“ಯಾರು ಏನೇ ಹೇಳಲಿ, ಜೂ.12ರಂದು ನಡೆಯುವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕರಿಸುವುದು ಶತಃಸಿದ್ಧ’….! ಹೀಗೆಂದು ಸಿಎಂ ಸಿದ್ದರಾಮಯ್ಯ ಜೂ.6ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಖಡಾಖಂಡಿತವಾಗಿ ಪ್ರಕಟಿಸಿದ್ದು, ಇದು ಅವರ ಸಂಪುಟ ಸಹೋದ್ಯೋಗಿಗಳ ಜಂಘಾಬಲವನ್ನೇ ಉಡುಗಿಸಿತ್ತು.
ಅಂದು ಸಿದ್ದರಾಮಯ್ಯ ತೋರಿದ ಹಠ, ವರದಿ ಸ್ವೀಕಾರಕ್ಕೆ ಪ್ರಕಟಿಸಿದ ಮುಹೂರ್ತ, ಕಾಲ್ತುಳಿತ ಪ್ರಕರಣದಲ್ಲಿ ಆದ ಹಿನ್ನಡೆ ಸೃಷ್ಟಿಸಿದ ರೋಶ, ಅವರು ಇಂಥದ್ದೊಂದು ನಿರ್ಧಾರದಿಂದ ಹಿಂದೆ ಸರಿಯುವುದು ಸಾಧ್ಯವೇ ಇಲ್ಲ ಎಂಬ ಸನ್ನಿವೇಶ ಸೃಷ್ಟಿಸಿತ್ತು. ಆದರೆ ಅದೇ ದಿನ ಪ್ರಯೋಗವಾದ ಕಾಂಗ್ರೆಸ್ನ ಅಸಲಿ ರಾಜಕೀಯ ಪಟ್ಟು ಹೈಕಮಾಂಡ್ನ ತುರ್ತು ಮಧ್ಯ ಪ್ರವೇಶಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯನವರ ದೀರ್ಘ ಕಾಲದ “ಕನಸಿನ ಯೋಜನೆ’ಗೆ ಅವರ ರಾಜಕೀಯ ಸಂಧ್ಯಾ ಕಾಲದಲ್ಲಿ ಸೋಲು ಕಾಣುವಂತೆ ಮಾಡಿತು.
ಉನ್ನತ ಮೂಲಗಳಿಂದ ಲಭ್ಯವಾದ ಮಾಹಿತಿ ಪ್ರಕಾರ, ಕಾಲ್ತುಳಿತದುರಂತದ ಬಳಿಕ ಜೂ.6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತುಸು ವ್ಯಘ್ರಗೊಂಡಿದ್ದರು. ಜಾತಿಗಣತಿ ವಿಷಯದಲ್ಲಿ ಒಂದು ಅಂತಿಮ ನಿರ್ಣಯಕ್ಕೆ ಬರುವುದಕ್ಕೆ ಇನ್ನೆಷ್ಟು ದಿನ ಬೇಕು? ಇದು ನಮ್ಮ ಸರಕಾರದ ಆದ್ಯತೆ ಹಾಗೂ ಬದ್ಧತೆಯ ಪ್ರಶ್ನೆ. ಹೀಗಾಗಿ ಮುಂದಿನ ಸಂಪುಟ ಸಭೆಯಲ್ಲಿ ಈ ವರದಿಯನ್ನು ಅಂಗೀಕರಿಸುವುದು ಖಚಿತ. ಯಾರು ಏನೇ ಹೇಳಲಿ, ಎಷ್ಟೇ ವಿರೋಧಿಸಿದರೂ ವರದಿ ಅಂಗೀಕರಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದರು.
ಹಿರಿಯ ಸಂಪುಟ ಸಹೋದ್ಯೋಗಿಯೊಬ್ಬರ ಪ್ರಕಾರ, ಜಾತಿಗಣತಿ ವಿಷಯದಲ್ಲಿ ಸಿದ್ದರಾಮಯ್ಯನವರು ಸಂಪುಟ ಸಭೆಯಲ್ಲಿ ಇಷ್ಟೊಂದು ಪಕ್ಕಾ ಹಾಗೂ ನಿರ್ಧಾರಾತ್ಮಕ ಪ್ರತಿಪಾದನೆಯನ್ನು ಎಂದೂ ಪ್ರಕಟಿಸಿರಲಿಲ್ಲ. ಸಂಪೂರ್ಣ ಸಹಮತಿಯನ್ನೇ ಅವರು ಬಯಸುತ್ತಿದ್ದರು. ಆದರೆ ಯಾವಾಗ ತಮ್ಮ ಹಠ ಹಾಗೂ ನಿಲುವನ್ನು ದೃಢವಾಗಿ ಪ್ರತಿಪಾದಿಸಿದರೋ ಆಗ ಉಳಿದವರು ಎಚ್ಚೆತ್ತುಕೊಂಡರು. ಅದೇ ದಿನ ರಾತ್ರಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಸಚಿವರು ಈ ವಿಚಾರವನ್ನು ಹೈಕಮಾಂಡ್ ಅಂಗಳಕ್ಕೆ ತಲುಪಿಸಿಬಿಟ್ಟಿದ್ದರು.
