ನಾವು ಮೈ ಮಾರಿಕೊಂಡು ಬದುಕುತ್ತಿಲ್ಲ : ಡಿಕೆಶಿಯ ನಟ್ಟು ಬೋಲ್ಟ್‌ ಟೈಟ್‌ ಹೇಳಿಕೆಗೆ ಕಿಚ್ಚ ಸುದೀಪ್‌ ತಿರುಗೇಟು

Spread the love

ಕನ್ನಡ ಚಿತ್ರರಂಗದ ಕಾರ್ಯಕ್ರಮಕ್ಕೆ ಕಲಾವಿದರೇ ಬರಲಿಲ್ಲ ಎಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ನೀಡಿದ್ದ ನಟ್ಟು ಬೋಲ್ಟ್‌ ಟೈಟ್‌ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ತುಂಬು ವೇದಿಕೆಯಲ್ಲೇ ಡಿಕೆಶಿ ಚಿತ್ರರಂಗದ ನಟ್ಟು ಬೋಲ್ಟ್‌ ಮಾಡುವುದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ನಟ ಕಿಚ್ಚ ಸುದೀಪ್‌ ತಡವಾಗಿ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್‌ ಹೇಳಿಕೆಗೆ ತಮ್ಮದೇ ಸ್ಟೈಲಲ್ಲಿ ಖಡಕ್‌ ತಿರುಗೇಟು ನೀಡಿದ್ದಾರೆ.

ರಿಪಬ್ಲಿಕ್‌ ಕನ್ನಡ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುದೀಪ್‌ ಈ ಬಗ್ಗೆ ಮೌನ ಮುರಿದಿದ್ದಾರೆ. ʼನಾವು ಓಡಾಡುವ ಕಾರುಗಳ ನಟ್ಟು ಬೋಲ್ಟುಗಳು ಕೂಡ ಟೈಟ್‌ ಇರಬೇಕು. ಟೈಟ್‌ ಇರಬೇಕು ಎಂಬ ಕಾರಣಕ್ಕೆ ನಾನು ಹೋದರೆ ಸರಿಬರುವುದಿಲ್ಲ. ಅದಕ್ಕೆ ಮೆಕ್ಯಾನಿಕ್‌ ಹತ್ರಾನೇ ಹೋಗಬೇಕು. ಯಾಕಂದ್ರೆ ಆ ಮೆಕ್ಯಾನಿಕ್‌ಗೆ ಮಾತ್ರವೇ ಕಾರಿನ ವಿಚಾರ ಗೊತ್ತಿರುತ್ತೆ. ಅದೇ ರೀತಿ ಚಿತ್ರರಂಗದಲ್ಲಿರುವ ವಿಚಾರ ಚಿತ್ರರಂಗದಲ್ಲಿರುವವರಿಗೆ ಮಾತ್ರವೇ ಗೊತ್ತುʼ ಎಂದು ಸುದೀಪ್‌ ತಿರುಗೇಟು ನೀಡಿದ್ದಾರೆ.

ʼನಾವು ಪ್ರತಿ ಕ್ಯಾಂಪೇನ್‌ಗೆ ಅಲ್ಲಿರುತ್ತೇವೆ. ಡಿಕೆ ಶಿವಕುಮಾರ್‌ ಅವರು ಆ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ರೋ ಗೊತ್ತಿಲ್ಲ. ನನಗೆ ಅವರ ಮೇಲೆ ಬಹಳ ಗೌರವ ಇದೆ. ಆದರೆ ಅವರು ಆ ಹೇಳಿಕೆ ನೀಡುವ ಮುನ್ನ ಕೆಲವು ಸತ್ಯಗಳನ್ನ ಅರ್ಥ ಮಾಡಿಕೊಳ್ಳಬೇಕಿತ್ತು. ವಿಚಾರ ತಿಳಿದು ಮಾತನಾಡಿದ್ದರೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತೇ ಹೊರತು, ಚಿತ್ರರಂಗದವರಿಗೆ ಮನಸ್ಸಿಗೆ ನೋವಾಗುತ್ತಿರಲಿಲ್ಲʼ ಎಂದಿದ್ದಾರೆ.

ʼಡಿಕೆ ಶಿವಕುಮಾರ್‌ ಅವರು ಕರೆದಾಗಲೆಲ್ಲ ನಾವೆಲ್ಲ ಹೋಗಿದ್ದೇವೆ. ಯಾವ ಕಾರ್ಯಕ್ರಮಕ್ಕೆ ಕರೆದರೂ ಹೋಗಿದ್ದೀವಿ. ಎಲ್ಲ ಕಡೆ ಅವರೊಂದಿಗೆ ನಿಂತಿದ್ದೀವಿ. ಚಿತ್ರರಂಗದಲ್ಲಿ ತುಂಬಾ ಗೌರವಸ್ಥರಿದ್ದೀವಿ. ನಾವ್ಯಾರು ಮೈ ಮಾರಿಕೊಂಡು ಬದುಕುತ್ತಿರುವ ವ್ಯಕ್ತಿಗಳಲ್ಲ. ಹಾಗಾಗಿ ಅಂತಹ ಪದಗಳನ್ನು ಬಳಸಬೇಕಾದ್ರೆ ಸತ್ಯಾಂಶಗಳನ್ನ ಅರ್ಥ ಮಾಡಿಕೊಳ್ಳಬೇಕು. ಅಷ್ಟೇ ಹೇಳೋದುʼ ಎಂದು ಸುದೀಪ್‌ ನೇರವಾಗಿ ಹೇಳಿದ್ದಾರೆ.

