಕಾಶ ನೀಡಿರುವ ಯೂನಸ್‌ ಸರ್ಕಾರ, ಉದ್ದೇಶಪೂರ್ವಕವಾಗಿ ಭಾರತ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದೆ. ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್‌ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಒತ್ತಡ ಹೇರುವುದಕ್ಕಾಗಿ, ಪ್ರಸ್ತುತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಯೂನಸ್‌ ಸರ್ಕಾರವು ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ದೇಶಾದ್ಯಂತ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಶೇಖ್‌ ಹಸೀನಾ ಅವರ ಆವಾಮಿ ಲೀಗ್‌ ಪಕ್ಷ ಷರೀಫ್‌ ಉಸ್ಮಾನ್‌ ಹಾದಿ ಅವರ ಹತ್ಯೆ ಮಾಡಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಶೇಕ್‌ ಹಸೀನಾ ಅವರಿಗೆ ಆಶ್ರಯ ನೀಡಿರುವ ಭಾರತದ ವಿರುದ್ಧವೂ ಯೂನ್‌ ಸರ್ಕಾರ ತನ್ನ ಜನರನ್ನು ಎತ್ತಿ ಕಟ್ಟುತ್ತಿದೆ. ಬಾಂಗ್ಲಾ ಮಾಧ್ಯಮ ಸಂಸ್ಥೆಗಳ ಮೇಲಿನ ದಾಳಿ ಕೂಡ ಆತಂಕವನ್ನು ಹೆಚ್ಚಿಸಿದೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಮೂಲಭೂತವಾದಿ ಶಕ್ತಿಗಳು ನಾಯಕತ್ವ ನೀಡಿದ್ದು, ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳನ್ನು ತೀವ್ರಗೊಳಿಸಲಾಗಿದೆ. ಭಾಲುಕಾದ ಢಾಕಾ ಬಳಿ, ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಸ್ಥಳೀಯ ಹಿಂದೂ ಯುವಕನೋರ್ವನನ್ನು ಥಳಿಸಿ ಕೊಲ್ಲಲಾಗಿದೆ. ಇಷ್ಟೇ ಅಲ್ಲದೇ ಆತನ ಮೃತದೇಹವನ್ನು ವಿವಸ್ತ್ರಗೊಳಿಸಿ ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಲಾಗಿದೆ.

ಒಟ್ಟಿನಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ನಿಯಂತ್ರಣ ತಪ್ಪುತ್ತಿದ್ದು, ಪ್ರತಿಭಟನೆಗಳ ನೇತೃತ್ವವಹಿಸಿರುವವರು ಮತ್ತು ಮೊಹಮ್ಮದ್‌ ಯೂನಸ್‌ ಸರ್ಕಾರ ಭಾರತ ವಿರೋಧಿ ಭಾವನೆಯನ್ನು ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಹೇಳಬಹುದು.


Spread the love

Leave a Reply