ಯಾದಗಿರಿ: ಪೋಕ್ಸೋ (POCSO) ಕೇಸ್ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ (mallikarjuna Mutya) ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಅಜ್ಞಾತ ಸ್ಥಳದಿಂದ ವೀಡಿಯೋ ಮಾಡಿರುವ ಮುತ್ಯಾ, ನನ್ನ ಶ್ರೀಮಠದ ಭಕ್ತಾದಿಗಳೇ ಯಾವುದೇ ಆತಂಕ ಪಡಬೇಡಿ. ನಾನು ಎಲ್ಲೂ ಹೋಗಿಲ್ಲ.. ಲೋಕಲ್ನಲ್ಲೇ ಇದ್ದೀನಿ ಎಂದಿದ್ದಾರೆ.
ವೀಡಿಯೋದಲ್ಲಿ ಮುತ್ಯಾ ಹೇಳಿದ್ದೇನು..?: ನನ್ನ ಶ್ರೀಮಠದ ಭಕ್ತಾದಿಗಳೇ ಯಾವುದೇ ಆತಂಕ ಪಡಬೇಡಿ, ನಾನು ಇಲ್ಲೇ ಲೋಕಲ್ ಅಲ್ಲೇ ಇದ್ದೀನಿ, ಮಠದಲ್ಲಿ ಸಾಮೂಹಿಕ ಮದುವೆ ಇದ್ದ ಕಾರಣ ಕಾರ್ಡ್ ಕೊಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ ಕರೆ ನೀಡಿದ್ದಾರೆಂಬುದು ಕೇಳಿದ್ದೇನೆ. ಖಂಡಿತಾ ಪೊಲೀಸ್ ಅಧಿಕಾರಿಗಳು ಯಾವಾಗ ಬಾ ಅಂತಾರೆ ಆಗ ನಾನು ಹೋಗಲು ಸಿದ್ಧನಿದ್ದೇನೆ. ಈ ವಿಷಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ನೀವು ಆತಂಕಪಡಬೇಡಿ ಎಂದು ಮಲ್ಲಿಕಾರ್ಜುನ ಮುತ್ಯಾ ವಿಡಿಯೋದಲ್ಲಿ ತಿಳಿಸಿದ್ದಾರೆ.
ಏನಿದು ಕೇಸ್..?: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ದೃಶ್ಯಾವಳಿಗಳಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿವೆ. ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ಹಾಗೂ ಚರ್ಚೆ ವ್ಯಕ್ತವಾಗುತ್ತಿದ್ದಂತೆ, ಪ್ರಕರಣಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಂಟ್ರಿ ಕೊಟ್ಟಿತ್ತು. ಬಳಿಕ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಸದ್ಯ ಮಲ್ಲಿಕಾರ್ಜುನ ಮುತ್ಯಾ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸುವ ಸಾಧ್ಯತೆ ಇದೆ. ಇಂದೇ ತನಿಖಾ ತಂಡ ತೆಲಂಗಾಣಕ್ಕೆ ತೆರಳುವ ಸಾಧ್ಯತೆ ಇದ್ದು, ಈಗಾಗಲೇ ಪೊಲೀಸರು ಮಲ್ಲಿಕಾರ್ಜುನ ಮುತ್ಯಾಗೆ ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಇವತ್ತು ವಿಚಾರಣೆಗೆ ಹಾಜರಾಗದಿದ್ದರೆ ತನಿಖಾ ತಂಡ ತೆಲಂಗಾಣಕ್ಕೆ ತೆರಳುವ ಸಾಧ್ಯತೆ ಇದೆ.
ವೈರಲ್ ವೀಡಿಯೋದಲ್ಲಿ ಏನಿದೆ..?: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದರು. ಶಹಾಪುರ ತಾಲ್ಲೂಕಿನ ರೋಜಾ ಮಹಲ್ ಗ್ರಾಮ ಮಲ್ಲಿಕಾರ್ಜುನ ಮುತ್ಯಾನ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಅಪ್ರಾಪ್ತಯೊಂದಿಗೆ ಮಲ್ಲಿಕಾರ್ಜುನ ಮುತ್ಯಾ ಡ್ಯಾನ್ಸ್ ಮಾಡಿದ್ದಾನೆ.
ಡ್ಯಾನ್ಸ್ ಮಾಡಿದ್ದರೆ ವಿವಾದ ಆಗುತ್ತಿರಲಿಲ್ಲ. ಆಕೆಯ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು, ಮೂಗು ಚಿವುಟುವುದು ಹಾಗೂ ಅಸಭ್ಯವಾಗಿ ಸ್ಪರ್ಶಿಸುವ ದೃಶ್ಯಗಳು ವಿಡಿಯೋದಲ್ಲಿ ಇವೆ. ಅದೇ ಕಾರಣಕ್ಕೆ ಮಲ್ಲಿಕಾರ್ಜುನ ಮುತ್ಯಾನ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದರು.
ಮಲ್ಲಿಕಾರ್ಜುನ ಮುತ್ಯಾ ಅಸಭ್ಯವಾಗಿ ವರ್ತಿಸುತ್ತಿದ್ರೂ ಕೂಡಾ ಅಲ್ಲೇ ಇದ್ದ ಕೆಲ ಮಹಿಳೆಯರು ಮತ್ತು ಪುರುಷರು ವಿರೋಧ ಮಾಡಿಲ್ಲ. ತಪ್ಪು ಮಾಡುತ್ತಿದ್ದೀರಿ ಎಂದು ಹೇಳಿಲ್ಲ. ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.