ಹುಬ್ಬಳ್ಳಿ: “ಪತಿಯಾಗಲಿ, ಪತ್ನಿಯಾಗಲಿ.. ಇಬ್ಬರಲ್ಲಿ ಅನ್ಯೋನ್ಯತೆ ಇರಬೇಕು. ನಂಬಿಕೆ, ಪ್ರೀತಿ, ವಿಶ್ವಾಸ ಎಲ್ಲ ಸೇರಿದ್ರೆ ಮಾತ್ರ ಅದೊಂದು ಸುಂದರ ಸಂಸಾರವಾಗಲು ಸಾಧ್ಯ. ಇಲ್ಲದಿದ್ದರೆ ಆ ಸಂಸಾರ ನರಕಕ್ಕಿಂತಲೂ ಹಿಂಸೆಯಾಗುತ್ತದೆ.” ಇದಕ್ಕೆ ಸಾಕ್ಷಿಯೆಂಬಂತೆ, ಹುಬ್ಬಳ್ಳಿಯಲ್ಲಿ ಹೆಂಡತಿ ಮತ್ತು ಮಗಳ ತೀವ್ರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಅಮಾಯಕ ಗಂಡನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
18 ವರ್ಷಗಳ ಪ್ರೀತಿಯ ಸಂಸಾರ ಈಗ ದಿಕ್ಕಾಪಾಲ!
ಹುಬ್ಬಳ್ಳಿಯ ಬೆಂಗೇರಿಯ ಹರಿಜನ ಕಾಲೋನಿಯ ನಿವಾಸಿ ಸಂತೋಷ್ ಅಳ್ಳೂರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಂತೋಷ್ ಹಾಗೂ ಆತನ ಪತ್ನಿ ಲಲಿತಾ ಅಳ್ಳೂರು ಕಳೆದ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಇವರ ಸಂಸಾರ ಚೆನ್ನಾಗಿಯೇ ಇತ್ತು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಗಂಡ ಸಂತೋಷ್ ತಾನೇ ಮುತುವರ್ಜಿ ವಹಿಸಿ ಪತ್ನಿ ಲಲಿತಾಳಿಗೆ ಅಂಗನವಾಡಿಯಲ್ಲಿ ಕೆಲಸ ಕೂಡ ಕೊಡಿಸಿದ್ದನು. ಆದರೆ ಅದೇ ಕೆಲಸ ಮುಂದೆ ಇವರ ಸಂಸಾರಕ್ಕೆ ಮುಳ್ಳಾಗುತ್ತದೆ ಎಂದು ಆತ ಯೋಚಿಸಿರಲಿಲ್ಲ.
ಕೆಲಸ ಸಿಗುತ್ತಿದ್ದಂತೆ ಹೆಂಡತಿಯ ಆಟ ಶುರು! ಗಂಡನ ಆರೋಪವೇನು?
ಸ್ಥಳೀಯರ ಮತ್ತು ಲಭ್ಯವಿರುವ ಮಾಹಿತಿ ಪ್ರಕಾರ, ಪತ್ನಿ ಲಲಿತಾಳಿಗೆ ಅಂಗನವಾಡಿಯಲ್ಲಿ ಕೆಲಸ ಖಾಯಂ ಆಗುತ್ತಿದ್ದಂತೆ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಶುರುವಾಗಿತ್ತು. ಗಂಡನನ್ನು ಬಿಟ್ಟು ಊರೂರು ಸುತ್ತಲು ಆರಂಭಿಸಿದ್ದಳು. ಇದೇ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ತೀವ್ರ ಗಲಾಟೆಗಳಾಗುತ್ತಿದ್ದವು.
ಇಷ್ಟಕ್ಕೇ ನಿಲ್ಲದ ಪತ್ನಿ, ಗಂಡನ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಳು. ಆದರೆ ಪೊಲೀಸರು ಇವರ ಕೌಟುಂಬಿಕ ಸಮಸ್ಯೆಯನ್ನು ಇತ್ಯರ್ಥ ಮಾಡುವ ಬದಲು, ಉಲ್ಟಾ ಗಂಡನಿಗೇ ಕಾಟ ಕೊಡಲು ಶುರು ಮಾಡಿದ್ದರು ಎನ್ನಲಾಗಿದೆ. ಇತ್ತ ಹೆಂಡತಿಯ ಜೊತೆಗೆ ಮಗಳು ಕೂಡ ಸೇರಿಕೊಂಡು ತಂದೆಗೆ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದಾಳೆ.
ಡೆತ್ನೋಟ್ ಬರೆದಿಟ್ಟು ಸಾವಿನ ಹಾದಿ ಹಿಡಿದ ಪತಿ!
ಯಾವಾಗ ಹೆಂಡತಿ, ಮಗಳು ಹಾಗೂ ಇತ್ತ ಪೊಲೀಸರ ಕಾಟ ತೀವ್ರವಾಯಿತೋ, ಸಂತೋಷ್ ಮಾನಸಿಕವಾಗಿ ಸಂಪೂರ್ಣ ಜರ್ಜರಿತನಾಗಿದ್ದಾನೆ. “ಇನ್ನು ಈ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ” ಎಂದು ನಿರ್ಧರಿಸಿದ ಆತ, ತನ್ನ ಸಾವಿಗೆ ಹೆಂಡತಿ ಮತ್ತು ಮಗಳೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ತನ್ನ ಪ್ರಾಣವನ್ನು ತಾನೇ ಕಳೆದುಕೊಂಡಿದ್ದಾನೆ. ಹೆಂಡತಿಯ ಅಟ್ಟಹಾಸಕ್ಕೆ ಅಮಾಯಕ ಗಂಡನ ಪ್ರಾಣಪಕ್ಷಿ ಹಾರಿಹೋಗಿದ್ದು, 18 ವರ್ಷಗಳ ಸುಂದರ ಸಂಸಾರ ಈಗ ಬೀದಿಗೆ ಬಿದ್ದಿದೆ.
ಆರೋಪಿ ಪತ್ನಿ ಪೊಲೀಸ್ ವಶಕ್ಕೆ:
ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೇಶ್ವಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಹೆಂಡತಿ ಲಲಿತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ತನಿಖೆ ಹಾಗೂ ವಿಚಾರಣೆಯನ್ನು ಕೈಗೊಂಡಿದ್ದಾರೆ.
ಸಾಮಾನ್ಯವಾಗಿ ಗಂಡನ ಕಿರುಕುಳಕ್ಕೆ ಹೆಣ್ಣುಮಕ್ಕಳು ಬಲಿಯಾಗುವ ಘಟನೆಗಳನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಆದರೆ ಹುಬ್ಬಳ್ಳಿಯ ಈ ಘಟನೆಯಲ್ಲಿ ಉಲ್ಟಾ ಆಗಿದ್ದು, ಪುರುಷರ ಮೇಲಾಗುವ ಇಂತಹ ಕೌಟುಂಬಿಕ ದೌರ್ಜನ್ಯಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಬೇಕಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಂಗನವಾಡಿ ಕೆಲಸ ಸಿಗುತ್ತಿದ್ದಂತೆ ಬದಲಾದ ಹೆಂಡತಿ! ಪತ್ನಿ-ಮಗಳ ಟಾರ್ಚರ್ಗೆ ಬೇಸತ್ತು ಹುಬ್ಬಳ್ಳಿಯಲ್ಲಿ ಗಂಡ ಆತ್ಮಹತ್ಯೆ!
WhatsApp Group
Join Now