ನಮಗೆ ಬಿಜೆಪಿ ಅನಿವಾರ್ಯವಾಗಿದ್ದು, ಸ್ವಲ್ಪ ತಗ್ಗಿಬಗ್ಗಿ ನಡೆದುಕೊಂಡು ಹೋಗೋಣ. ನಮ್ಮಿಂದ ತಪ್ಪಾಗುವುದು ಬೇಡ ಎಂದು ಎಚ್ಡಿ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ. ಜೆಡಿಎಸ್ ಕಚೇರಿ ಜೆ ಪಿ ಭವನದದ ಆವರಣದಲ್ಲಿ ನಡೆದ ಸಮಾವೇಶದಲ್ಲಿ ‘ಜನರೊಂದಿಗೆ ಜನತಾದಳ’ ಮಿಸ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
‘ಜನರೊಂದಿಗೆ ಜನತಾದಳ’ ಘೋಷಣೆಯಡಿ ಕೈಗೊಳ್ಳುವ ಸಂಘಟನಾ ಪ್ರವಾಸ ಸಂಬಂಧದ ಲೋಗೋವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಮಿಸ್ಡ್ ಕಾಲ್ ಅಭಿಯಾನದ ಮೂಲಕ 50 ಲಕ್ಷ ಸದಸ್ಯರ ನೋಂದಣಿ ಗುರಿಯನ್ನು ಜೆಡಿಎಸ್ ಹಾಕಿಕೊಂಡಿದೆ.
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮಾತನಾಡಿ, ” ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಬೇಕಿದೆ. ನಮಗೆ ಬಿಜೆಪಿ ಅನಿವಾರ್ಯವಾಗಿದ್ದು, ಸ್ವಲ್ಪ ತಗ್ಗಿಬಗ್ಗಿ ನಡೆದುಕೊಂಡು ಹೋಗೋಣ. ನಮ್ಮಿಂದ ತಪ್ಪಾಗುವುದು ಬೇಡ ”ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
” ರಾಜ್ಯದಲ್ಲಿ ಮೈತ್ರಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ನಾನು ಕೇಂದ್ರದಲ್ಲಿ ವಿಶೇಷ ಗೌರವ ಉಳಿಸಿಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ಶಾ, ಬಿ.ಎಲ್. ಸಂತೋಷ ಅವರ ಜತೆ ನೇರವಾಗಿ ವ್ಯವಹರಿಸುತ್ತಿದ್ದೇನೆ. ಸ್ಥಳೀಯವಾಗಿ ಯಾರೋ ಒಂದಿಬ್ಬರು ಮೈತ್ರಿ ಬಗ್ಗೆ ಏನೇ ಹೇಳಿದರೂ ಅದನ್ನೇ ನೆಚ್ಚಿಕೊಳ್ಳಬೇಡಿ ”ಎಂದರು.
ಪಂಚಾಯಿತಿ ಚುನಾವಣೆಯಲ್ಲಿ ಸೀಟ್ ಬಗ್ಗೆ ಅಳುಕು ಬೇಡ
” ನಮ್ಮ ಮೈತ್ರಿ ಭದ್ರವಾಗಿದೆ. ಇದಕ್ಕೆ ಯಾರೂ ಅಂಜಬೇಕಿಲ್ಲ. ಮುಂದಿನ ಪಂಚಾಯಿತಿ ಚುನಾವಣೆಯಲ್ಲಿ ಸೀಟು ಸಿಗುವುದೋ ಇಲ್ಲವೋ ಎಂಬ ಅಳುಕು ಬೇಡ. ಮೈತ್ರಿ ಪಕ್ಷಕ್ಕೆ ಶಕ್ತಿ ಬರುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿ. ಅದು ನನಗೂ ಶಕ್ತಿ ನೀಡಿದಂತಾಗುತ್ತದೆ. ಪಕ್ಷಕ್ಕೂ ಶಕ್ತಿ ಸಿಗುತ್ತದೆ ”ಎಂದು ಹೇಳಿದರು.
