ಪೊಲೀಸರಿಗೆ ಹೆದರಿ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ, ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘೋರ ಘಟನೆ ಕುಶಾಲನಗರದ ಕೂಡು ಮಂಗಳೂರು ಗ್ರಾಮದ ಬಳಿ ನಡೆದಿದೆ.
ಘಟನೆಯ ವಿವರ
ಕೊಡಗು ಜಿಲ್ಲೆಯ ಮರೂರು ಗ್ರಾಮದ ನಿವಾಸಿ ನಟೇಶ್ (31) ಮೃತಪಟ್ಟ ದುರ್ದೈವಿ. ಇವರು ತಮ್ಮ ಪತ್ನಿ ದಿವ್ಯಾ (30) ಅವರೊಂದಿಗೆ ಬೈಕ್ನಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದರು.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಮೀಪದ ರಸ್ತೆಯಲ್ಲಿ ಪೊಲೀಸರು ನಿಂತಿರುವುದನ್ನು ಕಂಡು ನಟೇಶ್ ಗಾಬರಿಗೊಂಡಿದ್ದಾರೆ.
ಬೈಕ್ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ, ಎಲ್ಲಿ ಪೊಲೀಸರು ಹಿಡಿಯುತ್ತಾರೋ ಎಂಬ ಭಯದಿಂದ ನಟೇಶ್ ಅವರು ಏಕಾಏಕಿ ಮುಖ್ಯ ರಸ್ತೆಯಲ್ಲೇ ಬೈಕನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಬೈಕ್’ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಹೃದಯವಿದ್ರಾವಕ ದೃಶ್ಯ
ಅಪಘಾತದ ತೀವ್ರತೆಗೆ ನಟೇಶ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪತ್ನಿ ದಿವ್ಯಾ ಅವರ ಎರಡೂ ಕಾಲುಗಳು ಕಟ್ ಆಗಿದ್ದು, ಅವರನ್ನು ತಕ್ಷಣವೇ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಸ್ಪತ್ರೆಯ ಬೆಡ್ ಮೇಲೆ ಮಲಗಿಯೇ ದಿವ್ಯಾ ಅವರು ತನ್ನ ಪತಿಯ ಶವದ ಅಂತಿಮ ದರ್ಶನ ಪಡೆದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ಪತಿಯನ್ನು ಕಳೆದುಕೊಂಡ ದಿವ್ಯಾ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಪೊಲೀಸರು ಅಲ್ಲಿ ವಾಹನ ತಪಾಸಣೆಗಾಗಿ ನಿಂತಿದ್ದರೋ ಅಥವಾ ಸಹಜವಾಗಿ ನಿಂತಿದ್ದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪೊಲೀಸರನ್ನು ಕಂಡ ಕೂಡಲೇ ಸವಾರ ಗಾಬರಿಯಿಂದ ಬೈಕ್ ತಿರುಗಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಘೋರ ದುರಂತ : ಪೊಲೀಸರ ಭಯಕ್ಕೆ ಬೈಕ್ ತಿರುಗಿಸಿದ ಸವಾರ ಸಾವು, ಪತ್ನಿಯ 2 ಕಾಲುಗಳು ಕಟ್.!
WhatsApp Group
Join Now