ಕಮಲ್ ಹಾಸನ್ ನಟನೆಯ ಚಿತ್ರ ಥಗ್ಲೈಫ್ ಮುಂದಿನ ಜೂನ್ 6ರಂದು ಬಿಡುಗಡೆಗೆ ತಯಾರಾಗಿದೆ. ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗ ಚಿತ್ರತಂಡ ಪ್ರಚಾರವನ್ನು ಆರಂಭಿಸಿದ್ದು, ಪ್ರಿ ರಿಲೀಸ್ ಇವೆಂಟ್ ಅನ್ನೂ ಸಹ ಭರ್ಜರಿಯಾಗಿ ಮಾಡಿತ್ತು. ಇದೇ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್ ಅವರನ್ನು ಅತಿಥಿಯನ್ನಾಗಿ ಚಿತ್ರತಂಡ ಆಹ್ವಾನಿಸಿತ್ತು.
ಈ ವೇಳೆ ಶಿವರಾಜ್ಕುಮಾರ್ ಮುಂದೆಯೇ ಕಮಲ್ ಹಾಸನ್ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ವಿರುದ್ಧ ಸದ್ಯ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಪರ ಹೋರಾಟಗಾರರು ಸಿಡಿದೆದ್ದಿದ್ದು, ಥಗ್ಲೈಫ್ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೀಗಿರುವಾಗ ಇದೀಗ ಕನ್ನಡದ ಹೆಸರಾಂತ ನಿರ್ಮಾಪಕ ಕೆ. ಮಂಜು ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ಪರಭಾಷಾ ಚಿತ್ರಗಳನ್ನು ಬ್ಯಾನ್ ಮಾಡಲಾಗಲ್ಲ ಎಂದು ಹೇಳಿಕೆ ನೀಡಿದ್ದಾರೆ. ʼಇದು ರಾಜ್ಯಗಳ ನಡುವಿನ ಕಿತ್ತಾಟವಲ್ಲ, ಇದು ಸ್ವಯಂ ಅಪರಾಧ. ನಾವು ಬೇರೆ ಯಾರ ಸಿನಿಮಾನೂ ಬ್ಯಾನ್ ಮಾಡಲ್ಲ. ಮಾಡೋಕೂ ಆಗಲ್ಲ ಎಂದಿದ್ದಾರೆ.
ಇನ್ನೂ ಮುಂದುವರಿದು ಥಗ್ಲೈಫ್ ಮಾತ್ರವಲ್ಲದೇ ಎಲ್ಲ ತಮಿಳು ಚಿತ್ರಗಳನ್ನೂ ಬ್ಯಾನ್ ಮಾಡಬೇಕು ಎಂದು ಕೂಗು ಕೇಳಿಬರುತ್ತಿದೆ ಎಂಬುದರ ಕುರಿತು ಮಾತನಾಡಿದ ಕೆ ಮಂಜು ʼಇಲ್ಲ ಆ ರೀತಿ ನಾವು ಮಾಡೋಕಾಗಲ್ಲ. ಕಾನೂನು ಚೌಕಟ್ಟಲ್ಲಿ ಆ ಥರ ಇಲ್ಲ. ಆ ಥರ ಮಾಡಬಾರದು. ಆಮೇಲೆ ಒಬ್ಬ ತಪ್ಪು ಮಾಡಿದರೆ ಎಲ್ಲರಿಗೂ ಬರೆ ಹಾಕೋಕೆ ಆಗುತ್ತಾ? ಪ್ರೀತಿಯಿಂದ ಬಂದರೆ ಪ್ರೀತಿ ಕೊಡ್ತೀವಿ. ಬ್ಯಾನ್ ಅನ್ನು ನಾವು ಮಾಡೋಕಾಗಲ್ಲ, ಇದು ಸರ್ಕಾರಕ್ಕೆ ಸಂಬಂಧಪಟ್ಟ ವಿಷಯ. ನಾಡು, ನುಡಿ ವಿಷಯ ಬಂದಾಗ ನಮ್ಮ ಹೋರಾಟಗಾರರು ಜೊತೆ ಇದ್ದೇ ಇರ್ತಾರೆ, ಅವರ ಜೊತೆ ವಾಣಿಜ್ಯ ಮಂಡಳಿಯವ್ರು ಸದಾ ಇದ್ದೇ ಇರ್ತೇವೆʼ ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡೋಕಾಗಲ್ಲ ; ಕಾರಣ ಬಿಚ್ಚಿಟ್ಟ ನಿರ್ಮಾಪಕ ಕೆ ಮಂಜು
WhatsApp Group
Join Now