‘ನಿಮ್ಮ ಹಣ.. ‘ನಾಯಿ ಮೊಲೆ ಹಾಲಿದ್ದಂಗೆ’.. ಯಾರಿಗೂ ಪ್ರಯೋಜನವಿಲ್ಲ’: ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಟೀಕಾ ಪ್ರಹಾರ

Spread the love

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಜಾತ್ಯಾತೀತ ಜನತಾದಳ ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ಕೂಡಲೇ ಅವರ ರಾಜಿನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ.

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಶನಿವಾರ ಆಯೋಜಿಸಿದ್ದ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ 2025ರ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಡಿಸಿ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿರುವ ಜೆಡಿಎಸ್, ಇಂತಹವರು ಜನಪ್ರತಿನಿಧಿಯಾಗಿ ಮುಂದುವರೆಯಲು ನಾಲಾಯಕ್ ಎಂದು ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ‘ಡಿಕೆ ಶಿವಕುಮಾರ್ ಅವರೇ, ನೀವು ಶಾಸಕರಾದರೇನು ? ‌ಮಂತ್ರಿಯಾದರೇನು ? ಡಿಸಿಎಂ ಆದರೇನು ? ನೀನೊಬ್ಬ ಮನುಷ್ಯ ಅಷ್ಟೇ. ಜನರಿಂದ ಆಯ್ಕೆಯಾದ ನೀವು, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಿಮ್ಮ ಆದ್ಯ ಕರ್ತವ್ಯ. ಅದನ್ನು ಬಿಟ್ಟು ಪ್ರಶ್ನೆ ಮಾಡಿದವರಿಗೆ ಧಮ್ಕಿ, ಬೆದರಿಕೆ ಹಾಕುವುದು ಸಂವಿಧಾನದ ಪ್ರಕಾರ ಅಪರಾಧ! ನಾವು 80ರ ದಶಕದಲ್ಲಿ ಜೀವಿಸುತ್ತಿಲ್ಲ.. ಎಂದು ಹೇಳಿದೆ.

ಅಂತೆಯೇ ಮುಂದುವರೆದು, ‘ಡಿಕೆಶಿ ಅವರೇ, ನಿಮ್ಮ ಬಳಿ ದುಡ್ಡಿದ್ದರೆ, ಅದು ” ನಾಯಿ ಮೊಲೆ ಹಾಲಿದ್ದಂಗೆ “. ಯಾರಿಗೂ ಪ್ರಯೋಜನವಿಲ್ಲ. ಅಧಿಕಾರದ ಮದ, ದಬ್ಬಾಳಿಕೆ ನೆತ್ತಿಗೇರಿದೆ. ಕೊತ್ವಾಲ್ ಶಿಷ್ಯನ ರೌಡಿಸಂ, ಗೂಂಡಾ ಪ್ರವೃತ್ತಿಗೆ ಕಡಿವಾಣ ಹಾಕದಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇಂತಹವರು ಜನಪ್ರತಿನಿಧಿಯಾಗಿ ಮುಂದುವರಿಯಲು ನಾಲಾಯಕ್ಕು.

ಸಂವಿಧಾನದ ರಕ್ಷಣೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಮೊದಲು ಡಿಕೆಶಿಯಂತಹ ರೌಡಿ ರಾಜಕಾರಣಿಯ ರಾಜೀನಾಮೆ ಪಡೆದು, ಬಳಿಕ ದೇಶದ ಜನತೆಗೆ ಸಂವಿಧಾನದ ಬಗ್ಗೆ ಪಾಠ ಮಾಡುವುದು ಒಳಿತು” ಎಂದು ಟ್ವೀಟ್ ಮಾಡಿದೆ.