ನಾನು ದೇವೇಗೌಡರು ಗಟ್ಟಿಯಾಗಿದ್ದೇವೆ ಎಂದ ಎಚ್ಡಿಕೆ
”ನಾನು ಗಟ್ಟಿಮುಟ್ಟಾಗಿದ್ದೇನೆ. ನನ್ನ ಆರೋಗ್ಯ ಉತ್ತಮವಾಗಿದೆ. ದೇವೇಗೌಡರೂ ಗಟ್ಟಿಯಾಗಿದ್ದಾರೆ. ಎಲ್ಲರೂ ಸೇರಿ ಪಕ್ಷವನ್ನು ಕಟ್ಟೋಣ. ಪಕ್ಷಕ್ಕೆ ರಾಜ್ಯದಲ್ಲಿ ಶಕ್ತಿ ಇದೆ. ಇದನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಎಲ್ಲಕಾರ್ಯಕರ್ತರು ಧೈರ್ಯವಾಗಿ ಮುನ್ನುಗ್ಗಿ. ಈ ಭಾರಿ ಜನತಾದಳ ಸರಕಾರ ಖಂಡಿತ,”ಎಂದು ಹುರಿದುಂಬಿಸಿದರು.
”ಮೊರಾರ್ಜಿ ದೇಸಾಯಿ ಅವರು ಈ ಪಕ್ಷವನ್ನು ನನಗೆ ಕೊಟ್ಟಿದ್ದರು. ಜನತಾದಳ ಎಷ್ಟೇ ಭಾಗವಾದರೂ ಪಕ್ಷ ಉಳಿದುಕೊಂಡಿದೆ. ನಾನು ಹೋದ ಮೇಲೂ ಪಕ್ಷ ಉಳಿಯುತ್ತದೆ. ಈ ಪಕ್ಷವನ್ನು ಮುಗಿಸುತ್ತೇನೆ ಎನ್ನುವ ಮಹಾನುಭಾವ ಹುಟ್ಟಲು ಸಾಧ್ಯವಿಲ್ಲ,” ಎಂದು ದೇವೇಗೌಡರು ಗುಡುಗಿದರೆ, ”ಎಲ್ಲರೂ ಸೇರಿ ಪಕ್ಷ ಕಟ್ಟೋಣ. ಕುಮಾರಸ್ವಾಮಿ ಅವರ ಪಂಚರತ್ನ ಕನಸು ನನಸಾಗಬೇಕು. ಅದಕ್ಕೆ ಮತ್ತೊಮ್ಮೆ ಅವರು ಮುಖ್ಯಮಂತ್ರಿಯಾಗಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟೋಣ,” ಎಂದು ನಿಖಿಲ್ ಕುಮಾಸ್ವಾಮಿ ಮನವಿ ಮಾಡಿಕೊಂಡರು.
ಜೆಡಿಎಸ್ ಫಿನಿಕ್ಸ್ನಂತೆ ಮತ್ತೆ ಎದ್ದು ಬರಲಿದೆ
”ಪಕ್ಷ ಫಿನಿಕ್ಸ್ನಂತೆ ಮತ್ತೆ ಎದ್ದು ಬರಲಿದೆ. ದೇವೇಗೌಡರೇ ಪಕ್ಷಕ್ಕೆ ತಂದೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂಬ ಛಲ ಗೌಡರಲ್ಲಿದೆ. ವಿಸಿಟಿಂಗ್ ಕಾರ್ಡ್ ನಾಯಕರಾಗದೇ ಪಕ್ಷವನ್ನು ಸಂಘಟಿಸೋಣ ” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದರು.
ತಗ್ಗಿ ಬಗ್ಗಿ ನಡಿಯಿರಿ ಎಂದು ಎಚ್ಡಿ ಕುಮಾರಸ್ವಾಮಿ ಹೇಳಿದ್ದೇಕೆ
ಕರ್ನಾಟಕದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಬಿಜೆಪಿ ಜತೆ ಮೈತ್ರಿಗೆ ಮುಂದಾಗಿದೆ. ಸದ್ಯ ಕೇಂದ್ರದಲ್ಲಿ ಕುಮಾರಸ್ವಾಮಿ ಅವರು ಮೋದಿಯ ನೆಚ್ಚಿನ ಸಚಿವರಾಗಿ ಅಧಿಕಾರದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ನಾಯಕರ, ಕಾರ್ಯಕರ್ತರ ಗಲಾಟೆ, ಅಪಸ್ವರ, ವಿರುದ್ಧ ಹೇಳಿಕೆಗಳಿಂದ ಮೈತ್ರಿಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಕಾರಣಕ್ಕೆ ಎಚ್ಡಿ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ತಗ್ಗಿಬಗ್ಗಿ ನಡೆಯುಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.