ಬಾಂಗ್ಲಾದೇಶಿಗರು ಕರ್ನಾಟಕಕ್ಕೆ ಹೇಗೆ ಬರ್ತಾರೆ? ಕೇಂದ್ರ ಗೃಹ ಸಚಿವ ಅಮಿತ್ ಶಾ ಕಡಲೆಕಾಯಿ ತಿನ್ನುತ್ತಿದ್ದರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಕೋಗಿಲು ಬಡಾವಣೆಯಲ್ಲಿ ಬಾಂಗ್ಲಾ ಅಕ್ರಮ ನಿವಾಸಿಗಳು ಇದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಬಾಂಗ್ಲಾದೇಶದವರು ಇಲ್ಲಿಗೆ ಹೇಗೆ ಬರುತ್ತಿದ್ದಾರೆ ಎಂಬುವುದನ್ನು ಹೇಳಿ. ದೇಶದ ಗಡಿ ಕಾಯೋದು ಪರಮೇಶ್ವರ್ ಅವರ ಕೆಲಸವೇ? ಅಮಿತ್ ಶಾ ಅವರು ಏನು ಕಡಲೆಕಾಯಿ ತಿನ್ನುತ್ತಿದ್ದಾರಾ? ಬಿಜೆಪಿ ಅಧಿಕಾರ ಇರುವ ರಾಜ್ಯಗಳನ್ನು ದಾಟಿ ಹೇಗೆ ಬರ್ತಾರೆ ಅವರು ಕರ್ನಾಟಕಕ್ಕೆ. ಮಹಾದೇವಪುರದಲ್ಲಿ ಜನಜಾಗೃತಿ ಅಭಿಯಾನ ಅಂತ ಬಿಜೆಪಿ ಮಾಜಿ ಶಾಸಕರು ಮಾಡಿದ್ರು. ಬಾಂಗ್ಲಾದೇಶದವರು ಆಧಾರ್ ಕಾರ್ಡ್ ಪಡೆದು ಬಿಜೆಪಿಗೆ ಮತ ಹಾಕಿದ್ದಾರೆ ಅಂತ ನ್ಯಾಷನಲ್ ಚಾನಲ್ ನಲ್ಲಿ ಬಂದಿದೆ ಅಲ್ವಾ? ಈ ಪ್ರಶ್ನೆಯನ್ನ ನೀವು ಬಿಜೆಪಿ ಶಾಸಕರು ಮತ್ತು ಬಿಜೆಪಿ ಅವರಿಗೆ ಕೇಳಬೇಕು ನಮಗಲ್ಲ ಎಂದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ ಎಂಬ ವಿಚಾರವಾಗಿ ಮಾತನಾಡಿ, ಅವರು ಪ್ರವೇಶ ಮಾಡಲಿ , ಯಾಕೆ ಕೇಂದ್ರದಲ್ಲಿ ಸ್ಥಾನಮಾನ ಕೊಡುವುದಿಲ್ಲವೇ? ಅವರ ಅಭಿಪ್ರಾಯಕ್ಕೆ ನಾವು ಏಕೆ ಕಾಮೆಂಟ್ ಮಾಡಬೇಕು. ಅವರು ಪಂಚಾಯತ್ ಚುನಾವಣೆ ಮಾಡ್ತಾರಾ ಅಥವಾ ಪಾರ್ಲಿಮೆಂಟ್ ಚುನಾವಣೆ ಮಾಡ್ತಾರಾ? ಅದು ಅವರ ಪಕ್ಷಕ್ಕೆ ಸಂಬಂಧಪಟ್ಟಿದ್ದು. ಅದು ಸ್ವಂತ ಅಭಿಪ್ರಾಯ, ಅದಕ್ಕೂ ನಮಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಜೆಡಿಎಸ್ ಈಗಾಗಲೇ ನಿರ್ನಾಮ ಆಗುತ್ತಿದೆ. ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಲೀಸ್ ಗೆ ಕೊಟ್ಟು ಬಿಟ್ಟಿದ್ದಾರೆ. ಅವರ ಸಂಬಂಧಿಕರೇ ಹೋಗಿ ಬಿಜೆಪಿ ಟಿಕೆಟ್ ತೆಗೆದುಕೊಂಡು ಚುನಾವಣೆಗೆ ನಿಲ್ತಾರೆ ಅಂದ್ರೆ, ಪಕ್ಷ ಎಷ್ಟು ಮಟ್ಟಿಗೆ ಬೆಳೆಯುತ್ತಿದೆ ಅಂತ ನೀವೇ ಯೋಚನೆ ಮಾಡಬೇಕು ಎಂದು ತಿರುಗೇಟು ನೀಡಿದರು.
ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಯಾಕೆ ಪಾದಯಾತ್ರೆ ಮಾಡುತ್ತಿಲ್ಲ? ಯಾಕೆ ಯಾರ ನಾಯಕತ್ವದಲ್ಲಿ ಮಾಡಬೇಕು ಅಂತ ತಾನೇ ಇರೋದು ಪಾದಯಾತ್ರೆ. ಕಾಂಗ್ರೆಸ್ ಪಾರ್ಟಿಯೂ ವಿರೋಧ ಪಕ್ಷದಲ್ಲಿದ್ದಾಗ ಪಾದಯಾತ್ರೆ ಮಾಡಿದೆ. ಅದು ಜನರ ಪರವಾಗಿ ಮಾಡಿರೋದು. ವೈಯಕ್ತಿಕ ವಿಚಾರಕ್ಕೆ ಪಾದಯಾತ್ರೆ ಮಾಡಿಲ್ಲ. ಅದಕ್ಕೆ ನಮಗೆ ಬೆಂಬಲ ಸಿಕ್ಕಿರೋರು. ಮೇಕೆದಾಟು, ನಮ್ಮ ನಡೆ ಕೃಷ್ಣ ಕಡೆ, 371 ಜೆ, ಇವೆಲ್ಲವೂ ನಾವು ಮಾಡಿರೋದು ಜನರಿಗಾಗಿ. ಇವರು ಯಾರಿಗೋಸ್ಕರ ಮಾಡುತ್ತಿದ್ದಾರೆ? ಇವರಲ್ಲಿ ನಾಯಕತ್ವ ಕೊರತೆ ಇದೆ ಅಂತ ಎದ್ದು ಕಾಣುತ್ತಿದೆ ಎಂದು ತಿರುಗೇಟು ನೀಡಿದರು.
ಬಾಂಗ್ಲಾದೇಶಿಗರು ಕರ್ನಾಟಕಕ್ಕೆ ಹೇಗೆ ಬರ್ತಾರೆ, ಅಮಿತ್ ಶಾ ಕಡಲೆಕಾಯಿ ತಿನ್ನುತ್ತಿದ್ದರಾ? ಪ್ರಿಯಾಂಕ್ ಖರ್ಗೆ ವಾಗ್ದಾಳಿ
WhatsApp Group
Join Now