ಕ್ಲುಲ್ಲಕ ಕಾರಣಕ್ಕೆ ಯುವಕನೊಬ್ಬನ ಕೊಲೆ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ವಿನಾಯಕ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಸುಶಾಂತ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಹಲವು ದಿನಗಳಿಂದ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು..?:
ಹೊಸವರ್ಷದ ಸಂದರ್ಭದಲ್ಲಿ ಪಾರ್ಟಿ ಮಾಡುತ್ತಿದ್ದಾಗ ಆರೋಪಿಗಳು ಸುಶಾಂತ್ ಬಳಿ ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ಕೇಳಿದ್ದರು. ಆದರೆ ಸುಶಾಂತ್ ನಿರಾಕರಿಸಿದ್ದ. ಈ ವೇಳೆ ಮ್ಯಾಚ್ ಬಾಕ್ಸ್ ತಂದುಕೊಡು ಎಂದು ಒತ್ತಾಯಿಸಿದರೂ ಸುಶಾಂತ್ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಉಜ್ವಲ್ ಪ್ರಸಾದ್, ಪ್ರಿನ್ಸ್ ಮತ್ತು ಸೂರಜ್ ರಾಮ್ , ಓರ್ವ ಅಪ್ರಾಪ್ತ ಸೇರಿ ನಾಲ್ವರು ಸುಶಾಂತ್ನನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದರು. ಅಲ್ಲದೇ ಸುಶಾಂತ್ನನ್ನು ಹಿಡಿದು 2ನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದರು.
ಈ ಘಟನೆಯು ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. ಕೃತ್ಯ ಎಸಗಿದ ನಾಲ್ವರಲ್ಲಿ ಓರ್ವ ಅಪ್ರಾಪ್ತನಾಗಿದ್ದು, ನಂತರ ಉಳಿದ ಮೂವರೊಟ್ಟಿಗೆ ಈತನೂ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯ ಮತ್ತು ಸ್ಥಳೀಯರಿಂದ ಸಿಕ್ಕ ಮಾಹಿತಿ ಆಧರಿಸಿ ಆರೋಪಿಗಳನ್ನು ಹುಡುಕಿ ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.