ಕಾಲ್ತುಳಿತ ಪ್ರಕರಣವೂ ಸಹಿತ ಸಿದ್ದರಾಮಯ್ಯನವರ ಇತ್ತೀಚೆಗಿನ ಕೆಲವು ನಿಲುವುಗಳ ಬಗ್ಗೆ ತುಸು ಬೇಸರ ಹೊಂದಿದ್ದ ಹೈಕಮಾಂಡ್, ಈ ನಿರ್ಧಾರದ ಬೆನ್ನಲ್ಲೇ ಹೈದರಾಬಾದ್ ಮೂಲದ ಸಂಸ್ಥೆಯಿಂದ ಜಾತಿಗಣತಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ತಯಾರಿಸಿದ್ದ ವರದಿಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿತ್ತು. ಖುದ್ದು ರಾಹುಲ್ ಗಾಂಧಿಯವರೇ ಸಮೀಕ್ಷಾ ವರದಿಯ ದತ್ತಾಂಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಜ್ಯದ ಹಿರಿಯ ಸಚಿವರಿಗೆ ದೂರವಾಣಿ ಕರೆ ಮಾಡಿ ಜಾತಿಗಣತಿ ವಿಷಯದಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದರು. ಇದರ ಸಾಧ್ಯಾಸಾಧ್ಯತೆಗಳೇನು? ಪ್ರಬಲ ಸಮುದಾಯದ ಪ್ರತಿಕ್ರಿಯೆ ಹೇಗಿರಬಹುದು? ತೆಲಂಗಾಣದ ರಾಜಕೀಯ ಸ್ಥಿತಿಗತಿಗೂ ಇಲ್ಲಿಗೂ ಇರುವ ವ್ಯತ್ಯಾಸಗಳೇನೆಂಬ ಬಗ್ಗೆ ಮಾಹಿತಿ ಪಡೆದಿದ್ದರು. ವಿಶೇಷವಾಗಿ ಈ ಸಮೀಕ್ಷೆಯ ದತ್ತಾಂಶ ಆಧರಿಸಿ ಪ್ರವರ್ಗ ಪರಿಷ್ಕರಣೆಗೆ ಕೈ ಹಾಕಿದ್ದರ ಬಗ್ಗೆ ಹಿಂದುಳಿದ ವರ್ಗದ ಸಚಿವರಿಂದಲೂ ಅಸಮಾಧಾನ ವ್ಯಕ್ತವಾಗಿತ್ತು. ಅಂತಿಮವಾಗಿ ಈ ವಿಷಯದಲ್ಲಿ ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಂತಿದ್ದು, ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಖಾನ್, ಡಾ| ಎಚ್.ಸಿ.ಮಹದೇವಪ್ಪ ಹಾಗೂ ಭೈರತಿ ಸುರೇಶ್ ಮಾತ್ರ ಎಂದು ಹೇಳಲಾಗುತ್ತಿದೆ.
ಪತ್ರಕ್ಕಾಗಿ ಡಿಕೆಗೆ ಒತ್ತಡ
ಮೂಲಗಳ ಪ್ರಕಾರ ಡಿ.ಕೆ. ಶಿವಕುಮಾರ್ ಅವರು ಕೊನೆಯ ಹಂತದವರೆಗೂ ತಮ್ಮ ಅಭಿಪ್ರಾಯವನ್ನು ಲಿಖೀತವಾಗಿ ಸಲ್ಲಿಸಿರಲಿಲ್ಲ. ತಮ್ಮ ನಿಲುವನ್ನು ಸಂಪುಟ ಸಭೆಯಲ್ಲೇ ಪ್ರಕಟಿಸಿದ್ದೇನೆ ಎಂದು ಅವರು ಗಟ್ಟಿಯಾಗಿ ಹೇಳಿದ್ದರು. ಆದರೆ ಸಿದ್ದರಾಮಯ್ಯ ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಪ್ರತಿಯೊಬ್ಬರಿಂದಲೂ ಲಿಖಿತ ಅಭಿಪ್ರಾಯ ಸಂಗ್ರಹಿಸುವ ನಿರ್ಣಯ ತೆಗೆದುಕೊಂಡಿದ್ದೇವೆ. ಅದನ್ನು ಮಾಧ್ಯಮದ ಮುಂದೆಯೂ ಪ್ರಕಟಿಸಲಾಗಿದೆ. ಹೀಗಾಗಿ ಅಭಿ ಪ್ರಾಯ ಸಲ್ಲಿಸುವುದು ಕಡ್ಡಾಯ ಎಂದು ನಿರ್ದೇಶಿಸಿದ್ದರು. ಹೀಗಾಗಿ ಅನಿವಾರ್ಯವಾಗಿ ಶಿವಕುಮಾರ್ ಕೂಡ ತಮ್ಮ ಲಿಖೀತ ಅಭಿಪ್ರಾಯವನ್ನು ಸಂಪುಟ ಸಭೆಗೆ ಮಂಡಿಸಿದ್ದರು ಎಂದು ತಿಳಿದು ಬಂದಿದೆ.