WhatsApp Group Join Now

ಮತ್ತೊಂದು ಟ್ವೀಟ್ ನಲ್ಲಿ, ‘ಹೌದು.. ಮಿಸ್ಟರ್‌ ಧಮ್ಕಿ ಡಿಕೆಶಿ ಅವರೇ, ಆ ದಿನಗಳಲ್ಲಿ ನೀವು ಯಾರ ಜೊತೆ ಇದ್ದೀರಿ ? ನಿಮ್ಮ ಹಿನ್ನೆಲೆ ಏನು ? ಎಂಬುದು ಸಾಮಾನ್ಯ ಜನರಿಗೆ ಗೊತ್ತಿಲ್ಲ. ಉಪಮುಖ್ಯಮಂತ್ರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಬೀದಿರೌಡಿಯಂತೆ ವೇದಿಕೆಯಲ್ಲೇ ನಾಗರಿಕರಿಗೆ ಹೆದರಿಸುವುದು, ಬೆದರಿಸುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ.

ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಜನಸಾಮಾನ್ಯರಿಗೂ ಇದೆ. “ಸಂವಿಧಾನ ರಕ್ಷಿಸುತ್ತೇವೆ” ಎಂದು ಸಂವಿಧಾನ ಪುಸ್ತಕ ಹಿಡಿದರೇ ಸಾಲದು. ಈ ನಿಮ್ಮ ದರ್ಪ, ದುರಂಹಕಾರಕ್ಕೆ ಮತಹಾಕುವ ಜನರೇ ಬುದ್ಧಿ ಕಲಿಸುತ್ತಾರೆ’ ಎಂದು ಟ್ವೀಟ್ ಮಾಡಿದೆ.

ಇಷ್ಟಕ್ಕೂ ಡಿಕೆಶಿ ಹೇಳಿದ್ದೇನು?

ಸರ್ಕಾರವು ತಮ್ಮ ಹಲವಾರು ಭರವಸೆಗಳನ್ನು ಈಡೇರಿಸಿದ್ದರೂ, ಅಪಾರ್ಟ್‌ಮೆಂಟ್ ನಿವಾಸಿಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಮತ ಹಾಕಿಲ್ಲ ಎಂಬುದರತ್ತ ಪದೇ ಪದೇ ಗಮನ ಸೆಳೆದ ಡಿಕೆ ಶಿವಕುಮಾರ್, ಜಿಬಿಎ ಚುನಾವಣೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹೆದರಿಸದಂತೆ ಪತ್ರ ಬರೆದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನಾನು ಮನೆ ಖರೀದಿದಾರರೊಂದಿಗೆ ನಿಲ್ಲುವ ಕಾರಣಕ್ಕೆ ಈ ಸಭೆಯನ್ನು ಕರೆದಿದ್ದೇನೆ. ನಿಮ್ಮ ನೋವು ಮತ್ತು ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅದೇ ಸಮಯದಲ್ಲಿ ಮುಂಬರುವ ಜಿಬಿಎ ಚುನಾವಣೆಯಲ್ಲಿ ನಿಮ್ಮಿಂದ ಬೆಂಬಲವನ್ನು ನಿರೀಕ್ಷಿಸುತ್ತೇನೆ. ನಿಮ್ಮಿಂದ ನನಗೆ ಅಪಾರ ನಿರೀಕ್ಷೆಗಳಿವೆ ಮತ್ತು ನೀವು ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ” ಎಂದು ಡಿಸಿಎಂ ಸೂಚ್ಯವಾಗಿ ಹೇಳಿದರು.

ಈ ವೇಳೆ ಕಿರಣ್‌ ಹೆಬ್ಬಾರ್‌ ಎಂಬುವವರು ಸರ್ಕಾರಕ್ಕೆ ಬರೆದ ಪತ್ರದ ಧಾಟಿಗೆ ಅಸಮಧಾನ ವ್ಯಕ್ತಪಡಿಸಿದ ಡಿಕಜೆ ಶಿವಕುಮಾರ್, “ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೂ ಹೆದರದೆ ಜೈಲಿಗೆ ಹೋಗಿ ಬಂದವನು ನಾನು. ಅಂತದ್ದರಲ್ಲಿ ಕಿರಣ್‌ ಹೆಬ್ಬಾರ್‌ ಅವರಂತಹವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಪ್ರೀತಿಯಿಂದ ಮಾತನಾಡಿಸಿದರೆ, ಪ್ರೀತಿಯಿಂದಲೇ ಮಾತನಾಡಿಸುವೆ” ಎಂದು ಗುಡುಗಿದರು.

WhatsApp Group Join Now

Spread the love

Leave a Reply