ಮುಖ್ಯಮಂತ್ರಿ ಬದಲಾವಣೆ : ‘ಸಂಗಮೇಶನು ಅರಿವನೆ ಒಳಹಡ್ಡ ಬಂದಿದೆ’ – ಕೋಡಿಮಠದ ಶ್ರೀಗಳ ಭವಿಷ್ಯ

Spread the love

ರಾಜ್ಯ ರಾಜಕಾರಣದಲ್ಲಿ ಇಂದೇನು ಆಗುತ್ತೋ, ನಾಳೇನು ಆಗುತ್ತೋ ಎನ್ನುವ ಕುತೂಹಲದಲ್ಲಿ ಜನಸಾಮಾನ್ಯರಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರು ಇಳಿಯುತ್ತಾರೋ, ಡಿಕೆ ಶಿವಕುಮಾರ್ ಸಿಎಂ ಹುದ್ದೆಗೆ ಏರುತ್ತಾರೋ, ಅಥವಾ ಡಾರ್ಕ್ ಹಾರ್ಸ್ ಇನ್ಯಾರಾದರೂ ಇದ್ದಾರಾ ಎನ್ನುವುದನ್ನು ಜನರು ಕಾತುರದಿಂದ ನೋಡುತ್ತಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲದ ಅಧಿವೇಶನದ ವೇಳೆ, ಮುಖ್ಯಮಂತ್ರಿ ಬದಲಾವಣೆಯ ಕುರಿತಂತೆ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಈ ನಡುವೆ, ಮುಂದಿನ ಮಕರ ಸಂಕ್ರಾಂತಿಯ ಶುಭಪರ್ವದಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ರಾಜಕೀಯ ಸುಖಾಂತ್ಯ ಕಾಣಲಿದೆ ಎಂದು ಕೋಡಿಮಠದ ಶ್ರೀಗಳು ಹೇಳಿರುವುದು, ಕುತೂಹಲ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

ಕರ್ನಾಟಕ ಕಾಂಗ್ರೆಸ್ಸಿನ ಅಧಿಕಾರ ಹಸ್ತಾಂತರದ ಸುಖಾಂತ್ಯ , ಸಂಕ್ರಾಂತಿ ಮತ್ತು ರಾಜ್ಯ ಬಜೆಟ್ ನಂತರ ಎಂದು ಕೋಡಿಶ್ರೀಗಳು ಹೇಳಿದ್ದಾರೆ. ಆದರೆ, ಸುಖಾಂತ್ಯ ಯಾರ ಪರವಾಗಿ ಆಗಲಿದೆ ಎನ್ನುವುದಕ್ಕೆ ಯಾರಿಗೆ ಬೇಕಾದರೂ ಸುಖಾಂತ್ಯ ಆಗಬಹುದು ಎಂದು ಅಡ್ಡಗೋಡೆಯ ಮೇಲೆ ಶ್ರೀಗಳು ದೀಪವನ್ನು ಇಟ್ಟಿದ್ದಾರೆ.

‘ ಸಂಗಮೇಶನು ಅರಿವನೆ, ಆದರೆ ಒಳಹಡ್ಡ ಬಂದಿದೆ, ಶಿವನ ಮುಡಿಯ ಎರಡು ದುಂಡು ಮಲ್ಲಿಗೆಗಳು ಶಿವನ ಬಲಪಾದ ಸೇರಿಯಾವು, ಮುಂದೆ ಸುಖ್ಯಾಂತ್ಯವಾಗಲಿದೆ. ಸಂಕ್ರಾಂತಿ, ಬಜೆಟ್ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ಸುಖಾಂತ್ಯ ಯಾರಿಗಾದರೂ ಆಗಬಹುದು’ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.

ತಾಳೇಗರಿ ಆಧಾರಿತವಾಗಿ ಭವಿಷ್ಯ ನುಡಿಯುವ, ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ನಮ್ಮ ದೇಶದಲ್ಲಿ ಭವಿಷ್ಯಕ್ಕೆ ಜನರು ಬಹಳಷ್ಟು ಒತ್ತನ್ನು ಕೊಡುತ್ತಾರೆ, ನಂಬುತ್ತಾರೆ, ಇದು ನಮ್ಮ ಸಂಸ್ಕೃತಿಯ ಭಾಗ. ವಿಶೇಷವಾಗಿ ಸಂಕ್ರಾಂತಿಯ ನಂತರ ಒಂದು, ಯುಗಾದಿಯ ನಂತರ ಇನ್ನೊಂದು ಭವಿಷ್ಯ ಬರುತ್ತದೆ ಎಂದು ತಮ್ಮ ಮಾತನ್ನು ಪುನರುಚ್ಚಿಸಿದ್ದಾರೆ.

