‘ಮಸೀದಿ ಕೆಡವಿದ್ರೆ ದೇಗುಲ ಸಿಕ್ಕಂತೆಯೇ ದೇಗುಲ ಕೆಡವಿದ್ರೆ ಸ್ತೂಪ ಸಿಗುತ್ತದೆ’: ಸಚಿವ ಪ್ರಿಯಾಂಕ್ ಖರ್ಗೆ

Spread the love

ಮಸೀದಿ ಕೆಡವಿದರೆ ಹೇಗೆ ದೇವಾಲಯಗಳು ಸಿಗುತ್ತದೆಯೇ ಅದೇ ರೀತಿ ದೇವಾಲಯಗಳನ್ನು ಕೆಡವಿದರೆ ಸ್ತೂಪ ಸಿಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು, ಈ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ನಡೆದ ನವೀನ್ ಸೂರಿಂಜೆಯವರ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಖರ್ಗೆಯವರು ಮಾತನಾಡಿದರು.

ಇತಿಹಾಸವನ್ನು ಆಳವಾಗಿ ಹುಡುಕಿದರೆ, ನೀವು ಸಿಕ್ಕಿಹಾಕಿಕೊಳ್ಳುತ್ತೀರಿ. ನೀವು ಯಾವುದೇ ಮಸೀದಿಯನ್ನು ಕೆಡವಿದರೆ ನಿಮಗೆ ದೇವಾಲಯ ಸಿಗಬಹುದು, ಅದೇ ರೀತಿ ದೇವಾಲಯವನ್ನು ಕೆಡವಿದರೂ ನಿಮಗೆ ಸ್ತೂಪ ಸಿಗುತ್ತದೆ. ಸ್ತೂಪವನ್ನು ಕೆಡವಿದರೆ, ಏನು ಸಿಗುತ್ತದೆ ಎಂಬುದು ನನಗೆ ಗೊತ್ತಿಲ್ಲ…. 3,500 ವರ್ಷಗಳ ಇತಿಹಾಸ ಆಧರಿಸಿ ನಾನು ಹೇಳಿಕೆ ನೀಡುತ್ತಿದ್ದೇನೆಂದು ಹೇಳಿದರು.

ವೇದ ಕಾಲದ ಬ್ರಾಹ್ಮಣ್ಯದ ಸಂಪ್ರದಾಯವು ಜಾತಿ ವ್ಯವಸ್ಥೆ ಮತ್ತು ವೇದಗಳ ಪ್ರಾಬಲ್ಯವನ್ನು ನಂಬದ ಜೈನ ಮತ್ತು ಬೌದ್ಧ ಧರ್ಮದಂತಹ ಶ್ರಮಣ ಸಂಪ್ರದಾಯಗಳೊಂದಿಗೆ ದೀರ್ಘಕಾಲದ ಹೋರಾಟ ನಡೆಸಿದೆ ಎಂಬ ಐತಿಹಾಸಿಕ ಹಿನ್ನೆಲೆಯನ್ನು ಅವರು ಈ ಮೂಲಕ ಉಲ್ಲೇಖಿಸಿದರು.

ಇದೇ ವೇಳೆ ಟಿಪ್ಪು ಸುಲ್ತಾನ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿದ ಅವರು, ಬ್ರಿಟಿಷರ ವಿರುದ್ಧ ಟಿಪ್ಪು ನಡೆಸಿದ ಹೋರಾಟವನ್ನು ಆರೆಸ್ಸೆಸ್ (RSS) ನಿಲುವಿಗೆ ಹೋಲಿಸಿದರು.

ಬ್ರಿಟಿಷರ ವಿರುದ್ಧ ಆರೆಸ್ಸೆಸ್ ಒಂದು ಸಣ್ಣ ಧ್ವನಿಯನ್ನೂ ಎತ್ತಿರಲಿಲ್ಲ ಎಂದು ಟೀಕಿಸಿದ ಅವರು, 18ನೇ ಶತಮಾನದ ರಾಜ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ನಡೆಸಿದ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳನ್ನು ಮತ್ತು ಅವರ ವಸಾಹತುಶಾಹಿ ವಿರೋಧಿ ನಿಲುವನ್ನು ಸ್ಮರಿಸಿದರು.

ಇದೇ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ‘ಟಿಪ್ಪು ಸುಲ್ತಾನ್‌ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ವಾದ ಮಾಡುತ್ತಾರೆ. ಆದರೆ, ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಆಂಗ್ಲೊ-ಮೈಸೂರು ಯುದ್ಧಗಳನ್ನು ಮಾಡಿದ್ದು ನಿಜವೊ, ಸುಳ್ಳೊ? ಬ್ರಿಟಿಷರ ವಿರುದ್ಧ ಹೋರಾಡಿದವರು ಸ್ವಾತಂತ್ರ್ಯ ಹೋರಾಟಗಾರರು ಅಲ್ಲವೇ? ಎಂದು ಪ್ರಶ್ನಿಸಿದರು.

‘ಟಿಪ್ಪುಸುಲ್ತಾನ್ ತೋಟಗಾರಿಕೆಯ ಪಿತಾಮಹ ಆಗಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ಬೆಂಗಳೂರಿನ ಲಾಲ್‌ಬಾಗ್‌ ಅನ್ನು ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ ನಿರ್ಮಿಸಿದ್ದಾರೆ. ಆದರೆ, ಆ ಭಾಗದ ಸಂಸದರು ಟಿಪ್ಪು ವಿರೋಧಿಯಾಗಿದ್ದಾರೆ. ಹಾಗಾದರೆ ಲಾಲ್‌ಬಾಗ್‌ ಅನ್ನು ಸುಡುತ್ತೀರಾ’ ಎಂದು ಪ್ರಶ್ನಿಸಿದರು.

ಇದೇ ವೇಳೆ ತಾನು ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ ಬ್ರಿಟಿಷ್ ಇತಿಹಾಸ ತಜ್ಞರೊಬ್ಬರು, ಬ್ರಿಟಿಷ್ ಇತಿಹಾಸದ ಪುಸ್ತಕಗಳಲ್ಲಿ ಭಾರತದ ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಹೆಸರಿದ್ದು, ಅದರಲ್ಲಿ ಟಿಪ್ಪು ಹೆಸರು ಪ್ರಮುಖವಾಗಿದೆ ಎಂದು ಹೇಳಿದ್ದನ್ನು ಅವರು ಸ್ಮರಿಸಿದರು.

WhatsApp Group Join Now

Spread the love

Leave a Reply