ರಾಜಧಾನಿಯ ರಾಜರಾಜೇಶ್ವರಿ ನಗರದ (RR Nagar) ಬಂಗಾರಪ್ಪ ಗುಡ್ಡೆ ಬಳಿ ಇರುವ ‘ಎಲಿಗಂಟ್ ಅಪಾರ್ಟ್ಮೆಂಟ್’ನಲ್ಲಿ ನಡೆದ 45 ವರ್ಷದ ಉದ್ಯಮಿ ವೈಶಾಕ್ ಸಾವಿನ ಪ್ರಕರಣ ಈಗ ಹಲವು ಸ್ಪೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಅವರ ಆಪ್ತ ಗೆಳೆಯನಾಗಿದ್ದ ವೈಶಾಕ್, ನಿನ್ನೆ ರಾತ್ರಿ ಸುಮಾರು 8:30ರ ವೇಳೆಗೆ ನಟಿಯ ಫ್ಲಾಟ್ನಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಕೇವಲ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ನಟಿಯ ಫ್ಲಾಟ್ಗೆ ಬಂದಿದ್ದೇಕೆ ವೈಶಾಕ್?
ಕಾರಿನ ಆಟೋಮೊಬೈಲ್ ಮತ್ತು ಗ್ಯಾರೇಜ್ ಉದ್ಯಮ ನಡೆಸುತ್ತಿದ್ದ ವೈಶಾಕ್ ಅವರಿಗೆ 14 ವರ್ಷದ ಮಗನಿದ್ದಾನೆ. ಆದರೆ, ಕಳೆದ ಕೆಲವು ಸಮಯದಿಂದ ಅವರ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿಲ್ಲ. ಉದ್ಯಮಿ ಎವಿಆರ್ ರೆಡ್ಡಿ (AVR Reddy) ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ವೈಶಾಕ್ ಅರೆಸ್ಟ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ವೈಶಾಕ್ ಮತ್ತು ಅವರ ಪತ್ನಿ ನಡುವೆ ಸದಾ ಗಲಾಟೆ ನಡೆಯುತ್ತಿತ್ತು. ಪತ್ನಿಯೊಂದಿಗಿನ ಈ ತೀವ್ರ ವೈಮನಸ್ಸಿನಿಂದಾಗಿ ವೈಶಾಕ್ ತಮ್ಮ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು ಮತ್ತು ಆಗಾಗ್ಗೆ ನಟಿ ಕೃಷಿ ತಾಪಂಡ (ಕ್ರಿಷಿ ತಾಪಂಡ) ಅವರ ಫ್ಲಾಟ್ಗೆ ಬಂದು ಉಳಿದುಕೊಳ್ಳುತ್ತಿದ್ದರು. ಈ ಫ್ಲಾಟ್ನ ಎರಡು ಕೀಲಿ ಕೈಗಳ ಪೈಕಿ ಒಂದು ಕೀ ಕೃಷಿ ಬಳಿ ಇದ್ದರೆ, ಮತ್ತೊಂದು ವೈಶಾಕ್ ಬಳಿಯೇ ಇರುತ್ತಿತ್ತು. ನಿನ್ನೆ ಕೂಡ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು ಬೇಸತ್ತಿದ್ದ ವೈಶಾಕ್ ಇದೇ ಕಾರಣಕ್ಕೆ ಕೃಷಿ ಅವರ ಮನೆಗೆ ಬಂದಿದ್ದರು.
ಸಾವಿಗೂ ಮುನ್ನ ನಟಿಗೆ ಫೋನ್ ಮಾಡಿದ್ದ ವೈಶಾಕ್!
ಘಟನೆ ನಡೆದ ಸಂದರ್ಭದಲ್ಲಿ ನಟಿ ಕೃಷಿ ತಾಪಂಡ ಮನೆಯಲ್ಲಿ ಇರಲಿಲ್ಲ. ಅವರು ಕಳೆದ ಮೂರು ದಿನಗಳಿಂದ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನಲ್ಲಿರುವ ‘ಕ್ಷೇಮವನ’ದಲ್ಲಿ ತಂಗಿದ್ದಾರೆ. ನಿನ್ನೆ ರಾತ್ರಿ ತೀವ್ರ ಖಿನ್ನತೆಗೆ ಒಳಗಾಗಿದ್ದ ವೈಶಾಕ್, ಕ್ಷೇಮವನದಲ್ಲಿದ್ದ ಕೃಷಿ ಅವರಿಗೆ ಫೋನ್ ಮಾಡಿ “ನಾನು ಆತ್ಮ*ಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದರಿಂದ ಆತಂಕಗೊಂಡ ನಟಿ ಕೃಷಿ ತಾಪಂಡ ತಕ್ಷಣವೇ ಈ ವಿಷಯವನ್ನು ಪೊಲೀಸರಿಗೆ ಹಾಗೂ ವೈಶಾಕ್ ಕುಟುಂಬದವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಕೃಷಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ತಕ್ಷಣವೇ ಆರ್.ಆರ್. ನಗರದ ನಿವಾಸಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಅಷ್ಟರಲ್ಲೇ ವೈಶಾಕ್ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ರೂಮ್ನಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಹಾಗೂ ಮೊಬೈಲ್ನಲ್ಲೂ ಯಾವುದೇ ವಿಡಿಯೋ ಪತ್ತೆಯಾಗಿಲ್ಲ.
