ಕಾಲ್ತುಳಿತ ಪ್ರಕರಣದಲ್ಲಿ ನಮ್ಮ ಸರಕಾರದ್ದೇನೂ ತಪ್ಪಿಲ್ಲ, ಮುಜುಗರ ಯಾಕೆ.? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

Spread the love

ವಿಧಾನಸೌಧದ ಬಳಿ ಆರ್‌ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್)ಯವರು. ಕೆಎಸ್‌ಸಿಎ ಕಾರ್ಯದರ್ಶಿ ಮತ್ತು ಖಜಾಂಚಿ ಅವರು ವಿಧಾನಸೌಧದ ಬಳಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದರು.

ನಾನು ಕಾರ್ಯಕ್ರಮಕ್ಕೆ ಹೋದೆ ಅಷ್ಟೇ. ಇಷ್ಟು ಬಿಟ್ಟರೆ ಬೇರೇನೂ ನನಗೆ ಗೊತ್ತಿಲ್ಲ. ಇದರಲ್ಲಿ ಸರಕಾರದ ತಪ್ಪಿಲ್ಲ. ಸ್ಟೇಡಿಯಂ ಕಾರ್ಯಕ್ರಮಕ್ಕೆ ನನ್ನನ್ನು ಯಾರೂ ಕರೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ , ಕಾಲ್ತುಳಿತ ಪ್ರಕರಣದಲ್ಲಿ ಸರಕಾರ ತಪ್ಪೇ ಮಾಡದ ಮೇಲೆ ಮುಜುಗರ ಯಾಕೆ? ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ನಾನು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲಿ ಇಂತಹ ಅಹಿತಕರ ಘಟನೆ ಆಗಿರುವುದು ಬೇಸರ ತಂದಿದೆ. ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಹಿತ ಐವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಗುಪ್ತಚರ ಇಲಾಖೆ ಅಧಿಕಾರಿಯನ್ನು ವರ್ಗಾಯಿಸಿದ್ದೇವೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನೂ ತೆಗೆದು ಹಾಕಿದ್ದೇವೆ ಎಂದು ತಿಳಿಸಿದರು.

ಆರ್‌ಸಿಬಿ ಗೆದ್ದಾಗ ಮೆರವಣಿಗೆ ನಡೆಸಲು ಗೃಹ ಸಚಿವರು ನಿರಾಕರಿಸಿದ್ದಕ್ಕೆ ಇದರ ವಿರುದ್ಧ ಬಿಜೆಪಿಯವರು ಟ್ವೀಟ್‌ ಮಾಡಿ, ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಅವರನ್ನು ಅಸಮರ್ಥ ಎಂದು ಮೂದಲಿಸಿದ್ದರು. ಈಗ ಬಿಜೆಪಿಯವರು ಪ್ರಕರಣಕ್ಕೆ ಬೇರೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಡಿದ್ದ ಟ್ವೀಟ್‌ ಅನ್ನು ಮಾಧ್ಯಮದವರ ಮುಂದೆ ಓದಿ ಹೇಳಿದರು.

