ʻಲಕ್ಷ್ಮಿ ದೇಗುಲ ಕಟ್ಟಿಸಿದರೆ ನಿಮ್ಮ ಜಾತಕಕ್ಕೆ ತುಂಬಾ ಒಳ್ಳೆದುʼ ಎಂದು ಜ್ಯೋತಿಷಿಯೊಬ್ಬ, 56 ವರ್ಷದ ಸಂಗೀತ ಶಿಕ್ಷಕಿಯೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಹಾಗೂ ಚಿನ್ನಾಭರಣ ವಂಚಿಸಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ಠಾಣಾ ವ್ಯಾಪ್ತಿ ನಡೆದಿದೆ.
ಜ್ಯೋತಿಷಿಗಳ ಮೇಲಿದ್ದ ನಂಬಿಕೆ ಮತ್ತು ದೇವರ ಮೇಲಿದ್ದ ಅಪಾರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್ ಜ್ಯೋತಿಷಿ ಮಂಜುನಾಥ್ ಸಂಗೀತ ಶಿಕ್ಷಕಿ ಸರ್ವಮಂಗಳಾ ಅವರಿಗೆ ವಂಚಿಸಿದ್ದಾನೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಆರೋಪಿಗಳಾದ ಮಂಜುನಾಥ್, ರಾಘವೇಂದ್ರ, ಮಧುಸೂದನ್ ಮತ್ತು ಗೋಪಾಲ ಕೃಷ್ಣ ಎಂಬುವವರು 2022ರಿಂದ ಈ ವರ್ಷದ ನವೆಂಬರ್ ನಡುವಿನ ಅವಧಿಯಲ್ಲಿ ತಮಗೆ ಮೋಸ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಹಣ ದೋಚಿದ್ದು ಹೀಗೆ
ನಾಲ್ಕು ವರ್ಷಗಳಿಂದ ಸರ್ವಮಂಗಳಾ ಅವರಿಗೆ ಜ್ಯೋತಿಷಿ ಮಂಜುನಾಥ್ ಪರಿಚಯವಿದ್ದ. ಕುಟುಂಬದೊಂದಿಗೂ ಕೂಡ ಆತ ಅನೋನ್ಯವಾಗಿದ್ದ. ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ಆತನಿಗೆ ಎಲ್ಲರ ಬಗ್ಗೆ ಇಂಚಿಂಚೂ ಮಾಹಿತಿ ತಿಳಿದಿತ್ತು. ಯಾರನ್ನು ಹೇಗೆ ಯಾಮಾರಿಸಿದರೆ ಏನಾಗುತ್ತದೆ ಎಂದು ತಿಳಿದಿದ್ದ.
ಹೀಗೆ ಒಮ್ಮೆ ಮನೆಗೆ ಬಂದ ಆತ ಸರ್ವಮಂಗಳಾ ಅವರ ಜಾತಕ ಪರಿಶೀಲಿಸಿ, ʻನಿಮ್ಮ ಜಾತಕದ ಪ್ರಕಾರ ನೀವು ಲಕ್ಷ್ಮಿ ದೇವಸ್ಥಾನವನ್ನು ನಿರ್ಮಿಸಬೇಕು, ಅದು ನಿಮಗೆ ಒಳ್ಳೆಯದುʼ ಎಂದಿದ್ದ. ಜೋತಿಷಿಯ ಕಪಟ ಅರಿಯದ ಅವರು, ದೇವಿಯ ಭಕ್ತೆಯಾಗಿದ್ದ ಕಾರಣ ಸರ್ವಮಂಗಳಾ ಒಪ್ಪಿಗೆ ಸೂಚಿಸಿದ್ದರು. (ಎಡಿಜಿಬಿ ದಯಾನಂದ್ ಅವರ ಹೆಸರಲ್ಲಿ ವಂಚನೆ)
ಹಂತ ಹಂತವಾಗಿ ಲಕ್ಷ ಲಕ್ಷ ಟ್ರಾನ್ಸ್ಫರ್
