ಖರ್ಗೆ – ಕೆ ಜೆ ಜಾರ್ಜ್ ಭೇಟಿಯ ನಂತರ ಎಲ್ಲವೂ ಸುಸೂತ್ರ – ರಾಹುಲ್ ಸಮ್ಮುಖದಲ್ಲಿ ನಾಳೆ (ನ.25) ಫೈನಲ್?

Spread the love

ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾವಣೆ ಎನ್ನುವ ಗೊಂದಲಕ್ಕೆ ಇನ್ನೆರಡು ದಿನಗಳಲ್ಲಿ ಪರಿಹಾರ ಸಿಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶದಿಂದ ಹಿಂದಿರುಗುತ್ತಲೇ, ಎಲ್ಲಾ ಗೊಂದಲಕ್ಕೂ ಫುಲ್ ಸ್ಟಾಪ್ ಬೀಳಬಹುದು.

ವಿದೇಶ ಪ್ರವಾಸದಿಂದ ರಾಹುಲ್ ಗಾಂಧಿ ಇಂದು (ನ. 24) ದೆಹಲಿಗೆ ವಾಪಸ್ ಆಗಲಿದ್ದಾರೆ. ನಾಳೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ರಾಹುಲ್ ಗಾಂಧಿ ಭೇಟಿಗೆ ಸಮಯವನ್ನು ಕೇಳಿದ್ದಾರೆಂದು ವರದಿಯಾಗಿದೆ. ಹಾಗಾಗಿ, ಇನ್ನೆರಡು ದಿನಗಳಲ್ಲಿ ಎಲ್ಲವೂ ಸುಸೂತ್ರವಾಗಿ ಇತ್ಯರ್ಥವಾಗಲಿದೆ.

ಇಂಧನ ಇಲಾಖೆಯ ಸಚಿವ ಕೆಜೆ ಜಾರ್ಜ್, ನಿನ್ನೆ ಮಲ್ಲಿಕಾರ್ಜುನ ಖರ್ಗೆಯವರನ್ನು ಅವರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿಯಾಗಿದ್ದರು. ಸುಮಾರು, ತೊಂಬತ್ತು ನಿಮಿಷಗಳ ಸುದೀರ್ಘ ಮಾತುಕತೆಯ ನಂತರ ಜಾರ್ಜ್, ಅಲ್ಲಿಂದ, ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದರು.

ರಾಜ್ಯ ಕಾಂಗ್ರೆಸ್ಸಿನಲ್ಲಿ ಜೊತೆಜೊತೆಯಾಗಿ ಬೆಳೆದಿರುವ ಜಾರ್ಜ್ – ಡಿಕೆ ಶಿವಕುಮಾರ್, 45ವರ್ಷಗಳಿಂದ ಸ್ನೇಹಿತರು. ಅಂದು ಏನು ಹೈಕಮಾಂಡ್ ಅಂಗಣದಲ್ಲಿ ಮಾತುಕತೆ ನಡೆದು, ಒಪ್ಪಂದವಾಗಿತ್ತೋ, ಅದರ ಪ್ರಕಾರ ನಡೆಯಬೇಕು ಎನ್ನುವ ಕಂಡೀಷನ್ ಅನ್ನು ಡಿಕೆಶಿ ಮತ್ತೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ – ರಾಜ್ಯ ಸರ್ಕಾರದ ನಡುವೆ ಬ್ರಿಡ್ಜ್ ನಂತಿರುವ ಕೆಜೆ ಜಾರ್ಜ್, ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಆ ಭೇಟಿಯ ವೇಳೆ, ಏನು ಮಾತುಕತೆ ನಡೆದಿತ್ತೋ, ಅದರ ಒಟ್ಟಾರೆ ಸಾರಾಂಶವನ್ನು ಜಾರ್ಜ್, ಡಿಕೆಶಿ ಮುಂದೆ ಇಟ್ಟಿದ್ದಾರೆ. ಆ ಭೇಟಿಯ ನಂತರ, ರಾಜ್ಯ ಸರ್ಕಾರದ ಕೆಲವು ಸಚಿವರ ಹೇಳಿಕೆಯ ಟೋನ್ ಬದಲಾಗುತ್ತಿದೆ.

ತಮ್ಮ ಭೇಟಿಯು ಸುದ್ದಿಯಾಗುತ್ತಿದ್ದಂತೆಯೇ ಕೆಜೆ ಜಾರ್ಜ್ ಇದಕ್ಕೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. “ನಾವು ಯಾರ ಪರವಾಗಿಯೂ ಅಲ್ಲಿಗೆ ಹೋಗಿದ್ದಲ್ಲ. ಎಐಸಿಸಿ ನನಗೆ ಆತರದ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ಗ್ರೇಟರ್ ಬೆಂಗಳೂರು ಚುನಾವಣೆಯ ಬಗ್ಗೆ ಮಾತುಕತೆ ನಡೆಸಲು ನಾನೇ ಹೋಗಿದ್ದೆ. ಡಿಕೆ ಶಿವಕುಮಾರ್ ಮತ್ತು ನಾನು ಸಹದ್ಯೋಗಿ, ಅವರನ್ನು ಸಮಾಧಾನದಿಂದ ಇರಲು ನಾನು ಹೇಗೆ ಹೇಳಲು ಸಾಧ್ಯ” ಎಂದು ಹೇಳಿದ್ದಾರೆ.

ಈಗಾಗಲೇ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ಇಬ್ಬರನ್ನೂ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಚರ್ಚಿಸಿದ್ದಾರೆ. ಇಬ್ಬರ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ಇದರ ಮಾಹಿತಿಯನ್ನು ರಾಹುಲ್ ಗಾಂಧಿ ಭೇಟಿಯ ವೇಳೆ, ಅವರಿಗೆ ನೀಡುವ ಸಾಧ್ಯತೆಯಿದೆ. ಹಾಗಾಗಿ, ನಾಳೆ (ನ.25) ಕಾಂಗ್ರೆಸ್ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ನಾನೇ ಪೂರ್ಣಾವಧಿಗೆ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ, ಅದಕ್ಕೆ ನಾನು ಬದ್ದ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಸೂಚಿಸಿದರೆ, ಮುಂದುವರಿಯುತ್ತೇನೆ, ಇಲ್ಲಾಂದ್ರೆ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ಸಿನ ಈಗಿನ ವಿದ್ಯಮಾನಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬಹುದು. ನಾಯಕರು ಮತ್ತು ಕಾರ್ಯಕರ್ತರ ಬೇಸರಕ್ಕೂ ಕಾರಣವಾಗಬಹುದು. ಹಾಗಾಗಿ, ಇದಕ್ಕೆ ಆದಷ್ಟು ಬೇಗ ಫುಲ್ ಸ್ಟಾಪ್ ಇಡುವುದು ಉತ್ತಮ ಎನ್ನುವ ಸಲಹೆಯನ್ನು, ಹಲವು ಮುಖಂಡರು, ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

WhatsApp Group Join Now

Spread the love

Leave a Reply