ಏನಿದು ₹7 ಕೋಟಿ ಬೆದರಿಕೆ ಪ್ರಕರಣ?
ವೈಶಾಕ್ ಸಾವಿನ ಹಿಂದೆ ಈ ಹಿಂದೆ ನಡೆದಿದ್ದ ಆ ಒಂದು ಗಂಭೀರ ಕ್ರಿಮಿನಲ್ ಕೇಸ್ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಉದ್ಯಮಿ ಅರವಿಂದ್ ರೆಡ್ಡಿ ಅವರಿಗೆ 2026 ಫೆಬ್ರವರಿಯಲ್ಲಿ ಒಂದು ಅನಾಮಧೇಯ ಪತ್ರ ಬಂದಿತ್ತು. ಆ ಪತ್ರದ ಹಿನ್ನೆಲೆಯನ್ನು ಕೆದಕಿದಾಗ ಉದ್ಯಮಿಗೆ ಭೀತಿ ಕಾದಿತ್ತು. ಆ ಪತ್ರದಲ್ಲಿ ಅರವಿಂದ್ ರೆಡ್ಡಿ ಅವರಿಗೆ ಬರೋಬ್ಬರಿ 7 ಕೋಟಿ ರೂಪಾಯಿ ನೀಡುವಂತೆ ಜೀವಬೆದರಿಕೆ ಹಾಕಲಾಗಿತ್ತು. ಇದರ ಹಿಂದೆ ನಟಿ ಕೃಷಿ ತಾಪಂಡ ಮತ್ತು ಅವರ ಗೆಳೆಯ ವೈಶಾಕ್ ಕೈವಾಡ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಹಣಕ್ಕಾಗಿ ಉದ್ಯಮಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಹೆಚ್.ಎ.ಎಲ್ (HAL) ಪೊಲೀಸರು ವೈಶಾಕ್ನನ್ನು ಬಂಧಿಸಿದ್ದರು. ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಗೆ ಬಂದಿದ್ದ ವೈಶಾಕ್ ಮತ್ತು ಕೃಷಿ ತಾಪಂಡ, ಈ ಅನಾಮಧೇಯ ಪತ್ರದ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ನಿಂದ ಸ್ಟೇ (Stay) ತಂದಿದ್ದರು.
ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ವೈಶಾಕ್
ಜೈಲಿಗೆ ಹೋಗಿ ಬಂದಾಗಿನಿಂದ ವೈಶಾಕ್ ತೀವ್ರ ಮಾನಸಿಕ ಖಿನ್ನತೆಗೆ (Depression) ಒಳಗಾಗಿದ್ದರು. ಕೋರ್ಟ್, ಪೊಲೀಸ್ ಕೇಸ್ ಹಾಗೂ ಮನೆಯಲ್ಲಿ ಹೆಂಡತಿಯೊಂದಿಗೆ ಪ್ರತಿದಿನ ನಡೆಯುತ್ತಿದ್ದ ಜಗಳದಿಂದಾಗಿ ಅವರು ಮಾನಸಿಕವಾಗಿ ಹೈರಾಣಾಗಿದ್ದರು. ಇದಕ್ಕಾಗಿ ಅವರು ಈ ಹಿಂದೆ ಡಿಪ್ರೆಷನ್ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯಕ್ಕೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರ್.ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ರೆಸಾರ್ಟ್ನಲ್ಲಿರುವ ನಟಿ ಕೃಷಿ ತಾಪಂಡ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಇನ್ನು ವೈಶಾಕ್ ಕುಟುಂಬದಿಂದ ಮಗನ ಸಾವಿನ ಬಗ್ಗೆ ಲಿಖಿತ ದೂರು ನೀಡಲಾಗಿದೆ. ವೈಶಾಕ್ ತಂದೆ ನೀಡಿದ ದೂರಿನ ಬಳಿಕ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಮನೆಯಲ್ಲಿ ಕೃಷಿ ತಾಪಂಡ ಇರದ ವೇಳೆ ಬಂದ ಗೆಳೆಯ ಸಾವು, ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ ನಟಿ ಹೋಗಿದ್ದೆಲ್ಲಿಗೆ?
WhatsApp Group
Join Now