ಭಾರತದ ತ್ರಿವರ್ಣ ಧ್ವಜವನ್ನು ಕೇಸರಿ ಧ್ವಜಕ್ಕೆ ಬದಲಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ಹಿರಿಯ ಬಿಜೆಪಿ ನಾಯಕ ಹಾಗೂ ಬಿಜೆಪಿಯ ಮಾಜಿ ರಾಷ್ಟ್ರೀಯ ಮಂಡಳಿಯ ಸದಸ್ಯ ಎನ್.ಶಿವರಂಜನ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಪಾಲಕ್ಕಾಡ್ ನ ಅಂಚುವಿಲಕ್ಕು ಜಂಕ್ಷನ್ ಬಳಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಪ್ರತಿಭಟನೆಯ ವೇಳೆ ಈ ಹೇಳಿಕೆ ಹೊರ ಬಿದ್ದಿದ್ದು, ಈ ವೇಳೆ, ಎಲ್ಲಿಎಫ್ ಹಾಗೂ ಯುಡಿಎಫ್ ಎರಡೂ ಭಾರತ ಮಾತೆಗೆ ಅವಮಾನಿಸುತ್ತಿವೆ ಎಂದು ಬಿಜೆಪಿ ಆರೋಪಿಸಿತು.
ಈ ಪ್ರತಿಭಟನೆಯ ವೇಳೆ, ರಾಜಕೀಯ ಪಕ್ಷಗಳು ಭಾರತದ ತ್ರಿವರ್ಣ ಧ್ವಜವನ್ನು ಹೋಲುವಂತಹ ತ್ರಿವರ್ಣ ಧ್ವಜಗಳನ್ನು ಬಳಸುವುದನ್ನು ನಿಷೇಧಿಸಬೇಕು ಎಂದು ಪಾಲಕ್ಕಾಡ್ ನ ಹಾಲಿ ಬಿಜೆಪಿಯ ಕೌನ್ಸಿಲರ್ ಆದ ಶಿವರಂಜನ್ ಆಗ್ರಹಿಸಿದರು. ಆ ಮೂಲಕ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಬಳಸುತ್ತಿರುವ ತ್ರಿವರ್ಣ ಧ್ವಜವನ್ನು ನಿಷೇಧಿಸಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದರು.
ಕಾಂಗ್ರೆಸ್ ಹಾಗೂ ಎನ್ಸಿಪಿಯನ್ನು ಗುರಿಯಾಗಿಸಿಕೊಂಡು ಮತ್ತಷ್ಟು ವಾಗ್ದಾಳಿ ನಡೆಸಿದ ಅವರು, ಈ ಎರಡು ಪಕ್ಷಗಳು ವಿಭಿನ್ನ ಧ್ವಜಗಳನ್ನು ಬಳಸಬೇಕು. ಈ ಪೈಕಿ ಕಾಂಗ್ರೆಸ್ ಹಸಿರು ಧ್ವಜ ಬಳಸಬೇಕು ಎಂದು ವ್ಯಂಗ್ಯವಾಗಿ ಸಲಹೆಯನ್ನೂ ನೀಡಿದರು. ಇದರೊಂದಿಗೆ, ಭಾರತದ ಚರಿತ್ರೆಯ ಬಗ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಏನೂ ತಿಳಿದಿಲ್ಲ ಎಂದು ಆರೋಪಿಸಿದ ಅವರು, ತ್ರಿವರ್ಣ ಧ್ವಜದ ಬದಲು ಅವರು ಇಟಲಿಯ ಧ್ವಜವನ್ನು ಹಾರಿಸಬೇಕು ಎಂದೂ ಗೇಲಿ ಮಾಡಿದರು.
ಕೇರಳ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿಯನ್ನು ಶವನ್ ಕುಟ್ಟಿ (ಮೃತ ಮಗು) ಎಂದು ಅವರು ಕಟಕಿಯಾಡಿದರು. ಶಿವರಂಜನ್ ರ ಈ ವಿವಾದಾತ್ಮಕ ಭಾಷಣದ ಬೆನ್ನಿಗೇ, ಪಟ್ಟಣದಲ್ಲಿ ಮೊದಲಿಗೆ ಕಾಂಗ್ರೆಸ್ ಕಾರ್ಯಕರ್ತರು, ನಂತರ ಸಿಪಿಎಂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಾಲಕ್ಕಾಡ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಿ.ವಿ.ಸತೀಶನ್ ಈ ಸಂಬಂಧ ದೂರು ದಾಖಲಿಸಿದ್ದು, ಶಿವರಂಜನ್ ವಿರುದ್ಧ ದೇಶ ದ್ರೋಹ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಕಠಿಣ ಸೆಕ್ಷನ್ ಗಳನ್ನು ವಿಧಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ದೂರನ್ನು ಪಾಲಕ್ಕಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿನ ಕಾಂಗ್ರೆಸ್ ಹಾಗೂ ಎಡರಂಗದ ನಾಯಕರು ಶಿವರಂಜನ್ ಹೇಳಿಕೆಯನ್ನು ಖಂಡಿಸಿದ್ದು, ಈ ಹೇಳಿಕೆಯು ರಾಷ್ಟ್ರ ಧ್ವಜಕ್ಕೆ ಎಸಗಿರುವ ನೇರ ಅವಮಾನ ಹಾಗೂ ದೇಶದ ಏಕತೆ ಮತ್ತು ಸಾರ್ವಭೌಮತೆಗೆ ಉಂಟು ಮಾಡಿರುವ ಧಕ್ಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.