ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ 6 ವರ್ಷಗಳ ಕಾಲ ಪ್ರೀತಿಸಿದರೂ, ಇಬ್ಬರೂ ಒಟ್ಟಾಗಿ 6 ದಿನವೂ ಇರಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿದ್ದ ಪ್ರೇಮಿ ರಾಘವೇಂದ್ರನ ಮನೆಗೆ ಹಾಸನದಿಂದ ಬಂದಿದ್ದ ಯುವತಿ ನಿಖಿತಾ, ಪ್ರೇಮಿಯ ಮನೆಯಲ್ಲಿಯೇ ಉಸಿರು ಚೆಲ್ಲಿದ್ದಾಳೆ.
ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಮೆಸೇಜ್ ಮಾಡಿಕೊಂಡು ಐದಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವಕ-ಯುವತಿ ನಾವಿಬ್ಬರೂ ಇದೀಗ ಮೇಜರ್ ಎಂದು ತೀರ್ಮಾನಿಸಿ ಮದುವೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ಹೊಸ ವರ್ಷಕ್ಕೆ ನಮ್ಮನೆಗೆ ಬಾ ಎಂದು ಕರೆಸಿಕೊಂಡಿದ್ದ ಯುವಕನ ಮನೆಯಲ್ಲಿಯೇ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ನಿಖಿತಾ ಪ್ರೇಮಿಯ ಮನೆಯಲ್ಲಿಯೇ ಅನುಮಾನಾಸ್ಪದ ಶವವಾಗಿ ಪತ್ತೆಯಾಗಿದ್ದಾಳೆ.
ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ಪಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಖಿತಾ (19) ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದವಳಾಗಿದ್ದು, ಪ್ರೇಮಿಯ ಮನೆಗೆ ಬಂದಾಗ ದುರಂತವಾಗಿ ಅಂತ್ಯ ಕಂಡಿದ್ದಾಳೆ.
ಇನ್ಸ್ಟಾಗ್ರಾಮ್ ಮೂಲಕ ಪರಿಚಿತವಾದ ರಾಘವೇಂದ್ರ ಮತ್ತು ನಿಖಿತಾ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮಾಡುತ್ತಾ, ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ, ಇಬ್ಬರ ಸ್ನೇಹ ಗಾಢವಾದ ನಂತರ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದಾರೆ.
ಇದಾಗಿ ಕೆಲವೇ ದಿನಗಳ ಅಂತರದಲ್ಲಿ ಇಬ್ಬರಿಗೂ ಪ್ರೀತಿ ಶುರುವಾಗಿದೆ. ಆದರೆ, ಯುವತಿ ನಿಖಿತಾಗೆ ಇನ್ನೂ ವಿವಾಹದ ವಯಸ್ಸಾಗಿರದ ಕಾರಣ ಚಾಟಿಂಗ್ಗೆ ಮಾತ್ರ ಪ್ರೀತಿ ಸೀಮಿತವಾಗಿತ್ತು. ಇತ್ತೀಚಿನ ಕೆಲವು ದಿನಗಳಿಂದ ಇಬ್ಬರೂ ಪರಸ್ಪರ ಭೇಟಿ ಮಾಡುವುದು, ಅಲ್ಲಲ್ಲಿ ಸುತ್ತಾಡುವುದು ಮುಂದುವರೆದಿದೆ. ಆದರೆ, ಒಟ್ಟಿಗೆ ಉಳಿದುಕೊಳ್ಳಲು ಅವಕಾಶ ಇರಲಿಲ್ಲ.
ಇನ್ನು ಯುವತಿಗೆ 19 ವರ್ಷಗಳಾಗುತ್ತಿದ್ದಂತೆ ಇಬ್ಬರೂ ಮೇಜರ್ ಎಂದು ತಿಳಿದ ನಂತರ ಯುವಕ ರಾಘವೇಂದ್ರ ಹುಡುಗಿಯ ಮನೆಯವರಿಗೆ ನಾನು ನಿಮ್ಮ ಮಗಳು ನಿಖಿತಾಳನ್ನು ಮದುವೆ ಮಾಡಿಕೊಳ್ಳಯತ್ತೇನೆ ಎಂದು ಭರವಸೆ ನೀಡಿದ್ದಾನೆ. ಇದಾದ ಬಳಿಕ ಮದುವೆಯಾಗುವ ಜೋಡಿಗೆ ಪ್ರೀತಿಗೆ ಮತ್ತು ಸಲುಗೆಗೆ ಮನೆಯವರೂ ಸ್ವತಂತ್ರ ನೀಡಿದ್ದಾರೆ.
ಇನ್ನು ಹೊಸ ವರ್ಷದ ಆಚರಣೆ ನಿಮಿತ್ತ ಜ.1ರಂದು ಅರಸೀಕೆರೆಯಿಂದ ಬೆಂಗಳೂರಿಗೆ ಬಂದಿದ್ದ ನಿಖಿತಾಳ ಜೊತೆಗೆ ರಾಘವೇಂದ್ರ 5 ದಿನ ಕಳೆದಿದ್ದಾನೆ. ನಂತರ, ನಿಖಿತಾ ನನಗೆ ನೀನು ತಾಳಿ ಕಟ್ಟಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ. ಆದರೆ, ಇದಕ್ಕೆ ರಾಘವೇಂದ್ರ ಸಮಯ ಕೊಡುವಂತೆ ಕೇಳಿಕೊಂಡಿದ್ದಾನೆ.
ಇದರಿಂದ ಬೇಸತ್ತ ನಿಖಿತಾ ತಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯವರಿಗೆ ಕರೆ ಮಾಡಿ ಹೇಳಿದ್ದಾಳೆ. ಇದರಿಂದ ಕಂಗೆಟ್ಟ ಮನೆಮಂದಿ ವಾಪಸ್ ಕರೆ ಮಾಡುವ ವೇಳೆಗೆ ಆಕೆ ನೇಣಿಗೆ ಶರಣಾಗಿದ್ದಾಳೆ. ಒಟ್ಟಾರೆಯಾಗಿ ಇನ್ಸ್ಟಾಗ್ರಾಮ್ ಮೂಲಕ ಪ್ರೀತಿಸಿದ ಜೋಡಿ ಒಟ್ಟಿಗೆ ಇದ್ದಾಗ ಅವರ ಪ್ರೀತಿ ಕೇವಲ 6 ದಿನವೂ ಜೀವಂತವಾಗಿ ಉಳಿಯದೇ, ಹುಡುಗಿಯ ಸಾವಿನೊಂದಿಗೆ ಅಂತ್ಯವಾಗಿದೆ.
ಇದೀಗ ಯುವತಿ ಪೋಷಕರು ಆಕೆಯನ್ನು ಪ್ರೀತಿ ಮಾಡಿದ ಯುವಕನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿ ರಾಘವೇಂದ್ರನನ್ನ ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಪ್ರೀತಿ, ಮದ್ವೆಯಾಗು ಎಂದಿದ್ದಕ್ಕೆ ಫಜೀತಿ.! ಪ್ರಿಯಕರನ ಮನೆಯಲ್ಲಿಯೇ ನೇಣಿಗೆ ಶರಣಾದ ಯುವತಿ
WhatsApp Group
Join Now