ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಕ್ಕಮನಕೊಪ್ಪಲು ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬನ್ನೂರಿನಲ್ಲಿ ವ್ಯಾಪಾರಿಯಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಹುಟ್ಟೂರಿನ ಮನೆ ಜಗುಲಿಯ ಮೇಲೆಯೇ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜಗುಲಿ ಮೇಲೆ ಹರಿದ ನೆತ್ತರು: ಹಂತಕರ ಕೃತ್ಯ?
ಅಕ್ಕಮನಕೊಪ್ಪಲು ಗ್ರಾಮದ ಮಂಜು (44) ಎಂಬುವವರೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದುರ್ದೈವಿ. ಮೃತ ವ್ಯಕ್ತಿಯ ಮುಖದ ಮೇಲೆ ಗಂಭೀರ ಗಾಯಗಳಾಗಿದ್ದು, ಕತ್ತು ಬಿಗಿದಿರುವ ಗುರುತುಗಳು ಪತ್ತೆಯಾಗಿವೆ. ಮೃತದೇಹ ಬಿದ್ದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಅವರ ಬಟ್ಟೆಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದುಷ್ಕರ್ಮಿಗಳು ಎಲ್ಲೋ ಕೊಲೆ ಮಾಡಿ, ಶವವನ್ನು ತಂದು ಮನೆಯ ಜಗುಲಿಗೆ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಗೃಹಪ್ರವೇಶಕ್ಕೆ ಹೋದವರು ವಾಪಸ್ ಬರಲೇ ಇಲ್ಲ!
ಬನ್ನೂರಿನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಮಂಜು, ಪತ್ನಿ ಮತ್ತು ಮಕ್ಕಳೊಂದಿಗೆ ಅಲ್ಲಿಯೇ ವಾಸವಿದ್ದರು. ಸೋಮವಾರದಂದು ಹುಲ್ಲೇಗಾಲ ಗ್ರಾಮದಲ್ಲಿ ನಡೆದ ಸಂಬಂಧಿಕರ ಗೃಹಪ್ರವೇಶ ಸಮಾರಂಭಕ್ಕೆ ತೆರಳಿದ್ದರು. ಸಮಾರಂಭ ಮುಗಿದ ನಂತರ ಅವರು ವಾಪಸ್ ಮನೆಗೆ ಬಾರದಿದ್ದಾಗ ಆತಂಕಗೊಂಡ ಪತ್ನಿ ಹುಡುಕಾಟ ನಡೆಸಿದ್ದರು. ಆದರೆ, ಬೆಳಿಗ್ಗೆ ಹುಟ್ಟೂರಿನ ಮನೆಯ ಜಗುಲಿಯ ಮೇಲೆ ಮಂಜು ಶವವಾಗಿ ಪತ್ತೆಯಾಗಿದ್ದಾರೆ.
ಬಟ್ಟೆ ಚಿಲ್ಲಾಪಿಲ್ಲಿ: ಸಾವಿನ ಸುತ್ತ ಹತ್ತಾರು ಅನುಮಾನ
ಮಂಜು ಅವರ ಮೈಮೇಲಿದ್ದ ಶರ್ಟ್ ಮತ್ತು ಪ್ಯಾಂಟ್ ದೂರದಲ್ಲಿ ಬಿದ್ದಿರುವುದು ಈ ಘಟನೆಯ ಕ್ರೌರ್ಯವನ್ನು ತೋರಿಸುತ್ತಿದೆ. ಕೊಲೆ ಮಾಡುವ ಮುನ್ನ ಹಂತಕರೊಂದಿಗೆ ಮಂಜು ಅವರು ಸಂಘರ್ಷ ನಡೆಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಕುಟುಂಬಸ್ಥರು ಇದು ನೂರಕ್ಕೆ ನೂರರಷ್ಟು ಕೊಲೆ ಎಂದು ಆರೋಪಿಸಿದ್ದು, ಮಂಜು ಅವರ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸಾವಿನ ರಹಸ್ಯ ಪತ್ತೆಗೆ ಪೊಲೀಸರ ಕಾರ್ಯಾಚರಣೆ
ಸ್ಥಳಕ್ಕೆ ಮಳವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ‘ಅನುಮಾನಾಸ್ಪದ ಸಾವು’ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಹಳೇ ದ್ವೇಷವೇ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಈ ಹತ್ಯೆ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮಂಡ್ಯದಲ್ಲಿ ಬೆಚ್ಚಿಬಿಳಿಸುವ ಕೃತ್ಯ : ಗೃಹಪ್ರವೇಶಕ್ಕೆ ಹೋದವನು ಹೆಣವಾದ, ತೊಟ್ಟಿದ್ದ ಬಟ್ಟೆ ಚೆಲ್ಲಾಪಿಲ್ಲಿ.!
WhatsApp Group
Join Now