ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ತಿಂಗಳು ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಆರೋಪಿ ಮೌನೀಶ್ ಮೈತ್ರಿ ಎಂಬಾತನ ಬಂಧನವಾಗಿದೆ. ತನ್ನ ಪತ್ನಿಯಿಂದ ದೂರವಾಗುವ ಭಯದಲ್ಲಿ ಮಹಿಳೆಯನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಬಳಿಕ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರಾಜಕಾಲುವೆಗೆ ಎಸೆದಿದ್ದ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ
ಫೆಬ್ರವರಿ 25ರಂದು ದೇವನಹಳ್ಳಿ ಸಮೀಪದ ರಾಜಕಾಲುವೆ ಬಳಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸರು ಶವವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಶವವು ಬೆಡ್ಶೀಟ್ ಹಾಗೂ ಪ್ಲಾಸ್ಟಿಕ್ ಟಾರ್ಪಲ್ನಲ್ಲಿ ಸುತ್ತಲ್ಪಟ್ಟಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಗುರುತುಗಳು ಕಂಡುಬಂದಿದ್ದವು. ಇದರಿಂದ ಇದು ಕೊಲೆ ಪ್ರಕರಣ ಎಂಬುದು ಪೊಲೀಸರಿಗೆ ಅನುಮಾನವಾಗಿತ್ತು.
ತನಿಖೆಯನ್ನು ಗಂಭೀರವಾಗಿ ಕೈಗೊಂಡ ಪೊಲೀಸರು ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಮೃತ ಮಹಿಳೆಯ ಗುರುತನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಕೊಲೆಯಾದ ಮಹಿಳೆ ಬಾಗೇಪಲ್ಲಿ ಮೂಲದ ನಿರ್ಮಲ (35) ಎಂದು ತಿಳಿದುಬಂತು. ವೈಯಕ್ತಿಕ ಜೀವನದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದ್ದ ನಿರ್ಮಲಾ, ಎರಡನೇ ಮದುವೆಯಾದ ಬಳಿಕವೂ ಪತಿಯಿಂದ ದೂರವಾಗಿದ್ದಳು. ಸುಮಾರು ಒಂದು ವರ್ಷದ ಹಿಂದೆ ಪತಿಯಿಂದ ಪ್ರತ್ಯೇಕವಾಗಿ ಬದುಕುತ್ತಿದ್ದ ಆಕೆ ತಮ್ಮ 12 ವರ್ಷದ ಮಗಳನ್ನು ತಂದೆಯ ಬಳಿ ಬಿಟ್ಟು ಬಂದಿದ್ದಳು. ಜೀವನ ಸಾಗಿಸಲು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಳು.
ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮೌನೀಶ್
ಇದೇ ಸಮಯದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮೌನೀಶ್ ಮೈತ್ರಿ ಎಂಬಾತನೊಂದಿಗೆ ನಿರ್ಮಲಾ ಪರಿಚಯವಾಗಿತ್ತು. ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ಈ ಪರಿಚಯ ನಂತರ ಸ್ನೇಹವಾಗಿ ಬೆಳೆಯಿತು, ಬಳಿಕ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ, ಸ್ನೇಹಕ್ಕೂ ಮೀರಿದ ಸಂಬಂಧ ಬೆಳೆದಿದೆ.
ಆರೋಪಿಯಾದ ಮೌನೀಶ್ ಮೈತ್ರಿ ಮೂಲತಃ ರಾಯಚೂರು ಜಿಲ್ಲೆಯವನಾಗಿದ್ದು, ತನ್ನ ಪತ್ನಿಯನ್ನು ಹೆರಿಗೆಗಾಗಿ ಸುಮಾರು ಒಂದು ವರ್ಷದ ಹಿಂದೆ ತವರು ಮನೆಗೆ ಕಳುಹಿಸಿದ್ದ. ಈ ಅವಧಿಯಲ್ಲಿ ನಿರ್ಮಲಾಳೊಂದಿಗೆ ಅವನಿಗೆ ಸ್ನೇಹ ಬೆಳೆದು, ಇಬ್ಬರೂ ಹೆಚ್ಚು ಸಮಯ ಕಳೆಯಲು ಆರಂಭಿಸಿದ್ದರು. ಸ್ನೇಹ ಮೀರಿ ಸಂಬಂಧ ಬೇರೇಯೇ ರೀತಿಯಲ್ಲಿ ಮುಂದುವರೆದಿದೆ.
ಇದಾದ ನಂತರ ಮೌನೀಶ್ ಪತ್ನಿ ಬಾಣಂತನ ಮುಗಿಸಿ ಮನೆಗೆ ಮರಳಿ ಬಂದರೆ ತಮ್ಮ ಕುಟುಂಬ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು ಎಂಬ ಭಯದಿಂದ ನಿರ್ಮಲಾಳಿಗೆ ಈ ವಿಷಯದ ಬಗ್ಗೆ ತಿಳಿಸಿದ್ದನು. ಆದರೆ ನಿರ್ಮಲಾ ಮೌನೀಶ್ ಗೆ ಪತ್ನಿಯನ್ನು ಬಿಟ್ಟು ತನ್ನೊಂದಿಗೆ ಬದುಕಬೇಕು ಅಥವಾ ಪ್ರತ್ಯೇಕವಾಗಿ ಮನೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಳು . ಈ ವಿಚಾರವಾಗಿ ಫೆಬ್ರವರಿ 21ರಂದು ದೇವನಹಳ್ಳಿಯಲ್ಲಿರುವ ಮೌನೀಶ್ ನಿವಾಸದಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಮೌನೀಶ್ ಹಗ್ಗದಿಂದ ನಿರ್ಮಲಾಳ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಕೊಲೆ ಮಾಡಿದ ನಂತರ ಕೂಡಲೇ ಶವವನ್ನು ಸಾಗಿಸದೆ, ಸುಮಾರು ಎರಡು ದಿನಗಳ ಕಾಲ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾನೆ. ಬಳಿಕ ಬೆಡ್ಶೀಟ್ ಹಾಗೂ ಪ್ಲಾಸ್ಟಿಕ್ ಟಾರ್ಪಲ್ನಲ್ಲಿ ಶವವನ್ನು ಸುತ್ತಿ ಹಗ್ಗದಿಂದ ಬಿಗಿದು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ದೇವನಹಳ್ಳಿ ಸಮೀಪದ ರಾಜಕಾಲುವೆಗೆ ಶವವನ್ನು ಎಸೆದು, ಅದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ.
ಫೆಬ್ರವರಿ 25ರಂದು ರಾಜಕಾಲುವೆಯಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಅಪರಿಚಿತ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಮಾಹಿತಿಗಳ ಆಧಾರದಲ್ಲಿ ತನಿಖೆ ನಡೆಸಿದರು. ಈ ತನಿಖೆಯ ವೇಳೆ ಆರೋಪಿ ಮೌನೀಶ್ ಮೈತ್ರಿ ಪತ್ತೆಯಾಗಿದ್ದು, ಇದೀಗ ಅವನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹೆರಿಗೆಗಾಗಿ ಪತ್ನಿ ಊರಿಗೆ, ಮತ್ತೊಬ್ಬಳ ಜತೆ ಸಂಬಂಧ, ಹೆಂಡತಿ ಮರಳಿದಾಗ ತಿಳಿಯಬಾರದೆಂದು ಕೊಂದೇ ಬಿಟ್ಟ ರಾಯಚೂರಿನ ಸೆಕ್ಯೂರಿಟಿ ಗಾರ್ಡ್!
WhatsApp Group
Join Now