ಕುದುರೆಮುಖ ಕಾಡಂಚಿನಲ್ಲಿ ಇಡೀ ಜೀವನವನ್ನು ಪ್ರಾಣಿಗಳಿಗಾಗಿ ಮೀಸಲಿಟ್ಟಿರುವ ಮೆಕ್ಯಾನಿಕ್ ಒಬ್ಬರು, ಸದ್ದಿಲ್ಲದೆ ಅವುಗಳೊಂದಿಗೆ ಸಹಜೀವನ ನಡೆಸುತ್ತಿದ್ದಾರೆ. ಇವರ ಪ್ರೀತಿ ಅರಸಿ ಕಾಡುಹಂದಿಯೂ ನಿತ್ಯ ಬರುವುದು ವಿಶೇಷ.
ಕುದುರೆಮುಖ ಎಂದರೆ ಥಟ್ಟನೆ ನೆನಪಿಗೆ ಬರುವುದು ಪಶ್ಚಿಮಘಟ್ಟಗಳ ಪರ್ವತಶ್ರೇಣಿ, ಅಲ್ಲಿದ್ದ ಅದಿರು ಕಂಪನಿ, ರಾಷ್ಟ್ರೀಯ ಉದ್ಯಾನ, ಗುಡ್ಡಗಳ ನಡುವೆ ಪ್ರಶಾಂತವಾಗಿ ಹರಿಯುವ ನದಿಗಳು.
ಅದಿರು ಕಂಪನಿ ಸ್ಥಗಿತಗೊಂಡ ಬಳಿಕ ಪಾಳುಬಿದ್ದಿರುವ ಕೇಂದ್ರೀಯ ವಿದ್ಯಾಲಯ, ಆಸ್ಪತ್ರೆ ಕಟ್ಟಡ, ನೆಹರೂ ಪ್ರತಿಮೆಗಳು, ಟೌನ್ಶಿಪ್ ಇದ್ದ ವೈಭವದ ಕುರುಹುಗಳನ್ನು ಹೇಳುತ್ತವೆ. ಅಳಿದುಳಿದಿರುವ ಈಗಿನ ಕುದುರೆಮುಖದಲ್ಲಿ ರೂಬೆನ್ ಎಂಬ ವ್ಯಕ್ತಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದಾರೆ.
ಆಗೊಮ್ಮೆ ಈಗೊಮ್ಮೆ ರಿಪೇರಿಗೆ ಬರುವ ಬೈಕ್ಗಳು ರೂಬೆನ್ಗೆ ಜೀವನಾಧಾರ. ತನ್ನ ದುಡಿಮೆ ಯಲ್ಲಿ ತನ್ನ ಹೊಟ್ಟೆಯನ್ನಷ್ಟೇ ಅಲ್ಲದೆ, ಅಲ್ಲಿರುವ ಪ್ರಾಣಿಗಳಿಗೂ ಇವರು ಆಶ್ರಯದಾತರು. ರೂಬೆನ್ ಮನೆಯಲ್ಲಿರುವ ನಾಯಿ ಮತ್ತು ಬೆಕ್ಕುಗಳಿಗೆ ಲೆಕ್ಕವಿಲ್ಲ. ಇವರ ಪ್ರಾಣಿಪ್ರೀತಿ ಎಷ್ಟಿದೆ ಎಂದರೆ ಕಾಡಿನಿಂದ ಪ್ರಾಣಿಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಊಟದ ಸಮಯಕ್ಕೆ ಸರಿಯಾಗಿ ಬರುವ ಕಾಡು ಹಂದಿಯೊಂದು ರೂಬೆನ್ ಅವರ ಮನೆಯ ಮಗನಂತಾಗಿದೆ.
ಕುದುರೆಮುಖ ಅದಿರು ಕಂಪನಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ರೂಬೆನ್ ಅವರ ಸಂಬಂಧಿ ಯೊಬ್ಬರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಬೈನಲ್ಲಿ ಮೆಕ್ಯಾನಿಕ್ ಆಗಿದ್ದ ರೂಬೆನ್ 1979ರಲ್ಲಿ ಕುದುರೆಮುಖಕ್ಕೆ ಬಂದು, ಇಲ್ಲಿ ಮೆಕ್ಯಾನಿಕ್ ಕೆಲಸ ಮುಂದುವರಿಸಿದರು. ದುಡಿದ ಹಣದಲ್ಲಿ ತಮ್ಮ ಜೀವನದ ಜತೆಗೆ ಬೀದಿ ನಾಯಿಗಳು, ಬೆಕ್ಕುಗಳಿಗೆ ಅನ್ನ ಹಾಕುವುದನ್ನು ಅಭ್ಯಾಸ ಮಾಡಿಕೊಂಡರು. ಅಂದಿನಿಂದ ಇಂದಿನವರೆಗೆ ಆ ಕೆಲಸ ಮುಂದುವರಿಸಿದ್ದಾರೆ. ತಾನು ಸಸ್ಯಹಾರಿಯಾದರೂ ಬೆಕ್ಕು ಮತ್ತು ನಾಯಿಗಳಿಗಾಗಿ ಮೀನು ಮತ್ತು ಮಾಂಸ ತರಿಸಿ ಉಣಬಡಿಸುತ್ತಾರೆ.
