ಆರ್ ಸಿಬಿ ಗೆದ್ರೆ ಪತಿಗೆ ಇನ್ನೊಂದು ಮದ್ವೆ ಮಾಡಿಸುವೆ ಎಂದಿದ್ದ ಬೀದರ್ ಪತ್ನಿಗೆ ಈಗ ಸಂಕಷ್ಟ! ಏನಾಗಿದೆ ನೋಡಿ

Spread the love

18 ವರ್ಷಗಳ ಬಳಿಕ ಆರ್ಸಿಬಿ ಗೆಲುವಿಗೆ ಅಭಿಮಾನಿಗಳು ಏನೆಲ್ಲಾ ಸರ್ಕಸ್ ಮಾಡಿದ್ರು, ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆದಿತ್ತು. ಅದೇ ಇನ್ನೊಂದೆಡೆ, ಕೆಲವರು ಅತಿರೇಕವಾಗಿ ವರ್ತಿಸಿದರು. ಪ್ರಚಾರಕ್ಕಾಗಿ ಒಬ್ಬಾಕೆ ಆರ್ಸಿಬಿ ಗೆದ್ದರೆ ನನ್ನ ಪತಿಗೆ ಡಿವೋರ್ಸ್ ಕೊಡುವೆ ಎಂದು ಬ್ಯಾನರ್ ಹಿಡಿದು ನಿಂತದ್ದು ಭಾರಿ ಪ್ರಚಾರ ಪಡೆದುಕೊಂಡಿತ್ತು.

ಬ್ಯಾನರ್ ಹಿಡಿದು ನಿಂತಿದ್ದ ಮಹಿಳೆ ಯಾರೆಂದು ತಿಳಿಯಲಿಲ್ಲ. RCB ಗೆದ್ದ ಬಳಿಕ ಈಗ ಏನು ಮಾಡಿದರು ಎಂದೂ ಗೊತ್ತಿಲ್ಲ. ಆದರೆ ಈ ಪೋಸ್ಟರ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದರು ಆ ಮಹಿಳೆ. ಅಷ್ಟಕ್ಕೂ ಪ್ರಚಾರಕ್ಕಾಗಿ ಏನೇನೋ ಮಾಡುವವರು ಇದ್ದಾರೆ. ಜೀವವನ್ನೇ ಲೆಕ್ಕಿಸದೇ ರೀಲ್ಸ್ ಮಾಡುವವರೂ ಇದ್ದಾರೆ. ಆದರೆ ಹೀಗೆ ಆರ್ಸಿಬಿಗೂ ತಮ್ಮ ದಾಂಪತ್ಯಕ್ಕೂ ಸಂಬಂಧ ಕಲ್ಪಿಸಿ ಈ ಮಹಿಳೆ ಹೀಗೆ ಬರೆದುಕೊಂಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಮಹಾಪೂರವೇ ಹರಿದುಬಂದಿತ್ತು. ಈಕೆಯ ತಮಾಷೆ ಚೆನ್ನಾಗಿದೆ ಎಂದು ಕೆಲವರು ಹೇಳಿದ್ದರೆ, ಇಂಥ ಪತ್ನಿ ಇರುವ ಬದಲು ಆಕೆಯ ಗಂಡ ಡಿವೋರ್ಸ್ ಕೊಡುವುದೇ ಮೇಲು ಎಂದು ಮತ್ತೆ ಕೆಲವರು ಆಕ್ರೋಶವನ್ನೂ ಹೊರಹಾಕಿದ್ದರು. ಪ್ರಚಾರಕ್ಕಾಗಿ ಇಂಥ ಹುಚ್ಚು ಮಾಡಬಾರದು ಎಂದೇ ಹಲವರು ಹೇಳಿದ್ದರು.

