ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ಕಲ್ಯಾಣಿಯ ನಿಗೂಢ ಸಾವು ಮತ್ತು ಆಕೆಯ ಶವವನ್ನು ಪೊಲೀಸರಿಗೆ ತಿಳಿಸದೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸಾಗಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ದೊಡ್ಡಪ್ಪ-ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದ ಕಲ್ಯಾಣಿ ಇಂದು ಬೆಳಿಗ್ಗೆ ಗಿಡ್ನಹಳ್ಳಿ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಬಾಲಕಿ ಸಾವನ್ನಪ್ಪಿದ ನಂತರ, ಪೋಷಕರು ಮತ್ತು ಸಂಬಂಧಿಕರು ಸ್ಥಳೀಯ ನಂದಗುಡಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಶವವನ್ನು ನೇರವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಈತಮಾಕಲಹಳ್ಳಿ ಗ್ರಾಮಕ್ಕೆ ಸಾಗಿಸಿದ್ದಾರೆ.
ಇನ್ನೇನು ಶವ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದಾಗ, ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಸ್ಕಾರವನ್ನು ನಿಲ್ಲಿಸಿದ್ದಾರೆ. ಸ್ಮಶಾನ ಸೇರಬೇಕಿದ್ದ ಶವವನ್ನು ಪೊಲೀಸರು ವಾಪಸ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದಾಳೆ, ಸಾವಿನ ಹಿಂದೆ ಯಾವುದೇ ಅನುಮಾನವಿಲ್ಲ ಎಂದು ಮೃತಳ ದೊಡ್ಡಮ್ಮ ಮುನಿರತ್ನಮ್ಮ ಸಮಜಾಯಿಷಿ ನೀಡಿದ್ದಾರೆ.
ಸರಿಯಾದ ಮಾಹಿತಿ ಇಲ್ಲದೆ ಇದ್ದಕ್ಕಿದ್ದಂತೆ ಶವ ತಂದಿದ್ದಕ್ಕೆ ಈತಮಾಕಲಹಳ್ಳಿಯ ಕೆಲವು ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಅಸಹಜ ಸಾವು ಸಂಭವಿಸಿದಾಗ ಪೊಲೀಸರಿಗೆ ತಿಳಿಸುವುದು ಕಡ್ಡಾಯ. ಈ ಪ್ರಕರಣದಲ್ಲಿ ಪೊಲೀಸರಿಗೆ ತಿಳಿಸದೆ ಶವ ಸಾಗಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ? ಸಾವಿನ ಹಿಂದೆ ಯಾರದ್ದಾದರೂ ಪ್ರಚೋದನೆ ಇದೆಯೇ? ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ಶವವನ್ನು ತರಾತುರಿಯಲ್ಲಿ ಸಾಗಿಸಲಾಯಿತೇ? ಎಂಬ ಅನುಮಾನಗಳು ಮೂಡಿದೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಕಲ್ಯಾಣಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಸ್ತುತ ಚಿಕ್ಕಬಳ್ಳಾಪುರ ಮತ್ತು ನಂದಗುಡಿ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಕಲ್ಯಾಣಿಯ ದೊಡ್ಡಪ್ಪ ಹಾಗೂ ದೊಡ್ಡಮ್ಮ ಮುನಿರತ್ನಮ್ಮ , ತಮಗೆ ಮಕ್ಕಳಿಲ್ಲವೆಂದು, ಮುನಿರತ್ನಮ್ಮ ತಂಗಿ ನರಸಮ್ಮಳ ಎರಡನೆ ಮಗಳನ್ನು ದತ್ತು ಪಡೆದುಕೊಂಡಿದ್ದರು. ಇನ್ನು ವೈದ್ಯರ ವರದಿಯ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ನಡೆಸಲಿದ್ದಾರೆ.
ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ : 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ
WhatsApp Group
Join Now