ಬಿಸಿಯೂಟದ ಕ್ಯೂನಲ್ಲಿ ನಿಂತಿದ್ದಾಗ ದುರಂತ : ಬಾಗಿಲಿಗೆ ಸಿಲುಕಿ ಬಾಲಕಿಯ 2 ಕೈ ಬೆರಳು ಕಟ್ !

Spread the love

ತುಮಕೂರು : ಜಿಲ್ಲೆಯ ತುಮಕೂರು ತಾಲೂಕಿನ ಗೋಳೂರು ಸರ್ಕಾರಿ ಶಾಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಕ್ಯೂ ನಿಂತಿದ್ದಾಗ ಶಾಲೆಯ ಬಾಗಿಲಿಗೆ ಸಿಲುಕಿ 1ನೇ ತರಗತಿಯ ಬಾಲಕಿಯ ಎರಡು ಕೈ ಬೆರಳುಗಳು ತುಂಡಾಗಿದೆ.

ಘಟನೆಯ ವಿವರ :-

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಸಮಯವಾಗಿತ್ತು. ಈ ವೇಳೆ ಚಿನ್ಮಯಿದೇವಿ ಎಂಬ ಪುಟ್ಟ ಬಾಲಕಿ ಇತರ ವಿದ್ಯಾರ್ಥಿಗಳಂತೆ ಊಟಕ್ಕಾಗಿ ಸರತಿಯ ಸಾಲಿನಲ್ಲಿ (ಕ್ಯೂ) ನಿಂತಿದ್ದಳು. ಈ ಸಂದರ್ಭದಲ್ಲಿ ಬಾಲಕಿ ಆಕಸ್ಮಿಕವಾಗಿ ಶಾಲೆಯ ಬಾಗಿಲಿಗೆ ಕೈ ಇಟ್ಟುಕೊಂಡು ನಿಂತಿದ್ದಳು ಎನ್ನಲಾಗಿದೆ.

ಅದೇ ಸಮಯದಲ್ಲಿ 3 ನೇ ತರಗತಿಯ ವಿದ್ಯಾರ್ಥಿ ಅಕಸ್ಮಾತ್ ಆಗಿ ಬಾಗಿಲನ್ನು ಜೋರಾಗಿ ತಳ್ಳಿದ ಪರಿಣಾಮ, ಬಾಗಿಲಿನ ಸಂದಿಯಲ್ಲಿ ಸಿಲುಕಿ ಬಾಲಕಿಯ ಎರಡು ಬೆರಳುಗಳು ತೀವ್ರವಾಗಿ ಜಖಂಗೊಂಡು ಕತ್ತರಿಸಿವೆ.

ಶಾಲಾ ಸಿಬ್ಬಂದಿ ಮೇಲೆ ಪೋಷಕರ ಆಕ್ರೋಶ

WhatsApp Group Join Now

ಘಟನೆ ನಡೆದ ತಕ್ಷಣ ಗಾಬರಿಗೊಂಡ ಶಾಲಾ ಸಿಬ್ಬಂದಿ, ಸರಿಯಾದ ಪ್ರಥಮ ಚಿಕಿತ್ಸೆ ಅಥವಾ ತುರ್ತು ಆಸ್ಪತ್ರೆಗೆ ದಾಖಲಿಸುವ ಬದಲು, ಪೋಷಕರಿಗೆ ಕರೆ ಮಾಡಿ ಮಗುವನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಶಾಲೆಗೆ ಕಳುಹಿಸಿದ ಮಗು ಸುರಕ್ಷಿತವಾಗಿ ಇರಬೇಕಿತ್ತು, ಆದರೆ ಶಾಲೆಯ ಅಸಡ್ಡೆಯಿಂದಾಗಿ ನಮ್ಮ ಮಗು ಬೆರಳು ಕಳೆದುಕೊಂಡಿದೆ” ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ತುಂಡಾಗಿ ಬಿದ್ದಿದ್ದ ಬೆರಳನ್ನು ಶಾಲೆಯ ಸಿಬ್ಬಂದಿಗಳು ಗುಡಿಸಿ ಬಿಸಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೆರಳುಗಳು ಇದ್ದಿದ್ರೆ ಜೋಡಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ.

ಬಾಲಕಿಯ ಕೈ ಬೆರಳುಗಳು ಕಟ್ ಆಗಲು ಶಾಲೆಯ ಬಾಗಿಲನ್ನು ಮತ್ತೊಬ್ಬ ವಿದ್ಯಾರ್ಥಿ ಜೋರಾಗಿ ತಳ್ಳಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಬಿಸಿಯೂಟದ ಸಮಯದಲ್ಲಿ ಶಿಕ್ಷಕರು ಅಥವಾ ಅಡುಗೆ ಸಿಬ್ಬಂದಿ ಸರಿಯಾದ ಉಸ್ತುವಾರಿ ವಹಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Spread the love

Leave a Reply