ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು

Spread the love

ಕಾಲುಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ನ ಭದ್ರಾ ನಾಲೆಯಲ್ಲಿ ನಡೆದಿದೆ. ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದ ದುರಂತ ಸಂಭವಿಸಿದೆ.

ನೀಲಾ ಬಾಯಿ(50), ಮಗ ರವಿ(23), ಮಗಳು ಶ್ವೇತಾ(24) ಮತ್ತು ಅಳಿಯ ಪರಶುರಾಮ(28) ಮೃತರು. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಡೆದದ್ದೇನು?

ಮಾರಿ ಹಬ್ಬಕ್ಕೆಂದು ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾರೆ. ಒಬ್ಬರು ಕಾಲು ಜಾರಿ ಭದ್ರಾ ನಾಲೆಗೆ ಬಿದ್ದಿದ್ದು, ಅವರನ್ನ ರಕ್ಷಿಸಲು ಹೋಗಿ ನಾಲ್ವರೂ ನೀರುಪಾಲಾಗಿದ್ದಾರೆ. ಮೃತರು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮಸ್ಥರು. ಸದ್ಯ ಶವಗಳಿಗಾಗಿ ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ನಡೆದಿದೆ.

ಪ್ರತ್ಯೇಕ ಘಟನೆ :- ಕಾರು ಮತ್ತು ಬೈಕ್ ಅಪಘಾತ: ಫೋಟೋಗ್ರಾಫರ್ ಸಾವು

ರಸ್ತೆ ಅಪಘಾತದಲ್ಲಿ ಫೋಟೋಗ್ರಾಫರ್ ದಾರುಣವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೊಪ್ಪಡ್ಲ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ‌ಮರಕಟ್ನಾಳ ಗ್ರಾಮದ ಲಕ್ಕಣ್ಣ ಬೂದಿಹಾಳ(34) ಮೃತ ಫೋಟೋಗ್ರಾಫರ್.

ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಲಕ್ಕಣ್ಣ ಬೂದಿಹಾಳ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯೇಕ ಘಟನೆ :- ಕ್ಯಾಂಟರ್ ಹರಿದು ಬೈಕ್ ಸವಾರ ಸಾವು

ಸ್ಕೀಡ್ ಆಗಿ ಬಿದ್ದ ಬೈಕ್ ಸವಾರನ ಮೇಲೆ ಕ್ಯಾಂಟರ್ ಹರಿದು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹಾರಗದ್ದೆ ಬಳಿ ನಡೆದಿದೆ. ರಾಜಾಜಿನಗರದ ದಿಲೀಪ್(21) ಮೃತ ಯುವಕ. ಜನವರಿ 12ರಂದು ಅಪಘಾತ ಸಂಭವಿಸಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಂಟರ್ ವಾಹನವನ್ನ ಓವರ್ ಟೇಕ್ ಮಾಡುವಾಗ ರಸ್ತೆ ಬದಿ ಇದ್ದ ಮಣ್ಣಿನಿಂದಾಗಿ ಬೈಕ್ ಸ್ಕೀಡ್ ಆಗಿ  ಅಪಘಾತ ಸಂಭವಿಸಿದೆ. ಗಂಭೀರ ಗಾಯವಾದ್ದರೂ ಒಂದು ಕ್ಷಣ ಎದ್ದು ನಿಂತ ಬೈಕ್ ಸವಾರ ಮತ್ತೆ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

WhatsApp Group Join Now

Spread the love

Leave a Reply