ಚಿತ್ರದುರ್ಗದಲ್ಲಿ ವರದಕ್ಷಿಣೆಗಾಗಿ 2ನೇ ಮದುವೆಯಾಗಲು ಹೋದ ಗಂಡನಿಗೆ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ನಡೆದಿದೆ. ತನುಜಾ ಎಂಬ ಮಹಿಳೆ ತನ್ನ ಗಂಡ ಕಾರ್ತಿಕ್ 2ನೇ ಮದುವೆಗೆ ಮುಂದಾಗುತ್ತಿರುವುದನ್ನು ತಿಳಿದು ಮಂಟಪಕ್ಕೆ ನುಗ್ಗಿ ಚಪ್ಪಲಿಯಿಂದ ಹೊಡೆದಿದ್ದಾರೆ.
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಒಂದು ವಿಚಿತ್ರ ಘಟನೆ ಶನಿವಾರ ನಡೆದಿದೆ. ತಮ್ಮ ಗಂಡ ಕಾರ್ತಿಕ್ ಅವರು ವರದಕ್ಷಿಣೆಯ ದುರಾಸೆಯಿಂದ ಬೇರೆ ಯುವತಿಯೊಂದಿಗೆ 2ನೇ ಮದುವೆಗೆ ಮುಂದಾಗುತ್ತಿರುವ ಮಾಹಿತಿ ತಿಳಿದ ತನುಜಾ ಎಂಬ ಮಹಿಳೆ ನೇರವಾಗಿ ಮಂಟಪಕ್ಕೆ ಬಂದು ಗಂಡನಿಗೆ ಎಲ್ಲರ ಮುಂದೆಯೇ ಚಪ್ಪಲಿ ಏಟು ಕೊಟ್ಟಿದ್ದಾರೆ.
ತನುಜಾ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳ ಗ್ರಾಮದವರು. ನಾಲ್ಕು ವರ್ಷಗಳ ಹಿಂದೆ ಅವರು ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆಯ ತಿಪ್ಪಘಟ್ಟ ಗ್ರಾಮದ ಕಾರ್ತಿಕ್ ನಾಯ್ಕ್ ಅವರೊಂದಿಗೆ ವಿವಾಹವಾದರು. ಆದರೆ, ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದರು ಎಂದು ಮೂಲಗಳು ತಿಳಿಸುತ್ತವೆ.
ಆದರೆ ಕಾರ್ತಿಕ್, ತಾನು ಈಗಲೂ ವೈವಾಹಿಕ ಸಂಬಂಧದಲ್ಲಿದ್ದರೂ, ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದರು. ಈ ಸುದ್ದಿ ತಿಳಿದ ತನುಜಾ, ತಕ್ಷಣವೇ ತನ್ನ ಕುಟುಂಬದೊಂದಿಗೆ ಮಂಟಪಕ್ಕೆ ಬಂದಿದ್ದಾರೆ.
ಮದುವೆ ಮಂಟಪದ ವೇದಿಕೆಯಲ್ಲಿ ನಿಂತಿದ್ದ ಕಾರ್ತಿಕ್ಗೆ ಮಂಟಪದಲ್ಲೇ ಸಾರ್ವಜನಿಕವಾಗಿ ಚಪ್ಪಲಿ ಏಟು ಕೊಟ್ಟಿದ್ದಾರೆ. ಆ ವೇಳೆ ಅಲ್ಲಿ ಇದ್ದ ಎಲ್ಲಾ ಅತಿಥಿಗಳು ಹಾಗೂ 2ನೇ ವಧುವಿನ ಕಡೆಯವರು ಕಂಗಾಲಾಗಿದ್ದಾರೆ.
ತನುಜಾ ಅವರು ಈ ಕೃತ್ಯವನ್ನು ಮಹಿಳೆಯ ಹಕ್ಕಿಗಾಗಿ ನಡೆಸಿದ ಧೈರ್ಯಶಾಲಿ ಕ್ರಮವೆಂದು ಹಲವು ಜನರು ಶ್ಲಾಘಿಸಿದ್ದಾರೆ. ತನ್ನ ವೈವಾಹಿಕ ಹಕ್ಕುಗಳನ್ನು ಉಳಿಸಿಕೊಳ್ಳಲು, ಹಾಗೂ ಸಾಮಾಜಿಕ ಅನ್ಯಾಯವನ್ನು ತಡೆಗಟ್ಟಲು ತನುಜಾ ತೋರಿದ ತೀವ್ರ ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.
ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ತಿಕ್ ವಿರುದ್ಧ ತನುಜಾ ಹಾಗೂ ಅವರ ಕುಟುಂಬಸ್ಥರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 2ನೇ ಮದುವೆ ವಿರುದ್ಧ ಕಾನೂನು ಕ್ರಮ ಜರುಗುವ ಸಾಧ್ಯತೆ ಇದೆ.