ವಿಜಯನಗರ : ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಘೋರವೇ ನಡೆದು ಹೋಗಿದೆ. ವ್ಯಕ್ತಿಯೊಬ್ಬ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನೇ ಕೊಂದು ಹಾಕಿದ್ದಾನೆ. ಅಕ್ಷಯ್ ಎಂಬಾತ ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮೀ ಹಾಗೂ ಸಹೋದರಿ ಅಮೃತಾ ಅವರನ್ನ ಜನವರಿ 27 ರಂದೇ ಕೊಲೆ ಮಾಡಿದ್ದಾನೆ. ಮೂವರ ಶವಗಳನ್ನ ಬಾಡಿಗೆ ಮನೆಯಲ್ಲಿ ಸಮಾಧಿ ಮಾಡಿದ್ದಾನೆ.
ವಿಜಯನಗರ ಎಸ್ಪಿ ಜಾಹ್ನವಿ, ಕೂಡ್ಲಿಗಿ DySP ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮನೆಯಲ್ಲೇ ಸಮಾಧಿ
ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿಯ ಅಕ್ಷಯ್ ಕುಟುಂಬ ಸದ್ಯ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲೇ ನೆಲಸಿತ್ತು. ಬಾಡಿಗೆ ಮನೆಯಲ್ಲಿ ವಾಸಗಿದ್ದು, ರಿ ಬಟನ್ ಶಾಪ್ ಇಟ್ಟುಕೊಂಡಿದ್ದರು. ಆದರೆ ಮನೆಯಲ್ಲಿ ಅದೇನ್ ಆಯ್ತೋ ಏನೋ, ಜನವರಿ 27 ರಂದು ಮೂವರ ಕತೆ ಮುಗಿಸಿದ್ದಾನೆ. ಮನೆಯಲ್ಲೇ ಮೂವರು ಶವಗಳನ್ನ ಹೂತು ಹಾಕಿ, ಬೆಂಗಳೂರಿಗೆ ಎಸ್ಕೇಪ್ ಆಗಿದ್ದ.
ಹೀಗೆ ಬೆಂಗಳೂರಿಗೆ ಬಂದವನು ನೇರ ತಿಲಕ್ನಗರ ಠಾಣೆಗೆ ಹೋದ ಅಕ್ಷಯ್ ನನ್ನ ತಂದೆ ತಾಯಿ, ಸಹೋದರಿ ನಾಪತ್ತೆ ಆಗಿದ್ದಾರೆ ಅಂತಾ ಕಂಪ್ಲೇಂಟ್ ಕೊಟ್ಟಿದ್ದ. ಪೊಲೀಸರು ಪ್ರಶ್ನೆ ಮಾಡ್ತಿದ್ದಂತೆ ನಾನೇ ಕೊಂದಿರೋದಾಗಿ ಹೇಳಿದ್ದಾನೆ. ಒಮ್ಮೆ ಸಂಡೂರಿನಲ್ಲಿ ಶವ ಎಸೆದಿರೋದಾಗಿ ಹೇಳಿದರೆ, ಮತ್ತೊಮ್ಮೆ ಮನೆಯಲ್ಲೇ ಶವ ಹೂತಿದ್ದಾಗಿ ಹೇಳಿದ್ದ.
ಸಹೋದರಿ ಪ್ರೀತಿಯೇ ಹತ್ಯೆಗೆ ಕಾರಣವಾಯ್ತಾ?
ಅಕ್ಷಯ್ ಸಹೋದರಿ ಅಮೃತಾ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದಳಂತೆ. ಅಮೃತಾ ಪ್ರೀತಿಗೆ ತಂದೆ, ತಾಯಿ ಸಪೋರ್ಟ್ ಮಾಡುತ್ತಿದ್ದರಂತೆ. ಇದೇ ವಿಚಾರಕ್ಕೆ ಗಲಾಟೆಯಾಗಿ ತಂದೆ, ತಾಯಿ, ಸಹೋದರಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸಂಬಂಧಿ ವಾಣಿ ಹೇಳಿದ್ದಿಷ್ಟು
ಸಂಬಂಧಿ ವಾಣಿ ಎಂಬುವವರು ಮಾತನಾಡಿದ್ದು, ಅಕ್ಷಯ್ ಕುಟುಂಬ ಚಿತ್ರದುರ್ಗದಲ್ಲಿ ರಿ ಬಟನ್ ಶಾಪ್ ಇಟ್ಟುಕೊಂಡಿದ್ದರು. ನಂತರ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಹಳ್ಳಿಯಲ್ಲಿ ಶಾಪ್ ಇಟ್ಟಿದ್ದರು. ಆನಂತರ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಸ್ಥಳಾಂತರವಾಗಿದ್ದರು. ಜಗಳೂರಿನಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ ಮನೆ ನಿರ್ಮಿಸಿದ್ದರು. 2 ವರ್ಷದ ಹಿಂದೆ ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಶಿಫ್ಟ್ ಆಗಿದ್ದರು. ದಂಪತಿ, ಮಕ್ಕಳು ಅನ್ಯೋನ್ಯವಾಗಿದ್ದರು ಎಂದು ಹೇಳಿದ್ದಾರೆ. ಇನ್ನು ಮನೆ ಮಾಲಿಕರನ್ನು ಕಳೆದುಕೊಂಡ ಸಾಕು ನಾಯಿ ಕೂಡ ರೋಧಿಸಿದೆ.
ವಿಜಯನಗರ ತ್ರಿವಳಿ ಕೊಲೆಗೆ ಟ್ವಿಸ್ಟ್ : ಮೂವರನ್ನ ಮನೆಯಲ್ಲೇ ಹೂತುಹಾಕಿದ್ದ, ಲವ್ ಮ್ಯಾಟರ್ ಹತ್ಯೆಗೆ ಕಾರಣವಾಯ್ತಾ?
WhatsApp Group
Join Now