ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ಇಂದು (ಡಿ.14) ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಶಂಕಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಇಂದು ಸಂಜೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿವೆ.
ಶಾಮನೂರು ಶಿವಶಂಕರಪ್ಪ ಅವರು 6 ಬಾರಿ ಶಾಸಕರಾಗಿದ್ದು, ಹಲವು ಮುಖ್ಯಮಂತ್ರಿ ಗಳ ಸಂಪುಟದಲ್ಲಿ ಸಚಿವರಾಗಿದ್ದರು.
ನಾಳೆ ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ
ಶಾಮನೂರು ಶಿವಶಂಕರಪ್ಪನವರಿಗೆ ಒಟ್ಟು 7 ಜನ ಮಕ್ಕಳು. ಅವರ ಪುತ್ರ, ಸಚಿವ ಎಸ್ಎಸ್ ಮಲ್ಲಿಕಾರ್ಜುನ ಬೆಳಗ್ಗೆ ತಿರುಪತಿಗೆ ತೆರಳಿದ್ದು, ಇದೀಗ ತಂದೆ ನಿಧನದ ಸುದ್ದಿ ತಿಳಿದು ವಾಪಸ್ ಆಗುತ್ತಿದ್ದಾರೆ. ಇನ್ನು ಮತ್ತೊಬ್ಬ ಮಗ ಎಸ್ಎಸ್ ಗಣೇಶ್ ಅಸ್ಸಾಂ ದೇವಾಲಯಕ್ಕೆ ಹೋಗಿದ್ದು, ಕುಟುಂಬಸ್ಥರಿಂದ ಮಾಹಿತಿ ರವಾನೆಯಾಗಿದೆ. ಅತ್ತ ಇಬ್ಬರು ಹೆಣ್ಣುಮಕ್ಕಳು ವಿದೇಶದಲ್ಲಿದ್ದು, ಕುಟಂಬದಿಂದ ಮಾಹಿತಿ ನೀಡಲಾಗಿದೆ. ಇನ್ನು ನಾಳೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
94ನೇ ವಯಸ್ಸಿನಲ್ಲೂ ಶಾಸಕರಾಗಿದ್ದ ಶಾಮನೂರು
94ನೇ ವಯಸ್ಸಿನಲ್ಲೂ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ, ಹಾಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಶಾಮನೂರು ಕಲ್ಲಪ್ಪ ಹಾಗೂ ಸಾವಿತ್ರಮ್ಮ ದಂಪತಿಯ ಪುತ್ರರಾಗಿದ್ದ ಶಾಮನೂರು ಶಿವಶಂಕರಪ್ಪ, 1931ರ ಜೂನ್ 16ರಂದು ಜನಿಸಿದ್ದರು. ಇವರಿಗೆ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಸೇರಿದಂತೆ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಇದ್ದಾರೆ.
ಪುತ್ರ ಸಚಿವ, ಸೊಸೆ ದಾವಣಗೆರೆ ಸಂಸದೆ
ಓರ್ವ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದರೆ, ಸೊಸೆ ಪ್ರಭಾ ಮಲ್ಲಿಕಾರ್ಜುನ್ ಹಾಲಿ ದಾವಣಗೆರೆ ಸಂಸದೆಯಾಗಿದ್ದಾರೆ. ಮತ್ತೋರ್ವ ಪುತ್ರ ಎಸ್ಎಸ್ ಬಕ್ಕೇಶ್ ಹಾಗೂ ಎಸಎಸ್ ಗಣೇಶ್ ಕೈಗಾರಿಕೋದ್ಯಮಿಯಾಗಿದ್ದಾರೆ. ಪುತ್ರಿಯರಾದ ಡಾ. ಮಂಜುಳಾ ಶಿವಶಂಕರ್, ಸುಧಾ ರಾಜೇಂದ್ರ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಮೀನಾ ಡಾ. ಶರಣ ಪಾಟೀಲ್ ಇವರನ್ನೆಲ್ಲಾ ಶಾಮನೂರು ಅಗಲಿದ್ದಾರೆ.
ಶಾಮನೂರು ನಿಧನಕ್ಕೆ ಗಣ್ಯರ ಸಂತಾಪ
2007ರ ನವೆಂಬರ್ 29ರಂದು ಶಾಮನೂರು ಶಿವಶಂಕರಪ್ಪ ಪತ್ನಿ ಪಾರ್ವತಮ್ಮ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇದೀಗ 94ನೇ ವಯಸ್ಸಿನಲ್ಲಿ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ನಿಧನಕ್ಕೆ ರಾಜಕಾರಣಿಗಳು, ಕಾಂಗ್ರೆಸ್ ಕಾರ್ಯಕರ್ತರು, ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಸಚಿವ ಹೆಚ್ಕೆ ಪಾಟೀಲ್ ಸಂತಾಪ
ಶ್ಯಾಮನೂರು ಶಿವಶಂಕರಪ್ಪ ನಿಧನಕ್ಕೆ ಸಚಿವ ಎಚ್ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ. ದೆಹಲಿಯಲ್ಲಿರುವ ಸಚಿವ ಎಚ್ ಕೆ ಪಾಟೀಲ್ ನ್ಯೂಸ್ 18 ಜೊತೆ ಮಾತನಾಡಿದ್ದು, ವಿಷಯ ತಿಳಿದು ಬಹಳ ದುಃಖ ಆಯಿತು ಎಂದಿದ್ದಾರೆ. ಎಲ್ಲರನ್ನೂ ಹೊಂದಿಸಿಕೊಂಡು ಹೊಗುವ ಪ್ರಯತ್ನದವರಾಗಿದ್ರು. ಜೀವನದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಹತ್ತಾರು ಶೈಕ್ಷಣಿಕ ಸಂಸ್ಥೆ ಕಟ್ಟಿ ಬೆಳೆಸಿ ಸಾಧಿಸಿದ್ದಾರೆ. ಅನೇಕ ಬಡ ಸಮುದಾಯಕ್ಕೆ ಶಿಕ್ಷಣದ ಮೂಲಕ ಬಹಳಷ್ಟು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರ ನಿಧನ ನೋವು ತಂದಿದೆ ಅಂತ ಹೆಚ್ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.