ʼಈಗ ರಾಜಕೀಯ ಅಂತ ಬಂದಾಗ ಪ್ರತಿ ಕಡೆಯೂ ರಾಜಕೀಯದ ಚರ್ಚೆಗಳು ನಡೆಯುತ್ತವೆ. ನಾವು ಕೂಡ ಮನೆಯಲ್ಲಿ ಕೂತ್ಕೊಂಡು ರಾಜಕೀಯನೇ ಹೀಗೆ ಎಂದು ಹೇಳಿಕೆ ಕೊಟ್ಟರೆ ಅದು ಕೂಡ ತಪ್ಪಾಗುತ್ತೆ. ಅವರವರ ನೋವುಗಳು ಅವರಿಗೆ ಮಾತ್ರವೇ ಗೊತ್ತಿರುತ್ತೆ. ಏನ್‌ ರೀ ಒಬ್ಬ ಮಂತ್ರಿ ಅಲ್ವಾ, ಇಷ್ಟು ಮಾಡಬಹುದಲ್ಲ? ಎಂದು ಸಿಂಪಲ್‌ ಆಗಿ ಕೇಳಿಬಿಡಬಹುದು. ಆದರೆ ಒಳಗಡೆ ತುಂಬಾ ಸಮಸ್ಯೆಗಳಿರುತ್ತೆ. ಹೇಳಿದಷ್ಟು ಸುಲಭವಾಗಿ ಅದನ್ನ ಮಾಡೋಕಾಗಲ್ಲʼ ಎಂದಿದ್ದಾರೆ.

ಎಲ್ಲರ ನಟ್ಟು ಬೋಲ್ಟ್‌ ಟೈಟೇ ಇದೆ

ʼಆವತ್ತು ಇದೇ ವಿಚಾರವನ್ನ ಟಿವಿ ಚಾನಲ್‌ನಲ್ಲಿ ನೋಡಿದಾಗ ಈ ವಿಷಯವೇ ಗೊತ್ತಿಲ್ವಲ್ಲಾ ನಮಗೆ ಅಂತಾ ಅಕ್ಕಪಕ್ಕ ನೋಡಿದ್ವಿ. ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿರಬಹುದು. ಆಗ ಅವರ ಬಾಯಲ್ಲಿ ನಟ್ಟು ಬೋಲ್ಟ್‌ ಮಾತು ಬಂದಿದೆ. ಆದರೆ ಎಲ್ಲರ ನಟ್ಟು ಬೋಲ್ಟ್‌ ಟೈಟೇ ಇದೆ. ನಾನು ಪ್ರತಿಯೊಬ್ಬ ಹಿರಿಯರಿಗೂ ಕೇಳಿಕೊಳ್ಳುತ್ತೇನೆ. ಸಿನಿಮಾ ಕೂಡ ಒಂದು ಗೌರವಯುತವಾದ ಸ್ಥಳ. ಅದಕ್ಕೇನೇ ಎಷ್ಟೋ ರಾಜ್ಯಗಳಲ್ಲಿ ಕಲಾವಿದರು ಸಿಎಂ ಆಗಿದ್ದಾರೆ. ನಾವು ಎಷ್ಟು ಗೌರವ ಕೊಡುತ್ತೇವೋ ಅಷ್ಟೇ ಗೌರವ ನಮಗೂ ಕೊಡಿ. ಅಹಂ ಕೆಲವರಿಗೆ ಇರಬಹುದು. ಆದರೆ ಎಲ್ಲರಿಗೂ ಇಲ್ಲವಲ್ಲಾ? ಇದಕ್ಕೆ ಯಾರೂ ಯಾಕೆ ರಿಯಾಕ್ಟ್‌ ಮಾಡಲಿಲ್ಲ ಅಂದ್ರೆ ಅದು ಅವರ ಮೇಲಿಟ್ಟಿರುವ ಗೌರವ. ಈ ಹೇಳಿಕೆಯಿಂದ ನೋವಾಗಿದ್ದು ನಿಜ ಎಂದು ಡಿಕೆ ಶಿವಕುಮಾರ್‌ ಹೇಳಿಕೆ ಬಗ್ಗೆ ಸುದೀಪ್‌ ಬೇಸರ ಹೊರಹಾಕಿದ್ದಾರೆ.

ʼಚಿತ್ರರಂಗದಲ್ಲಿ ನಾವೆಲ್ಲ ಇರೋದೆ ಮನರಂಜನೆ ನೀಡೋಕೆ. ನಮ್ಮ ಮನೆಗಳಲ್ಲಿ ಸಾವಾಗುತ್ತಿದೆಯೇ, ಬದುಕಿದ್ದಾರಾ? ಎನ್ನುವುದನ್ನೂ ಲೆಕ್ಕಿಸದೆ ನಿಮ್ಮನ್ನು ನಗಿಸೋ ಪ್ರಯತ್ನ ಮಾಡ್ತಿದ್ದೇವೆ. ಹೀಗಿರುವಾಗ ಕೆಲವು ಸತ್ಯಗಳನ್ನು ತಿಳಿದುಕೊಂಡು ಮಾತನಾಡಿದಾಗ ಪ್ರೀತಿ ವಿಶ್ವಾಸ ಹಾಗೆಯೇ ಉಳಿಯುತ್ತೆ. ಮನಸ್ಸುಗಳು ಮುರಿಯುವುದಿಲ್ಲ. ರಾಜಕೀಯ ನಾಯಕರು ಹೇಳುವ ಒಂದೊಂದು ಮಾತು ಕೂಡ ಎಲ್ಲೆಲ್ಲೋ ತಲುಪುತ್ತದೆʼ ಎಂದು ಕಿವಿಮಾತು ಹೇಳಿದ್ದಾರೆ.

WhatsApp Group Join Now

Spread the love

Leave a Reply