ಕಾಫಿತೋಟ ಮನೆ ಸೇರಿದಂತೆ ಬೇಕಾದಷ್ಟು ಆಸ್ತಿ ಮಾಡಿಟ್ಟರು ಮಕ್ಕಳಿಂದ ಸಿಗದ ಪ್ರೀತಿ : ವೃದ್ಧಾಶ್ರಮದಿಂದ ಬಂದು ಸಾವಿಗೆ ಶರಣಾದ ದಂಪತಿ

Spread the love

ಮಕ್ಕಳಿಗಾಗಿ ಕಾಫಿತೋಟ ಮನೆ ಸೇರಿದಂತೆ ಬೇಕಾದಷ್ಟು ಆಸ್ತಿ ಮಾಡಿಟ್ಟರು ಮಕ್ಕಳು ತಮ್ಮನ್ನು ಸರಿಯಾಗಿ ನೋಡುತ್ತಿಲ್ಲ ಎಂದು ಮಾನಸಿಕ ಖಿನ್ನತೆಗೊಳಗಾಗಿ ವೃದ್ಧ ದಂಪತಿ ಸಾವಿಗೆ ಶರಣಾದ ಘಟನೆ ಹಾಸನದಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ. ಮಕ್ಕಳ ನಿರ್ಲಕ್ಷ್ಯದ ಕಾರಣದಿಂದ ವೃದ್ಧದಂಪತಿ ವೃದ್ಧಾಶ್ರಮವನ್ನು ಸೇರಿದ್ದರು.

ಆದರೆ ಅಲ್ಲೂ ಅವರಿಗೆ ನೆಮ್ಮದಿ ಸಿಗದೇ ಅಲ್ಲಿಂದ ಹೊರಟು ಬಂದು ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಅರೇ ಹೊಸೂರು ಗ್ರಾಮದ 80 ವರ್ಷದ ಡೇನಿಯಲ್ ಹಾಗೂ 73 ವರ್ಷದ ಮೇರಿ ಎಂದು ಗುರುತಿಸಲಾಗಿದೆ. ಇವರು ಹಾಸನದ ಕರಿಗೌಡ ಕಾಲೋನಿಯಲ್ಲಿ ರೈಲು ಹಳಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಈ ದಂಪತಿಗೆ ನೆಲ್ಸನ್ ಹಾಗೂ ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳಿಗಾಗಿ ಮನೆ ಕಾಫಿ ತೋಟ ಸೇರಿದಂತೆ ಚೆನ್ನಾಗಿ ಆಸ್ತಿ ಮಾಡಿದ್ದು, ಸ್ಥಿತಿವಂತರಾಗಿದ್ದರು. ಆದರೆ ವೃದ್ಧಾಪ್ಯದಲ್ಲಿ ಮಕ್ಕಳು ತಮ್ಮನ್ನು ಚೆನ್ನಾಗಿ ಮಾತನಾಡಿಸುತ್ತಿಲ್ಲ, ತಮ್ಮ ಕಷ್ಟ ಸುಖ ವಿಚಾರಿಸುತ್ತಿಲ್ಲ ಎಂದು ಮನನೊಂದ ದಂಪತಿ ಈ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ.

ಆಸ್ತಿಯ ಜೊತೆ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಪೋಷಕರು ನೀಡಿದ್ದರು. ಆದರೆ ಶಿಕ್ಷಣ ಸಂಸ್ಕಾರ ಕಲಿಸುವುದಿಲ್ಲ ಎಂಬುದು ನಿಜವಾಗಿದೆ., ಇಬ್ಬರು ಗಂಡು ಮಕ್ಕಳಿಗೂ ತುಂಬಾ ಚೆನ್ನಾಗಿ ಮದುವೆಯನ್ನು ಮಾಡಿದ್ದರು. ಆದರೆ ವಯಸ್ಸಾದ ಕಾಲದಲ್ಲಿ ಮಕ್ಕಳ ನಿರ್ಲಕ್ಷ್ಯ ಅವರನ್ನು ಈ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ.

ಕೆಲವು ದಿನಗಳ ಹಿಂದಷ್ಟೇ ಅವರು ಕೊಡಗಿನ ವಿರಾಜಪೇಟೆಯ ವೃದ್ಧಾಶ್ರಮಕ್ಕೆ ಸೇರಿದ್ದರು. ಆದರೆ ಶನಿವಾರ ರಾತ್ರಿ ಅಲ್ಲಿಂದ ಹೊರಟು ಬಂದ ದಂಪತಿ ಹಾಸನಕ್ಕೆ ಬಂದು ಅಲ್ಲಿ ಕರಿಗೌಡ ಕಾಲೋನಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಘಟನೆಯ ಬಳಿಕ ಅವರ ಗಂಡು ಮಕ್ಕಳು ಶವವನ್ನು ನಿರಾಕರಿಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ನಂತರ ಪೊಲೀಸರು ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಮೃತದೇಹಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

WhatsApp Group Join Now

Spread the love

Leave a Reply