ಲಕ್ಷ್ಮಿ ದೇಗುಲ ನಿರ್ಮಾಣದ ಬಗ್ಗೆ ಹೇಳಿದ ಒಂದು ತಿಂಗಳ ನಂತರ ಮಂಜುನಾಥ್ ಮತ್ತೆ ಸರ್ವಮಂಗಳಾ ಮನೆಗೆ ಬಂದಿದ್ದರು. ಉಡುಪಿ ಜಿಲ್ಲೆಯ ಕಾಪು ಎಂಬಲ್ಲಿ ತಾನು ಲಕ್ಷ್ಮಿ ದೇವಸ್ಥಾನವನ್ನು ನಿರ್ಮಿಸಲು ಯೋಜಿಸುತ್ತಿದ್ದು, ಅದಕ್ಕೆ ಆರ್ಥಿಕ ನೆರವು ನೀಡುವಂತೆ ಮಂಜುನಾಥ್ ಕೇಳಿಕೊಂಡಿದ್ದ. ದೇವಸ್ಥಾನ ಪೂರ್ಣಗೊಂಡ ನಂತರ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ. ಆಕೆಗೆ ಆತನ ಮೇಲೆ ನಂಬಿಕೆ ಬರಲೆಂದು ತನ್ನ ಸಹಚರರನ್ನು ಸರ್ವಮಂಗಳಾ ಅವರಿಗೆ ಪರಿಚಯಿಸಿದ್ದರು. ರಾಘವೇಂದ್ರನನ್ನ ತನ್ನ ಅನುಯಾಯಿ ಎಂದು, ಮಧುಸೂದನ್ನನ್ನು ಬ್ಯಾಂಕ್ ಉದ್ಯೋಗಿ ಎಂದು ಮತ್ತು ಗೋಪಾಲ ಕೃಷ್ಣನನ್ನ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’) ಮ್ಯಾನೇಜರ್ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಟ್ಟಿದ್ದ ಎನ್ನಲಾಗಿದೆ.
ಆರೋಪಿಗಳ ಮಾತು ಅಕ್ಷರಶಃ ನಂಬಿದ್ದ ಸಂಗೀತ ಶಿಕ್ಷಕಿ ಸರ್ವಮಂಗಳಾ 2022ರಲ್ಲಿ ಮೊದಲಿಗೆ 10 ಲಕ್ಷ ರೂಪಾಯಿ ನಗದು ಕೊಟ್ಟರು. ನಂತರ ಏಪ್ರಿಲ್ 2022 ಮತ್ತು ಸೆಪ್ಟೆಂಬರ್ 2023 ರ ನಡುವೆ ಹಂತ ಹಂತವಾಗಿ 4.6 ಲಕ್ಷ ರೂಪಾಯಿ ಜ್ಯೋತಿಷಿ ಖಾತೆಗೆ ವರ್ಗಾಯಿಸಿದ್ದಾರೆ. ದೇವಸ್ಥಾನದ ಕೆಲಸಕ್ಕೆ ಇನ್ನೂ ಹೆಚ್ಚಿನ ಹಣ ಬೇಕೆಂದು ಮಂಜುನಾಥ್ ಕೇಳಿದಾಗ, ಸರ್ವಮಂಗಳಾ ಅವರು ತಮ್ಮ ಆಸ್ತಿಯೊಂದನ್ನು ಮಾರಿ ಬಂದ ಹಣದಲ್ಲಿ 30 ಲಕ್ಷ ರೂಪಾಯಿಯನ್ನು ನೀಡಿದ್ದರು. ಇದಲ್ಲದೆ, ಆರೋಪಿಗಳಾದ ರಾಘವೇಂದ್ರ ಮತ್ತು ಮಧುಸೂದನ್ ಅವರ ಖಾತೆಗೂ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿದ್ದರು. ಒಟ್ಟಾರೆಯಾಗಿ ತಾವು ಸುಮಾರು 1 ಕೋಟಿ ರೂಪಾಯಿ ಹಣವನ್ನು ಆರೋಪಿಗಳಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ದೇವಸ್ಥಾನ ಹೇಗೆ ನಿರ್ಮಾಣವಾಗುತ್ತಿದೆ ಎಂದು ನಂಬಿಸಲು ಮಂಜುನಾಥ್ ಆಗಾಗ್ಗೆ ಶಿಕ್ಷಕಿಗೆ ವಿಡಿಯೋ ಕರೆ ಮಾಡುತ್ತಿದ್ದ. ಕಾಪು ಗ್ರಾಮದ ಯಾವುದೋ ದೇವಸ್ಥಾನದ ನಿರ್ಮಾಣ ಕಟ್ಟಡದ ಬಳಿ ನಿಂತು ವಿಡಿಯೋ ಕಾಲ್ ಮಾಡಿ, ಇದೇ ತಾವು ಕಟ್ಟುತ್ತಿರುವ ದೇವಸ್ಥಾನ ಎಂದು ತೋರಿಸಿ ಯಾಮಾರಿಸುತ್ತಿದ್ದ. ಕೆಲ ವಾರಗಳ ನಂತರ ದೇವಸ್ಥಾನದ ಕಾಮಗಾರಿ ನೋಡಲು ಸ್ವತಃ ಸರ್ವಮಂಗಳಾ ಅವರು ಒಮ್ಮೆ ಕಾಪುಗೆ ಅಚಾನಕ್ಕಾಗಿ ತೆರಳಿದ್ದರು. ಆದರೆ, ಆ ಸಮಯದಲ್ಲಿ ಮಂಜುನಾಥ್ ಮತ್ತು ಇತರರು ಅವರ ಕರೆಯನ್ನು ಸ್ವೀಕರಿಸದೆ ತಪ್ಪಿಸಿಕೊಂಡಿದ್ದರು. ಹೀಗಾಗಿ ಅವರು ದೇವಸ್ಥಾನ ನೋಡದೆಯೇ ವಾಪಸಾಗಿದ್ದರು.
ರಾಮೇಶ್ವರಂನಲ್ಲಿ ತಗ್ಲಾಕೊಂಡ ವಂಚಕ
ಈ ಭೇಟಿಯ ನಂತರವೂ ಆರೋಪಿಗಳು ಹಣಕ್ಕಾಗಿ ಪೀಡಿಸುವುದನ್ನು ನಿಲ್ಲಿಸಲಿಲ್ಲ. ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಹಣದ ಕೊರತೆಯಿದೆ ಎಂದು ಹೇಳಿ, ಸರ್ವಮಂಗಳಾ ಅವರಿಂದ 180 ಗ್ರಾಂ ತೂಕದ ಚಿನ್ನದ ಸರಗಳು, ಕಿವಿಯೋಲೆಗಳು ಸೇರಿದಂತೆ ಇತರೆ ಆಭರಣಗಳನ್ನು ತೆಗೆದುಕೊಂಡರು. ಅಂತಿಮವಾಗಿ ಮಂಜುನಾಥ್ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ. ಒಮ್ಮೆ ಸರ್ವಮಂಗಳಾ ಅವರು ರಾಮೇಶ್ವರಂನಲ್ಲಿ ಅವರನ್ನು ಪತ್ತೆ ಹಚ್ಚಿದರು.
ಹಣ ಮತ್ತು ಚಿನ್ನ ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಒಂದು ತಿಂಗಳಲ್ಲಿ ಕೊಡುವುದಾಗಿ ಮಂಜುನಾಥ್ ಒಪ್ಪಿಕೊಂಡಿದ್ದ. ಆದರೆ ವಾಪಸ್ ಹಣ ಕೊಡದೇ ಇದ್ದಾಗ, ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸವನ್ನು ಬಳಸಿಕೊಂಡು ವಂಚಿಸಿದ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ಕೊಟ್ಟಿದ್ದಾರೆ. ಸರ್ವಮಂಗಳಾ ಅವರು ಕೊಟ್ಟ ದೂರಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ʻಲಕ್ಷ್ಮಿ ದೇಗುಲ ಕಟ್ಟಿಸಿ ನಿಮ್ಮ ಜಾತಕಕ್ಕೆ ಒಳ್ಳೇದುʼ; ಜ್ಯೋತಿಷಿ ಮಾತು ನಂಬಿ 1 ಕೋಟಿ ನಗದು, 180 ಗ್ರಾಂ ಚಿನ್ನ ಕಳ್ಕೊಂಡ ಟೀಚರ್
WhatsApp Group
Join Now