ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡಿಕೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರ ಸೂಚನೆಯಂತೆ, ಮೊದಲ ಹಂತದಲ್ಲಿ ಅಕ್ಟೋಬರ್ 2ರಿಂದ ಗ್ರಾಮಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆ ಆರಂಭವಾಗಲಿದೆ.
ಇ-ಸ್ವತ್ತು ನೀಡಿಕೆಯಲ್ಲಿನ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಸರಳೀಕೃತ ಪ್ರಕ್ರಿಯೆಯೊಂದಿಗೆ ‘ಇ-ಸ್ವತ್ತು-03’ ತಂತ್ರಾಂಶ ಸಿದ್ಧಪಡಿಸುವಂತೆ ಸಚಿವರು ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ. ಅರ್ಜಿ ಸಲ್ಲಿಕೆ, ದಾಖಲೆ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆ ಸೇರಿದಂತೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ನವೆಂಬರ್ನಲ್ಲಿ 10 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ಗುರಿ
ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ಆಸ್ತಿಗಳು, ಸರ್ಕಾರಿ ಜಾಗದಲ್ಲಿರುವ ಆಸ್ತಿಗಳು, ಕೆರೆ ಅಂಗಳ ಅಥವಾ ಬಿ-ಖರಾಬು ಪ್ರದೇಶದಲ್ಲಿ ನಿರ್ಮಿಸಿರುವ ಮನೆಗಳು ಹಾಗೂ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು ಹೊರತುಪಡಿಸಿ, ನಿಯಮಾನುಸಾರ ಅರ್ಹ ವಾರಸುದಾರರಿಗೆ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಅಕ್ಟೋಬರ್ 2ರಿಂದ ಅರ್ಜಿಗಳನ್ನು ಸ್ವೀಕರಿಸಿ, ರಾಜ್ಯೋತ್ಸವ ಮಾಸವಾದ ನವೆಂಬರ್ನಲ್ಲಿ ಕನಿಷ್ಠ 10 ಲಕ್ಷ ಆಸ್ತಿಗಳಿಗೆ ಇ-ಸ್ವತ್ತುಗಳನ್ನು ಮನೆ ಬಾಗಿಲಿಗೇ ತಲುಪಿಸುವ ಗುರಿಯನ್ನು ಸಚಿವರು ನೀಡಿದ್ದಾರೆ.
ದಾಖಲೆಗಳಿಲ್ಲದ ಆಸ್ತಿಗಳಿಗೂ ಅವಕಾಶ
ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ ನೋಂದಾಯಿತ ಕ್ರಯಪತ್ರ, ಹಕ್ಕುಪತ್ರ ಸೇರಿದಂತೆ ಸೂಕ್ತ ದಾಖಲೆಗಳಿಲ್ಲದಿರುವುದರಿಂದ ಇ-ಸ್ವತ್ತು ಪಡೆಯಲು ಸಾಧ್ಯವಾಗದವರಿಗೆ ಸರ್ಕಾರ ಹೊಸ ಅವಕಾಶ ಕಲ್ಪಿಸಿದೆ.
ಹಿತ್ತಲು, ಮನೆ ಅಂಗಳ ಸೇರಿದಂತೆ 4,000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಆಸ್ತಿಗಳಿಗೆ ನಿಯಮಾನುಸಾರ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸಲಾಗುತ್ತದೆ.
ಅರ್ಜಿದಾರರು ಅದೇ ಗ್ರಾಮದಲ್ಲಿ, ಅದೇ ಆಸ್ತಿಯಲ್ಲಿ ವಾಸಿಸುತ್ತಿದ್ದಾರೆಯೇ? ಅವರು ಆಸ್ತಿಯ ನೈಜ ಮಾಲೀಕರೇ? ಎಂಬುದನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲಿಸಲಾಗುತ್ತದೆ. ಬಳಿಕ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ 21 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಕುರಿತು ನೋಟಿಸ್ ಅನ್ನು ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದಿದ್ದರೆ, ನಿಯಮಾನುಸಾರ ಪರಿಶೀಲನೆ ಪೂರ್ಣಗೊಳಿಸಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಯಾವ ದಾಖಲೆಗಳನ್ನು ಸಲ್ಲಿಸಬೇಕು?