ಕಂಪನಿ ಮುಚ್ಚಿದ ನಂತರ ಕಾರ್ಮಿಕರ ಕ್ಯಾಂಪ್ಗಳು ಕಾಡಾಗಿ ಪರಿವರ್ತನೆಗೊಂಡವು. ರಸ್ತೆ ಬದಿಯ ಒಂದು ಕ್ಯಾಂಪ್ ಇದ್ದ ಜಾಗದಲ್ಲಿ ರೂಬೆನ್ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ರೂಬೆನ್ ಜತೆಗೆ ನಾಯಿ, ಬೆಕ್ಕುಗಳೂ ವಾಸಿಸುತ್ತಿವೆ. ನಾಯಿ ಬೆಕ್ಕುಗಳು ತಿಂದು ಉಳಿಸಿದ ಮೂಳೆ ಆಸೆಗೆ ಬರಲಾರಂಭಿಸಿದ ಕಾಡು ಹಂದಿಯೊಂದು, ನಂತರ ಅವರ ಮೇಲೆ ನಂಬಿಕೆ ಬೆಳೆದು ನಿತ್ಯ ಬರಲಾರಂಭಿಸಿದೆ.
11 ವರ್ಷಗಳಿಂದ ನಿತ್ಯ ಬರುವ ಈ ಹಂದಿ, ಈಗ ಅವರ ಮೆಚ್ಚಿನ ‘ಚಿನ್ನಿಪುಟ್ಟಿ’. ಕಾಡಿನಲ್ಲಿ ಅಲೆದಾಡುವ ಈ ಹಂದಿ, ಸಂಜೆ 5ರ ಸುಮಾರಿಗೆ ಎಲ್ಲಿದ್ದರೂ ಶೆಡ್ ಬಳಿಗೆ ಬಂದು ನಿಲ್ಲುತ್ತದೆ. ಅಷ್ಟರಲ್ಲಿ ಅನ್ನ ಸಿದ್ಧ ಮಾಡಿಕೊಂಡಿರುವ ರೂಬೆನ್, ಕರೆದು ಅನ್ನ ಕೊಡುತ್ತಾರೆ. ನಾಯಿ, ಬೆಕ್ಕುಗಳ ಜತೆಗೆ ಹಂದಿಯೂ ಅನ್ನ ಸೇವಿಸುತ್ತದೆ.
ಕುದರೆಮುಖದ ಕಾಡಿನಲ್ಲೊಬ್ಬ ಪ್ರಾಣಿ ಪ್ರೇಮಿ : ಅನ್ನ ಅರಸಿಕೊಂಡು ಬರುವ ಕಾಡು ಹಂದಿ
ರಾತ್ರಿ ಸುತ್ತಮುತ್ತ ಮಲಗುವ ಹಂದಿಗೆ ಬೆಳಿಗ್ಗೆ 4 ಗಂಟೆ ವೇಳೆಗೆ ಮತ್ತೊಮ್ಮೆ ರೂಬೆನ್ ಅನ್ನ ಬಡಿಸುತ್ತಾರೆ. ಅದನ್ನು ಸೇವಿಸಿ ಹೊರಡುವ ಹಂದಿ ದಿನವಿಡೀ ಕಾಡಿನಲ್ಲಿ ಸುತ್ತಾಡುತ್ತದೆ. ಸಂಜೆ 5ರ ಸುಮಾರಿಗೆ ಮತ್ತೆ ಹಾಜರಾಗುತ್ತದೆ. ರೂಬೆನ್ ಅವರ ಮನೆಯ ಬಳಿ ಜನರಿದ್ದರೆ ಬರಲು ಕೊಂಚ ಹಿಂದೇಟು ಹಾಕುತ್ತದೆ. ‘ಚಿನ್ನಿಪುಟ್ಟಿ ಬಾ’ ಎಂದ ಕೂಡಲೇ ಓಡೋಡಿ ಬಂದು ಅವರ ಹಿಂದೆಯೇ ಸುಳಿದಾಡುತ್ತದೆ.
ಮಕ್ಕಳಂತೆ ಅಕ್ಕರೆಯಿಂದ ಪ್ರಾಣಿಗಳ ಜತೆ ಕಾಲ ಕಳೆಯುವ ರೂಬೆನ್, ಇದಕ್ಕೆ ಯಾರೂ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಮದುವೆ- ಸಂಸಾರದಿಂದಲೂ ದೂರ ಉಳಿದಿದ್ದಾರೆ. ಈ ಹಂದಿಯ ಜತೆಗೆ ಮತ್ತೊಂದು ಹಂದಿಯೂ ಕಾಡಿನಿಂದ ಬಂದು ಅನ್ನು ತಿಂದು ಹೋಗುತ್ತಿತ್ತು. ಯಾರೋ ಕಿಡಿಗೇಡಿಗಳ ಹೊಡೆದು ತಿಂದರು. ಸಾಕಿದ್ದ 200ಕ್ಕೂ ಹೆಚ್ಚು ಮೊಲಗಳನ್ನೂ ಕೊಂದರು ಎಂದು ರೂಬೆನ್ ಬೇಸರಗೊಳ್ಳುತ್ತಾರೆ.
