Cancer : ನಿರ್ಲಕ್ಷಿಸಿದರೆ ಮಾರಕ : ಕ್ಯಾನ್ಸರ್ ನೀಡುವ ಆರಂಭಿಕ ಎಚ್ಚರಿಕೆಯ ಸಂಕೇತಗಳು ಇಲ್ಲಿವೆ!

Spread the love

ಕ್ಯಾನ್ಸರ್ (Cancer) ಇಂದಿನ ದಿನಗಳಲ್ಲಿ ಚಿಕಿತ್ಸೆ ಸಾಧ್ಯವಾಗುವ ಕಾಯಿಲೆಯಾದರೂ (Disease), ಅದರ ಕೆಲವು ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಥವಾ ಸಕಾಲದಲ್ಲಿ ವೈದ್ಯಕೀಯ ನೆರವು ಪಡೆಯದಿರುವುದು ಇದನ್ನು ಜೀವಘಾತಕ ರೋಗವನ್ನಾಗಿ ಮಾರ್ಪಡಿಸಬಹುದು. ಬಹುತೇಕ ಸಂದರ್ಭಗಳಲ್ಲಿ ಕ್ಯಾನ್ಸರ್ ತನ್ನ ಇರುವಿಕೆಯನ್ನು ಸ್ಪಷ್ಟವಾಗಿ ತೋರಿಸುವುದಕ್ಕಿಂತ ಮುನ್ನ ದೇಹದ ಮೂಲಕ ಕೆಲವು ಎಚ್ಚರಿಕೆಯ ಸಂಕೇತಗಳನ್ನು ನೀಡುತ್ತದೆ.

ಆದರೆ ಅವುಗಳನ್ನು ಸಾಮಾನ್ಯ ದೌರ್ಬಲ್ಯ, ಒತ್ತಡ, ವಯಸ್ಸಿನ ಪರಿಣಾಮ ಅಥವಾ ಸಣ್ಣ ಕಾಯಿಲೆ ಎಂದು ಅಸಡ್ಡೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಆರಂಭಿಕ ಲಕ್ಷಣ ಗಮನಿಸಿ!

ಈ ಕುರಿತು ದ್ವಾರಕಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ (ಹೆಡ್ & ನೆಕ್) ಅಸೋಸಿಯೇಟ್ ಡೈರೆಕ್ಟರ್ ಹಾಗೂ ಯೂನಿಟ್ ಹೆಡ್ ಡಾ. ಶಿಲ್ಪಿ ಶರ್ಮಾ ಅವರು ಮಾತನಾಡುತ್ತಾ, “ಆರಂಭಿಕ ಲಕ್ಷಣಗಳನ್ನು ಗಮನಿಸದೇ ಇರುವುದರಿಂದ ಅನೇಕ ಕ್ಯಾನ್ಸರ್‌ಗಳು ತಡವಾಗಿ ಪತ್ತೆಯಾಗುತ್ತವೆ. ಇದು ರೋಗಿಗಳಿಗೆ ಅಪಾಯಕಾರಿಯಾಗಬಹುದು” ಎಂದು ಎಚ್ಚರಿಸಿದ್ದಾರೆ. ಕ್ಯಾನ್ಸರ್ ಬಗ್ಗೆ ಆರಂಭದಲ್ಲೇ ಅರಿವು ಹೊಂದುವುದು ಮತ್ತು ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ತೂಕ ನಷ್ಟ ಮತ್ತು ನಿರಂತರ ಆಯಾಸ!

ಯಾವುದೇ ವ್ಯಾಯಾಮ ಅಥವಾ ಡಯೆಟ್ ಮಾಡದೇ ಸಡನ್ ಆಗಿ ತೂಕ ಇಳಿಯುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಇದು ಕೆಲವೊಮ್ಮೆ ಕ್ಯಾನ್ಸರ್‌ನ ಮುನ್ಸೂಚನೆಯಾಗಿರಬಹುದು ಎಂದು ಡಾ. ಶಿಲ್ಪಿ ಶರ್ಮಾ ತಿಳಿಸುತ್ತಾರೆ. ಇನ್ನು ಸಾಕಷ್ಟು ವಿಶ್ರಾಂತಿ ಪಡೆದರೂ ಆಯಾಸ, ಸುಸ್ತು ಮತ್ತು ದೌರ್ಬಲ್ಯ ಕಡಿಮೆಯಾಗದೆ ವಾರಗಳವರೆಗೆ ಮುಂದುವರಿದರೆ, ಅದನ್ನು ಸಾಮಾನ್ಯ ದೇಹದ ದಣಿವು ಎಂದು ತಳ್ಳಿಬಿಡಬಾರದು. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಮೌಲ್ಯಮಾಪನ ಅಗತ್ಯವಿದೆ.

ದೇಹದ ವಿವಿಧ ಭಾಗಗಳಲ್ಲಿ ಗಡ್ಡೆ ಅಥವಾ ಊತ!