ಯುಗಾದಿಯ ನಂತರ ಬರುವ ಭವಿಷ್ಯ, ಈ ನಾಡಿನ ಆಗುಹೋಗುಗಳು, ಆರೋಗ್ಯ, ಚಿಂತನೆ, ಮಳೆಬೆಳೆ, ಜನಜೀವನ ಮುಂತಾದವುಗಳಾಗಿರುತ್ತದೆ. ಸಂಕ್ರಾಂತಿಯ ನಂತರ ಬರುವ ಭವಿಷ್ಯ, ವ್ಯಾಪಾರಸ್ಥರಿಗೆ, ರಾಜರು ದೊರೆಗಳಿಗೆ ಬರುತ್ತದೆ. ಹಾಗಾಗಿ ಈ ರಾಜಕೀಯ ಎನ್ನುವುದು ಸಂಕ್ರಾಂತಿಯ ನಂತರ ನಿರ್ಧಾರವಾಗುತ್ತದೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.

ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ, ಆ ಸಮುದಾಯದ ಕೊಡುಗೆ ಈ ಸಮಾಜಕ್ಕೆ ಬಹಳಷ್ಟಿದೆ. ನಾಡಿನ ಈಗಿನ ದೊರೆಗಳು ಅವರಾಗಿಯೇ ಬಿಡಬೇಕೇ ಹೊರತು, ಬಲವಂತದಿಂದ ಅವರನ್ನು ಇಳಿಸುವುದು ಅಸಾಧ್ಯ ಎಂದು ಬಹಳಷ್ಟು ಬಾರಿ ಕೋಡಿಮಠದ ಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟದ ಯೋಗವಿದೆಯೇ ಎನ್ನುವ ಪ್ರಶ್ನೆಗೆ, ಬೇಡನೊಬ್ಬನು ಜಿಂಕೆ ಓಡಿಸಿಕೊಂಡು ಬಂದ, ಅಲ್ಲಿ ಒಬ್ಬ ಸನ್ಯಾಸಿ ಕೂತಿದ್ದ. ಬೇಡ ಬಂದು, ಸನ್ಯಾಸಿಯನ್ನು ಕೇಳಿದ, ಇಲ್ಲಿ ಜಿಂಕೆ ಬಂದಿತ್ತಾ ಎಂದು. ಹೇಳಿಕೇಳಿ ಸನ್ಯಾಸಿ ಆತ, ಯಾವುದು ನೋಡಿತು ಅದು ಮಾತನಾಡಲಿಲ್ಲ, ಯಾವುದು ಮಾತಾನಾಡುತ್ತೆ ಅದು ನೋಡಿಲ್ಲ. ನಾನೇನು ಮಾಡಲಿ ಎಂದ ಸನ್ಯಾಸಿ ಹೇಳಿದ ಎಂದು ಕೋಡಿಮಠದ ಶ್ರೀಗಳು ಹೇಳುವ ಮೂಲಕ, ಅಧಿಕಾರ ಹಸ್ತಾಂತರ ನಡೆಯುತ್ತೆ ಎನ್ನುವ ಖಚಿತತೆ ಇಲ್ಲ ಎಂದು ಪರೋಕ್ಷವಾಗಿ ಕೋಡಿಶ್ರೀಗಳು ಹೇಳಿದ್ದಾರೆ.

ಆದರೆ, ಮುಂದಿನ ವರ್ಷ ಅಂದರೆ 2026ರಲ್ಲಿ, ವರುಣ ಮತ್ತು ಅಗ್ನಿಯ ಅಟ್ಟಹಾಸ ಜಾಸ್ತಿ ಇರಲಿದೆ. ದೇಶದ ಜನತೆಗೆ ಅಶಾಂತಿ, ಅಭದ್ರತೆ ಕಾಡಲಿದೆ. ರಾಜಕೀಯದ ಭವಿಷ್ಯವನ್ನು ಸಂಕ್ರಾಂತಿಯ ನಂತರ ಹೇಳುತ್ತೇನೆ ಎಂದು ಕೋಡಿಮಠದ ಶ್ರೀಗಳು ನುಡಿದಿದ್ದಾರೆ.

WhatsApp Group Join Now

Spread the love

Leave a Reply