ನೋಂದಾಯಿತ ದಾಖಲೆಗಳಿಲ್ಲದ ಆಸ್ತಿಯ ಮಾಲೀಕರು ತಮ್ಮ ಬಳಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಕಟ್ಟಡದ ವಿದ್ಯುತ್ ಬಿಲ್, ಹಿಂದಿನ ಮನೆಗಂದಾಯ ಅಥವಾ ತೆರಿಗೆ ಪಾವತಿ ರಸೀದಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ನಿವಾಸಿ ಪ್ರಮಾಣಪತ್ರ ಸೇರಿದಂತೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದರೊಂದಿಗೆ ತಾವೇ ಆಸ್ತಿಯ ಮಾಲೀಕರಾಗಿದ್ದು, ಅರ್ಜಿಯಲ್ಲಿ ನೀಡಿರುವ ದಾಖಲೆ ಅಥವಾ ಮಾಹಿತಿ ತಪ್ಪಾಗಿದ್ದರೆ ತಮ್ಮ ಹೆಸರಿನಲ್ಲಿ ನೀಡಿರುವ ಇ-ಸ್ವತ್ತನ್ನು ರದ್ದುಪಡಿಸಬಹುದು ಎಂಬುದನ್ನು ಒಪ್ಪಿಕೊಂಡು ಅಫಿಡವಿಟ್ ಸಹ ಸಲ್ಲಿಸಬೇಕು.
ಅಕ್ಟೋಬರ್ 2ರಿಂದ ಸ್ಥಳ ಪರಿಶೀಲನೆ
ಇ-ಸ್ವತ್ತು ಪ್ರಕ್ರಿಯೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಅಕ್ಟೋಬರ್ 2ರಿಂದ ಪಂಚನಾಮೆ ಹಾಗೂ ಸ್ಥಳ ಪರಿಶೀಲನಾ ಪ್ರಕ್ರಿಯೆ ಆರಂಭಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ನಂತರ ನವೆಂಬರ್ 1ರಿಂದ ‘ಮನೆ ಬಾಗಿಲಿಗೇ ಇ-ಸ್ವತ್ತು’ ಅಭಿಯಾನ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಮಾಲೀಕರು ಹಲವು ತಿಂಗಳುಗಳಿಂದ ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದರೂ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿರುವುದು ಹಾಗೂ ಗ್ರಾಮಠಾಣಾ ಪ್ರದೇಶದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಅನೇಕ ಕುಟುಂಬಗಳ ಬಳಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಕೊರತೆ ಇರುವುದನ್ನು ಸರ್ಕಾರ ಗಮನಿಸಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಚಿವರು ಕಾರ್ಯದರ್ಶಿ ನೇತೃತ್ವದಲ್ಲಿ ಪಂಚ ಸದಸ್ಯರ ಸಮಿತಿಯನ್ನು ರಚಿಸಿ ವರದಿ ಪಡೆದಿದ್ದರು. ಸಮಿತಿಯ ವರದಿ ಹಾಗೂ ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ ಇ-ಸ್ವತ್ತು ಪ್ರಕ್ರಿಯೆಯನ್ನು ಸರಳಗೊಳಿಸುವ ಕ್ರಮಕ್ಕೆ ಇದೀಗ ಚಾಲನೆ ನೀಡಲಾಗಿದೆ.
ಇ-ಸ್ವತ್ತು ನೀಡಿಕೆಯಲ್ಲಿ ಪಾರದರ್ಶಕತೆ ಕಾಪಾಡುವುದು, ಅರ್ಹ ಆಸ್ತಿ ಮಾಲೀಕರಿಗೆ ವಿಳಂಬವಿಲ್ಲದೆ ದಾಖಲೆ ಒದಗಿಸುವುದು ಹಾಗೂ ದಾಖಲೆಗಳಿಲ್ಲದ ಗ್ರಾಮಠಾಣಾ ಆಸ್ತಿಗಳ ಸಮಸ್ಯೆ ಪರಿಹರಿಸುವುದು ಈ ಹೊಸ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ.
ಗ್ರಾಮೀಣ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಬಿಗ್ ರಿಲೀಫ್ ; ಅ.2 ರಿಂದ ಇ-ಸ್ವತ್ತು ವಿತರಣೆ ಆರಂಭ
WhatsApp Group
Join Now