ವಿಧಾನಸೌಧದ ಮುಂದೆ ಬಿಜೆಪಿ ಪ್ರತಿಭಟನೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಕೇಸ್‌ ದಾಖಲಿಸಲು ನಾನೇನು ತಪ್ಪು ಮಾಡಿದ್ದೇನೆ? ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಪೊಲೀಸರಿಗೆ ಧಮ್ಕಿ ಹಾಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅದು ನೂರಕ್ಕೆ ನೂರು ಸುಳ್ಳು. ಇವರಿಗೆ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಪ್ರೀತಿ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮ ನಡೆಸದಂತೆ ಡಿಪಿಆರ್‌ ಕಾರ್ಯದರ್ಶಿ ಸತ್ಯವತಿ ಅವರಿಗೆ ಡಿಸಿಪಿ ಪತ್ರ ಬರೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾರ್ಯದರ್ಶಿಯವರು ಕೆಲವು ಷರತ್ತುಗಳೊಂದಿಗೆ ಕಾರ್ಯಕ್ರಮ ಮಾಡುವಂತೆ ಸೂಚಿಸಿದ್ದಾರೆ. ಆದರೆ ಇವರು ಷರತ್ತು ಪಾಲಿಸಿಲ್ಲ. ಸರಕಾರ ತೀರ್ಮಾನಿಸಿದರೆ ಕಾರ್ಯಕ್ರಮ ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಡಿಪಿಆರ್‌ ಕಾರ್ಯದರ್ಶಿ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟಿದ್ದಾರೆ. ವಿಧಾನಸೌಧದ ಬಳಿ ಘಟನೆ ನಡೆದಿದೆಯಾ? ಘಟನೆ ನಡೆದಿರುವುದು ಕ್ರೀಡಾಂಗಣದಲ್ಲಿ. ಅಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಯಾರು? ಅಲ್ಲಿ ಬಂದೋಬಸ್ತ್ ಮಾಡಿದ್ದು ಯಾರು? ಅದಕ್ಕಾಗಿ ಸರಿಯಾದ ರೀತಿ ಬಂದೋಬಸ್ತ್ ಮಾಡಿಲ್ಲ ಎಂದು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದರು.

ಸತ್ಯವತಿ ಮೇಲೆ ಕ್ರಮ ಜರಗಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸತ್ಯವತಿ ಏನು ತಪ್ಪು ಮಾಡಿದ್ದಾರೆ. ಅವರದ್ದು ತಪ್ಪಿಲ್ಲದಿದ್ದರೆ ಕ್ರಮ ಕೈಗೊಳ್ಳಲು ಹೇಗೆ ಸಾಧ್ಯ? ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಮಾಡಿರುವ ಬಗ್ಗೆ ನನಗೆ ಬೆಂಗಳೂರು ಕಮಿಷನರ್‌ ಮಾಹಿತಿ ನೀಡಿಲ್ಲ. ಸರಕಾರದ ಮುಖ್ಯಸ್ಥನಾದ ನನಗೆ ಅವರು ತಿಳಿಸಿಲ್ಲ. ಹೀಗಿದ್ದ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೇ ಎಂದರು.

ನಮ್ಮ ನಿವಾಸದಲ್ಲಿ ಡಿಸಿಎಂ, ಗೃಹ ಸಚಿವರು ಮತ್ತು ಸಿಎಸ್‌ ಸಭೆ ನಡೆದಿದೆ. ಅದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಸುಹಾಸ್‌ ಪ್ರಕರಣ: ಅಡ್ವೊಕೇಟ್‌ ಜನರಲ್‌ ಜತೆ ಚರ್ಚೆ
ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಿರುವುದರ ಬಗ್ಗೆ ಮಾತನಾಡಿ, ಡಿಜಿಪಿ ಈಗಷ್ಟೇ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಡ್ವೊಕೇಟ್‌ ಜನರಲ್‌ ಬಳಿ ಚರ್ಚಿಸಿ ತೀರ್ಮಾನ ಮಾಡುವಂತೆ ಹೇಳಿದ್ದೇನೆ ಎಂದರು.

ಪ್ರಧಾನಿ ರಾಜೀನಾಮೆ ಕೇಳಿದ್ದೆವಾ.?
ಈ ಘಟನೆ ಸಂಬಂಧ ನನ್ನ ರಾಜೀನಾಮೆ ಕೇಳಲಾಗುತ್ತಿದೆ. ಕುಂಭಮೇಳದಲ್ಲಿ ಹಲವರು ಸಾವನ್ನಪ್ಪಿದಾಗ ಪ್ರಧಾನಿ ರಾಜೀನಾಮೆ ನೀಡಿದರಾ? ಸೇತುವೆ ಬಿದ್ದಾಗ ಯಾರಾದರು ಪ್ರಧಾನಿ ರಾಜೀನಾಮೆ ಕೇಳಿದರಾ? ಕುಮಾರಸ್ವಾಮಿ ರಾಜೀನಾಮೆ ಕೇಳಬಹುದಿತ್ತಲ್ಲವೇ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದು ಸಿಎಂ ಹೇಳಿದರು.

WhatsApp Group Join Now

Spread the love

Leave a Reply