ಆದರೆ ಇದೀಗ ಅದೇ ರೀತಿ, ಬೀದರ್ನ ಮಹಿಳೆಯೊಬ್ಬಳು RCB ಗೆದ್ದರೆ ತಮ್ಮ ಗಂಡನಿಗೆ ಇನ್ನೊಂದು ಮದುವೆ ಮಾಡಿಸುವುದಾಗಿ ಹೇಳಿದ್ದರು. ಇದು ತಮಾಷೆಯಾಗಿಯೇ ಆಕೆ ಹೇಳಿದ್ದರೂ ಈ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದವು. ಇದೀಗ ಅವರ ಪತಿ ಪಾಂಡುರಂಗ ಅವರು ತಮಗೆ ಇನ್ನೊಂದು ಮದುವೆ ಮಾಡಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರು ವಿಡಿಯೋ ಶೇರ್ ಮಾಡಿದ್ದಾರೆ. ಆರ್ಸಿಬಿ ಗೆದ್ದರೆ ನೀನು ನನಗೆ ಇನ್ನೊಂದು ಮದುವೆ ಮಾಡಿಸುವುದಾಗಿ ಹೇಳಿರುವುದನ್ನು ಐದು ಲಕ್ಷ ಮಂದಿ ನೋಡಿದ್ದಾರೆ. ಈಗ ಆರ್ಸಿಬಿ ಗೆದ್ದಿದೆ. ಇದುವರೆಗೂ ನೀನು ನನಗೆ ಮದ್ವೆ ಮಾಡಿಸಿಲ್ಲ. ಇದನ್ನೆಲ್ಲಾ ನಾನು ಕೇಳುವುದಿಲ್ಲ. ಹುಡುಗಿ ಹೇಗಿದ್ರೂ ಪರವಾಗಿಲ್ಲ, ನೀನು ನನಗೆ ಇನ್ನೊಂದು ಮದುವೆ ಮಾಡಿಸಲೇ ಬೇಕು ಎಂದಿದ್ದಾರೆ.

ಈ ವಿಡಿಯೋ ಅನ್ನು ಅವರ ತಮಾಷೆಗೆ ಶೇರ್ ಮಾಡಿದ್ದು, ಇದಕ್ಕೆ ತಮಾಷೆಯ ಕಮೆಂಟ್ಗಳೂ ಬರುತ್ತಿವೆ. ಲಾಟರಿ ಹೊಡೆದ್ರಿ ಎಂದು ಕೆಲವರು ತಮಾಷೆ ಮಾಡುತ್ತಿದ್ದರೆ, ನಿಮ್ಮ ಮಾತನ್ನು ನೀವು ಉಳಿಸಿಕೊಳ್ಳಲೇಬೇಕು ಎಂದು ಪತ್ನಿಗೆ ಹೇಳುತ್ತಿದ್ದಾರೆ. ಇದೇ ವೇಳೆ ಅವರ ಪತ್ನಿ ಕೂಡ ನಾಚಿ ನೀರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಟ್ಟಿನಲ್ಲಿ ಆರ್ಸಿಬಿಯ ಹವಾ ಇನ್ನೂ ಇದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅದೇ ಇನ್ನೊಂದೆಡೆ ಆರ್ಸಿಬಿಯ ಗೆಲುವನ್ನು ಸಂಭ್ರಮಿಸಿ 11 ಮಂದಿ ಜೀವ ಕಳೆದುಕೊಂಡಿರುವ ಬಗ್ಗೆ ಇನ್ನೂ ಜನರು ಮರೆಯದ ನಡುವೆಯೇ ಈ ರೀತಿಯ ತಮಾಷೆಯ ವಿಡಿಯೋಗಳೂ ಇನ್ನೊಂದೆಡೆ ಚಾಲನೆಗೆ ಬರುತ್ತಿವೆ.

ಇನ್ನು ಕಾಲ್ತುಳಿತ ಪ್ರಕರಣದ ಕುರಿತು ಹೇಳುವುದಾದರೆ, ಮೊನ್ನೆ 17ನೇ ತಾರೀಖು, 11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ RCB, ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಕೆ ಮಾಡಿತು.

ತನಿಖೆ ಇನ್ನೂ ಬಾಕಿಯಿರುವುದರಿಂದ ಪೂರ್ವಾಗ್ರಹವಿರಬಾರದು, ಮೂರನೇ ವ್ಯಕ್ತಿಗಳ ವಿರುದ್ಧ ಅಭಿಪ್ರಾಯವೆಂದು ಭಾವಿಸಬಾರದು. ಹೀಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ದಾಖಲೆಗಳನ್ನು ಹಂಚಿಕೊಳ್ಳುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ. ಆದರೆ ನ್ಯಾಯಾಂಗ ತನಿಖೆ ಬಾಕಿಯಿರುವುದರಿಂದ ವರದಿ ಬಹಿರಂಗ ಬೇಡ ಎಂದು ಸರ್ಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕೋರ್ಟ್ಗೆ ಹೇಳಿದರು. ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಲಾಗಿದೆ.

WhatsApp Group Join Now

Spread the love

Leave a Reply