ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನಲ್ಲಿ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಕೇಳಿ ಪ್ರಿಯಕರ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.
ಮೃತ ಪ್ರೇಮಿಗಳನ್ನು ಬನಹಟ್ಟಿಯ ಕೆಹೆಚ್ಡಿಸಿ ಕಾಲೋನಿಯ ಪವಿತ್ರಾ ಒಂಟಿ (19) ಹಾಗೂ ಅಸ್ಕಿ ಗ್ರಾಮದ ಕಾರ್ತಿಕ್ ನಾಯಕ್ (19) ಎಂದು ಗುರುತಿಸಲಾಗಿದೆ. ಮಂಗಳವಾರ ಇವರಿಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ.
ಇದರಿಂದ ಬೇಸತ್ತ ಪವಿತ್ರಾ ಮೊದಲು ಬನಹಟ್ಟಿಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪವಿತ್ರಾ ಸಾವನ್ನಪ್ಪಿದ ವಿಷಯ ತಿಳಿದ ಕಾರ್ತಿಕ್ ತೀವ್ರ ಆಘಾತಕ್ಕೊಳಗಾಗಿದ್ದಾನೆ.
ಅಲ್ಲದೇ ತೀವ್ರ ಮನನೊಂದು ತಾನೂ ಕೂಡ ಬದುಕಿರಬಾರದೆಂದು ನಿರ್ಧರಿಸಿ, ಅಸ್ಕಿ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ. ಇಬ್ಬರೂ ತಾರುಣ್ಯದಲ್ಲೇ ಬದುಕು ಕೊನೆಗೊಳಿಸಿರುವುದು ಎರಡೂ ಕುಟುಂಬಗಳಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.
ಸದ್ಯ ವಿಷಯ ತಿಳಿಯುತ್ತಿದ್ದಂತೆಯೇ ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರೇಯಸಿಯ ಸಾವಿನ ಸುದ್ದಿ ಕೇಳಿ ಪ್ರಿಯತಮ ನೇಣಿಗೆ ಶರಣು!
WhatsApp Group
Join Now