ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿ ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಪ್ರಶಸ್ತಿಯನ್ನು ಗೆದ್ದ ನಂತರ, ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಟೀಮ್ ಹಾಗೂ ಸ್ಮೃತಿ ಮಂಧನಾ ನಾಯಕತ್ವವನ್ನು ಹೊಗಳು ಟ್ವೀಟ್ಗಳಿಂದ ತುಂಬಿತುಳುಕಿತ್ತು.
ಆದರೂ, ಪ್ರಖ್ಯಾತ ಎಕ್ಸ್ ಪೇಜ್ ಒಂದು, ಈ ಗೆಲುವಿನಲ್ಲೂ ಧರ್ಮವನ್ನು ಸೇರಿಸಿದ್ದು ವಿವಾದಕ್ಕೆ ಕಾರಣವಾಯಿತು. ಈ ಪೋಸ್ಟ್ಅನ್ನು ರಿಪೋಸ್ಟ್ ಮಾಡಿರುವ ನಟ ಹಾಗೂ ನಿರ್ದೇಶಕ ಪ್ರಕಾಶ್ ರಾಜ್, ಇದೊಂದು ಅಸಹ್ಯಕರ ಪೋಸ್ಟ್ ಎಂದು ಹೇಳಿದ್ದಾರೆ.
ಅತ್ಯಂತ ಅಸಹ್ಯಕರ ಎಂದ ಪ್ರಕಾಶ್ ರಾಜ್
ಪೋಸ್ಟ್ನಲ್ಲಿ, X (ಹಿಂದಿನ ಟ್ವಿಟರ್) ಖಾತೆಯು ಮಂಧಾನ ಅವರ ಗೆಲುವಿಗೆ ತಿರುಪತಿ ಬಾಲಾಜಿಯ ಆಶೀರ್ವಾದ ಕಾರಣ ಎಂದು ಹೇಳಿಕೊಂಡಿದೆ. “ಜೀಸಸ್ ಜೆಮಿಮಾ ರೊಡ್ರಿಗಸ್ಗೆ ಸಹಾಯ ಮಾಡಲಿಲ್ಲ, ಆದರೆ ತಿರುಪತಿ ಬಾಲಾಜಿ ಸ್ಮೃತಿ ಮಂದನಾಗೆ ತಮ್ಮ ಆಶೀರ್ವಾದ ನೀಡಿದರು! WPL 2026 ಗೆದ್ದಿದ್ದಕ್ಕಾಗಿ RCB ಗೆ ಅಭಿನಂದನೆಗಳು,” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಈ ಪೋಸ್ಟ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ಕೊಳೆತ ಮನಸ್ಸು” ಮಾತ್ರ ಇಂತಹ “ಅಸಹ್ಯಕರ” ಪೋಸ್ಟ್ ಅನ್ನು ಪೋಸ್ಟ್ ಮಾಡಲು ಸಾಧ್ಯ ಎಂದು ಬರೆದಿದ್ದಾರೆ. “ಅಸಹ್ಯಕರ… ಕೊಳೆತ ಮನಸ್ಸು ಮಾತ್ರ ಹೀಗೆ ಯೋಚಿಸಬಲ್ಲದು… ನಾವು ಇಲ್ಲಿಗೆ ಬಂದಿದ್ದೇವೆಯೇ?” ನಟ ಪ್ರಕಾಶ್ ರಾಜ್ ಎಕ್ಸ್ನಲ್ಲಿ ಬರೆದಿದ್ದಾರೆ.
ಭರ್ಜರಿ ಗೆಲುವು ಕಂಡ ಆರ್ಸಿಬಿ
ವಡೋದರ ಇಂಟರ್ನ್ಯಾಷನ್ ಸ್ಟೇಡಿಯಂನಲ್ಲಿ ನಡೆದ ಡಬ್ಲ್ಯೂಪಿಎಲ್ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧನಾ ನೇತೃತ್ವದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿತ್ತು. ಭರ್ಜರಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಆರ್ಸಿಬಿ ಗೆಲುವಿಗೆ 203 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಆರ್ಸಿಬಿ 19.4 ಓವರ್ಗಳಲ್ಲಿ ಈ ಗುರಿ ಬೆನ್ನಟ್ಟುವ ಮೂಲಕ 6 ವಿಕೆಟ್ ಗೆಲುವು ಸಾಧಿಸಿ 2ನೇ ಬಾರಿಗೆ ಚಾಂಪಿಯನ್ ಪಟ್ಟವೇರಿತು.
41 ಎಸೆತಗಳಲ್ಲಿ 87 ರನ್ ಗಳಿಸಿದ ಸ್ಮೃತಿ ಮಂಧಾನ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು ಮತ್ತು ಗುಜರಾತ್ ಜೈಂಟ್ಸ್ (ಜಿಜಿ) ತಂಡದ ಸೋಫಿ ಡಿವೈನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯಾವಳಿಯನ್ನು ಗೆದ್ದ ನಂತರ, 29 ವರ್ಷದ ಆಟಗಾರ್ತಿ ಟ್ರೋಫಿಯೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಸಿರೀಸ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಶೀರ್ಷಿಕೆಯಲ್ಲಿ, ಅವರು “ಈ ಸಲಾ ಕೂಡ ಕಪ್ ನಮ್ದು” ಎಂದು ಬರೆದಿದ್ದಾರೆ.
ನಟಿ ಅನುಷ್ಕಾ ಶರ್ಮಾ ಮಂಧಾನ ಅವರ ಪೋಸ್ಟ್ ಅನ್ನು ಇಷ್ಟಪಟ್ಟಿದ್ದಾರೆ ಮತ್ತು ಎಮೋಜಿಗಳೊಂದಿಗೆ “ಕ್ವೀನ್” ಎಂಬ ಒಂದು ಪದದ ಕಾಮೆಂಟ್ ಅನ್ನು ಸಹ ಹಾಕಿದ್ದಾರೆ.