ಸ್ತನ, ಕುತ್ತಿಗೆ, ಕಂಕುಳು, ತೊಡೆಸಂದು ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಅಸಾಮಾನ್ಯ ಗಡ್ಡೆ ಅಥವಾ ಊತ ಕಂಡುಬಂದರೆ ತಕ್ಷಣ ತಪಾಸಣೆ ಮಾಡಿಸಬೇಕು. ಬಹುಸಾರ ಇವು ನೋವುರಹಿತವಾಗಿರುವುದರಿಂದ ಜನರು ಗಮನ ಕೊಡದೆ ಬಿಡುತ್ತಾರೆ. ಆದರೆ ನೋವು ಇಲ್ಲದಿದ್ದರೂ ಇದು ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಕರುಳು ಮತ್ತು ಮೂತ್ರಕೋಶದ ಅಭ್ಯಾಸಗಳಲ್ಲಿ ಬದಲಾವಣೆ!

ದೀರ್ಘಕಾಲದ ಮಲಬದ್ಧತೆ, ನಿರಂತರ ಅತಿಸಾರ, ಮಲದಲ್ಲಿನ ರಕ್ತ ಅಥವಾ ಮೂತ್ರ ವಿಸರ್ಜನೆಯ ಮಾದರಿಯಲ್ಲಿ ಸ್ಪಷ್ಟ ಬದಲಾವಣೆಗಳು ಕಂಡುಬಂದರೆ ಜೀರ್ಣಕೋಶ ಅಥವಾ ಮೂತ್ರನಾಳ ಸಂಬಂಧಿತ ಕ್ಯಾನ್ಸರ್‌ಗಳ ಸೂಚನೆಯಾಗಿರಬಹುದು. ಇಂತಹ ಬದಲಾವಣೆಗಳು ನಿರಂತರವಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ.

ನಿರಂತರ ಕೆಮ್ಮು, ಧ್ವನಿ ಬದಲಾವಣೆ ಮತ್ತು ನುಂಗಲು ತೊಂದರೆ!

ಕೆಲವು ವಾರಗಳವರೆಗೆ ಕಡಿಮೆಯಾಗದ ಕೆಮ್ಮು, ಧ್ವನಿಯಲ್ಲಿ ಒರಟುತನ ಅಥವಾ ನುಂಗಲು ತೊಂದರೆಯನ್ನು ಸಾಮಾನ್ಯ ಅಲರ್ಜಿ ಅಥವಾ ಸೋಂಕು ಎಂದು ನಿರ್ಲಕ್ಷಿಸಲಾಗುತ್ತದೆ. ಆದರೆ ವಿಶೇಷವಾಗಿ ಧೂಮಪಾನ ಮಾಡುವವರು ಅಥವಾ ಹೆಚ್ಚು ಮಾಲಿನ್ಯಕ್ಕೆ ಒಳಗಾಗುವವರಲ್ಲಿ ಇವು ಗಂಭೀರ ಲಕ್ಷಣಗಳಾಗಿರಬಹುದು. ಹೀಗಾಗಿ ತಕ್ಷಣ ತಪಾಸಣೆ ಅಗತ್ಯವಿದೆ.

ಗುಣವಾಗದ ಬಾಯಿ ಮತ್ತು ಚರ್ಮದ ಗಾಯಗಳು!

ಬಾಯಿಯಲ್ಲಿ ಅಥವಾ ಚರ್ಮದ ಮೇಲೆ ಉಂಟಾಗುವ, ಸರಿಯಾದ ಆರೈಕೆಯ ಹೊರತಾಗಿಯೂ ಗುಣವಾಗದ ಹುಣ್ಣುಗಳು ಮತ್ತೊಂದು ಪ್ರಮುಖ ಎಚ್ಚರಿಕೆಯ ಸಂಕೇತವಾಗಿದೆ. ರಕ್ತಸ್ರಾವ, ಕಫದಲ್ಲಿ ರಕ್ತ, ನಿರಂತರ ಗಾಯಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕ್ಯಾನ್ಸರ್ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿರುವುದು ಆರಂಭಿಕ ಹಂತದಲ್ಲೇ ರೋಗ ಪತ್ತೆಯಾಗುವಾಗ. ನಿಯಮಿತ ಆರೋಗ್ಯ ತಪಾಸಣೆ, ದೇಹದ ಬದಲಾವಣೆಗಳ ಬಗ್ಗೆ ಎಚ್ಚರಿಕೆ ಮತ್ತು ಸಮಯೋಚಿತ ವೈದ್ಯಕೀಯ ಸಲಹೆಯು ಕ್ಯಾನ್ಸರ್ ವಿರುದ್ಧದ ಅತ್ಯಂತ ಬಲವಾದ ಆಯುಧಗಳಾಗಿವೆ ಎಂದು ವೈದ್ಯರು ಒತ್ತಿಹೇಳುತ್ತಾರೆ…!

WhatsApp Group Join Now

Spread the love

Leave a Reply