ಲಿಂಗಾಯತ ಸಚಿವರ ಕ್ರೋಢೀಕೃತ ಅಭಿಪ್ರಾಯ ತಿರಸ್ಕಾರ
ಜಾತಿಗಣತಿ ಅಂಗೀಕಾರ ವಿಷಯಕ್ಕೆ ಸಂಬಂಧಿಸಿ ಕರೆದ ಮೊದಲ ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೂ ಪ್ರತ್ಯೇಕವಾಗಿ ತಮ್ಮ ಅಭಿಪ್ರಾಯವನ್ನು ಲಿಖೀತವಾಗಿ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ ಸಚಿವರು ಇದಕ್ಕೆ ತಾತ್ವಿಕ ಸಮ್ಮತಿ ಸೂಚಿಸಿರಲಿಲ್ಲ. ವಿಶೇಷವಾಗಿ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಸಚಿವರು ತಮ್ಮೆಲ್ಲರ ಅಭಿಪ್ರಾಯಗಳು ಒಂದೇ ಎಂದು ಮನವಿ ಪತ್ರದ ರೀತಿ ಸಿಎಂಗೆ ಸಲ್ಲಿಸಿದ್ದರು. ಆದರೆ ಇದಕ್ಕೆ ಸಮ್ಮತಿಸದ ಸಿದ್ದರಾಮಯ್ಯ ಪ್ರತ್ಯೇಕವಾಗಿ ನಿಮ್ಮ ಅಭಿಪ್ರಾಯ ಸಲ್ಲಿಸಿ ಎಂದು ನಿರ್ದೇಶನ ನೀಡಿದ್ದರು. ಇದು ಕೆಲವರ ಬೇಸರಕ್ಕೆ ಕಾರಣವಾಗಿತ್ತು.
ಸಿಎಂ ಪಾಳಯದ ಸಚಿವರೇ ಹೈಕಮಾಂಡ್ಗೆ ವಿವರಿಸಿದ್ದು
ವಿಶೇಷವೆಂದರೆ ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿಯೂ ಅಭಿಮಾನಿ ಹೊಂದಿದ್ದ ಇಬ್ಬರು ಸಚಿವರು ಈ ನಿರ್ಣಾಯಕ ಕ್ಷಣದಲ್ಲಿ “ಜಾತಿಗಣತಿ ಅಂಗೀಕಾರ ಯಾಕೆ ಬೇಡ?’ ಎಂಬ ಬಗ್ಗೆ ಹೈಕಮಾಂಡ್ಗೆ ಮನದಟ್ಟು ಮಾಡಿದ್ದರು. ಈ ಪೈಕಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಚಿವ ರೊಬ್ಬರನ್ನು ಮೂರು ದಿನ ಮೊದಲೇ ಹೈಕಮಾಂಡ್ ದಿಲ್ಲಿಗೆ ಕರೆಸಿಕೊಂಡಿತ್ತು. ಅಂಕಿಅಂಶಗಳು, ಪ್ರವರ್ಗ ವರ್ಗೀಕರಣ, ಹಳೆ ದತ್ತಾಂಶ ಹಾಗೂ ವಿಶ್ಲೇಷಣಾ ವರದಿಯ ದೋಷಗಳ ಬಗ್ಗೆ ಅವರು ವಿವರಿಸಿದ್ದರು. ಜತೆಗೆ ಈ ವರದಿಯನ್ನು ಒಪ್ಪಿಕೊಳ್ಳುವುದರಿಂದ ಆಗುವ ಚುನಾವಣ ಪರಿಣಾಮಗಳ ಬಗ್ಗೆಯೂ ಎಚ್ಚರಿಸಿದ್ದರು. ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದ ಲಿಂಗಾಯತ ಸಚಿವರೊಬ್ಬರು ಹೈಕಮಾಂಡ್ಗೆ ಕೊಟ್ಟ ವರದಿ “ಬೃಹತ್’ ಪ್ರಮಾಣದಲ್ಲಿ ಕೆಲಸ ಮಾಡಿದೆ.

ಜಾತಿಗಣತಿ : ಸಿಎಂ ನಿರ್ಧಾರಕ್ಕೆ ಬಲೆ ಹಣೆದ ಹೈಕಮಾಂಡ್ ; ಸ್ವತಃ ರಾಹುಲ್ ಗಾಂಧಿ ಕೂಡ ಅತೃಪ್ತಿ
WhatsApp Group
Join Now