ರಾಯಲ್ ಚಾಲೆಂಜಸ್ ಬೆಂಗಳೂರು ತಂಡ ತನ್ನ 18 ವರ್ಷಗಳ ಪ್ರಶಸ್ತಿ ಬರ ನೀಗಲು ಈ ವರ್ಷ ಇನ್ನೊಂದೇ ಹೆಜ್ಜೆ ಏರಬೇಕಿದೆ. ಸದ್ಯ ಆರ್ಸಿಬಿ ಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದ್ದು, ಅಭಿಮಾನಿಗಳು ಈ ಬಾರಿ ಕಪ್ ನಮ್ದೇ ಎಂಬ ವಿಶ್ವಾಸದಲ್ಲಿದ್ದಾರೆ. ಸದ್ಯ ಆಟಗಾರರು ಜೂನ್ 3ರಂದು ನಡೆಯು ಐತಿಹಾಸಿಕ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ವಿಶ್ವದಾದ್ಯಂತ ಇರುವ ಅಸಂಖ್ಯಾತ ಅಭಿಮಾನಿಗಳು ರಜತ್ ಪಾಟೀದಾರ್ ಬಳಗದ ಯಶಸ್ಸಿಗೆ ಹಾರೈಸುತ್ತಿದ್ದಾರೆ.
ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಸೇರಿ ಹಲವರು ಆರ್ಸಿಬಿ ತಂಡಕ್ಕೆ ಶುಭ ಹಾರೈಸುತ್ತಿದ್ದಾರೆ. ಈ ಮಧ್ಯೆ ಮೈಸೂರಿನಲ್ಲಿ ಮಾತನಾಡುತ್ತಾ, ಎಂಎಲ್ಸಿ ಸಿ.ಟಿ.ರವಿ ಆರ್ಸಿಬಿ ತಂಡಕ್ಕೆ ಹಾರೈಸಲು ಹಿಂದೇಟು ಹಾಕಿದ್ದಾರೆ. ‘ಈ ಹಿಂದೆ ಕ್ರಿಕೆಟ್ ಮ್ಯಾಚ್ಗಳು ನಡೆಯುತ್ತಿದ್ದವು. ರಣಜಿ ಮೇಲೆ ಪ್ರಾದೇಶಿಕ ಪ್ರೀತಿ ಇತ್ತು. ಆದರೆ ಐಪಿಎಲ್ನಿಂದ ರಾಷ್ಟ್ರೀಯತೆ ಬರುವುದಿಲ್ಲ. ಈ ಕ್ರಿಕೆಟ್ ದುಡ್ಡಿಗಾಗಿ ನಡೆಯುತ್ತದೆ. ಇಂದು ಆರ್ಸಿಬಿ ತಂಡದಲ್ಲಿ ಇರುವ ಆಟಗಾರ, ದುಡ್ಡು ಕೊಟ್ರೆ ನಾಳೆ ಜೆಸಿಬಿ ಕಡೆ ಹೋಗುತ್ತಾನೆ. ಇದೆಲ್ಲಾ ದುಡ್ಡಿಗಾಗಿ ನಡೆಯೋದು. ಎಷ್ಟು ಜನ ಕನ್ನಡಿಗರು ಆರ್ಸಿಬಿ ತಂಡದಲ್ಲಿ ಇದ್ದಾರೆ ಹೇಳಿ?ʼ ಎಂದು ಪ್ರಶ್ನಿಸಿದ್ದಾರೆ.
ಆರ್ಸಿಬಿ ಗೆದ್ದರೆ ನಮಗೆ ಕಿರೀಟ ಸಿಕ್ಕಂತೆ!
‘ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಚೊಚ್ಚಲ ಕಪ್ ಗೆಲ್ಲಬೇಕು ಎಂಬುದು ಸಮಗ್ರ ಕನ್ನಡಿಗರ ಆಶಯ ಆಗಿದೆ. ಈ ಬಾರಿ ಆರ್ಸಿಬಿ ಕಪ್ ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆʼ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಫೈನಲ್ಗೆ ಆರ್ಸಿಬಿ ಮಿಂಚಿನ ಓಟ
ಆರ್ಸಿಬಿ ತಂಡ ಐಪಿಎಲ್ನಲ್ಲಿ 4ನೇ ಬಾರಿ ಫೈನಲ್ಗೇರಿದ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2009, 2011 ಮತ್ತು 2016ರಲ್ಲಿಯೂ ಪ್ರಶಸ್ತಿ ಸುತ್ತಿಗೇರಿತ್ತು. ಅದರೆ ಮೂರು ಬಾರಿಯೂ ರನ್ನರ್ ಅಪ್ಗೆ ತೃಪ್ತಿಪಟ್ಟಿತು. ಸದ್ಯ ಹಾಲಿ ಆವೃತ್ತಿಯಲ್ಲಿ ಆರಂಭದಿಂದಲೂ ಸಂಘಟಿತ ಪ್ರದರ್ಶನ ನೀಡುತ್ತಾ ಬಂದಿರುವ ಆರ್ಸಿಬಿ, ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.
ಈ ಸಲ ಕಪ್ ನಮ್ದೇ!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗುತ್ತಿವೆ. ಈ ನಿರ್ಣಾಯಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ಭವಿಷ್ಯ ನುಡಿದಿದ್ದಾರೆ. ಸದ್ಯ ಉಭಯ ತಂಡಗಳು ಚೊಚ್ಚಲ ಟ್ರೋಫಿಯನ್ನು ಎದುರು ನೋಡುತ್ತಿದ್ದು, ಅಭಿಮಾನಿಗಳ ಕಾತರತೆ ಹೆಚ್ಚಿದೆ. ಒಂದು ವೇಳೆ ಎಲ್ಲರ ನಿರೀಕ್ಷೆಯಂತೆ ಆರ್ಸಿಬಿ ಕಪ್ ಗೆದ್ದಿದ್ದೇ ಆದಲ್ಲಿ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳ ಪಾಲಿಗೆ ಜೂನ್ 3 ಐತಿಹಾಸಿಕ ದಿನ ಆಗುವುದಂತು ಖಚಿತ!

ದುಡ್ಡು ಕೊಟ್ರೇ RCB ಆಟಗಾರ ನಾಳೆ JCB ಕಡೆ ಹೋಗ್ತಾನೆ! ವ್ಯಂಗ್ಯವಾಡಿದ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ
WhatsApp Group
Join Now