ದುಬಾರಿ ಅಕ್ಕಿಯಲ್ಲಿ ಪ್ರಾಣಿಗಳಿಗೆ ಊಟ
ರೂಬೆನ್ ಅವರ ಬಳಿ ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ಇವೆ. ಆದರೆ ಪಡಿತರ ಚೀಟಿ ಇಲ್ಲ. ರದ್ದಾಗಿರುವ ಪಡಿತರ ಚೀಟಿ ಪಡೆಯಲು ಪರದಾಡಿ ಸಾಕಾಗಿರುವ ಅವರು ಕೆ.ಜೆಗೆ ₹60 ರಿಂದ₹70 ದರದ ಅಕ್ಕಿಯನ್ನು ಅಂಗಡಿಗಳಿಂದ ಖರೀದಿಸಿ ತಂದು ಪ್ರಾಣಿಗಳಿಗೆ ಊಟ ಹಾಕುತ್ತಾರೆ. ದಿನಕ್ಕೆ ಆರು ಕೆ.ಜಿ ಅಕ್ಕಿ ಆರು ಕೆ.ಜಿ ಮೀನು ನಾಲ್ಕು ಕೆ.ಜಿ ಕೋಳಿ ಮಾಂಸ ತಂದು ನಾಯಿ ಬೆಕ್ಕುಗಳಿಗೆ ಊಟ ಬಡಿಸುತ್ತಾರೆ. ರೂಬೆನ್ ಅವರ ಈ ಪ್ರಾಣಿ ಪ್ರೀತಿ ಸುತ್ತಮುತ್ತಲ ಜನರಲ್ಲಿ ಅಪಾರ ಅಭಿಮಾನ ತಂದಿದೆ. ಯಾರೊಂದಿಗೂ ಹೆಚ್ಚಾಗಿ ಮಾತನಾಡದ ರೂಬೆನ್ ತನ್ನದೇ ಪ್ರಪಂಚದಲ್ಲಿ ಧನ್ಯತೆ ಕಂಡುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ‘ನನ್ನ ದುಡಿಮೆ ಒಂದೇ ಸಾಕಾಗುವುದಿಲ್ಲ. ಪ್ರಾಣಿಗಳ ಬಗ್ಗೆ ಕನಿಕರ ಇರುವ ಜನರೂ ಸಹಾಯ ಮಾಡುತ್ತಾರೆ. ಎರಡನ್ನೂ ಸೇರಿಸಿ ಈವರೆಗೆ ಪ್ರಾಣಿಗಳ ಹಸಿವು ನೀಗಿಸಿದ್ದೇನೆ’ ಎಂದು ರೂಬೆನ್ ಹೇಳುತ್ತಾರೆ.
ಕಾಡುಹಂದಿ ಬಿಟ್ಟು ಹೋಗುವುದು ಹೇಗೆ?
ಕುದುರೆಮುಖ ಕಬ್ಬಿಣದ ಅದಿರು ಕಂಪನಿ(ಕೆಐಒಸಿಎಲ್) ತನ್ನ ಒಡೆತನದಲ್ಲಿರುವ ಕುದುರೆಮುಖ ಟೌನ್ಶಿಪ್ ಸಹಿತ 285 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾಗಿದೆ. ಪ್ರಕ್ರಿಯೆಗಳು ಆರಂಭಗೊಂಡಿದ್ದು ಈ ಸುದ್ದಿ ರೂಬೆನ್ ಅವರಿಗೆ ಆಘಾತ ಉಂಟು ಮಾಡಿದೆ. ಅರಣ್ಯಕ್ಕೆ ಹಸ್ತಾಂತರವಾದರೆ ಈ ಜಾಗ ಖಾಲಿ ಮಾಡಬೇಕಾಗುತ್ತದೆ. ಹಾಗೇನಾದರೂ ಆದರೆ ಈ ಪ್ರಾಣಿಗಳ ಪಾಡೇನು ಎಂಬ ಚಿಂತೆ ಅವರನ್ನು ಕಾಡುತ್ತಿದೆ.
‘ನಾಯಿ ಬೆಕ್ಕುಗಳನ್ನು ಕರೆದೊಯ್ಯಬಲ್ಲೆ ಕಾಡು ಹಂದಿಯನ್ನು ಬಿಟ್ಟು ಹೋಗವುದು ಹೇಗೆ. ಅದು ನನ್ನನ್ನು ಹುಡುಕಿಕೊಂಡು ಬರಲು ಸಾಧ್ಯವೇ’ ಎಂದಾಗ ರೂಬೆನ್ ಅವರ ಕಣ್ಣಾಲಿಗಳು ತುಂಬಿಕೊಂಡವು.